ಬೆಂಗಳೂರು: ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದಗೋಪಾಲನ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ದರ್ಶಿತ್ ಈ ಬಾರಿಯ ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 98.5ರಷ್ಟು ಅಂಕ ಗಳಿಸಿದ್ದಾರೆ.
ಪರೀಕ್ಷೆ ಆರಂಭವಾಗುವುದಕ್ಕೆ ಎರಡು ದಿನ ಮೊದಲು ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಂದಲೇ ಪರೀಕ್ಷೆ ಬರೆದಿದ್ದರು.
ವಿಶೇಷ ಅನುಮತಿ ಮೇರೆಗೆ ಮೊದಲ ಕೆಲವು ಪರೀಕ್ಷೆಗಳನ್ನು ಆಸ್ಪತ್ರೆಯಿಂದಲೇ ಬರೆದಿದ್ದ ದರ್ಶಿತ್, ಮತ್ತೆ ಎರಡು ಪರೀಕ್ಷೆಗಳನ್ನು ಶಾಲೆಗೆ ಹೋಗಿ ಬರೆದಿದ್ದರು. ಕಾಲಿನ ನೋವು ತೀವ್ರಗೊಂಡಿದ್ದರಿಂದ ಉಳಿದ ಪರೀಕ್ಷೆಗಳನ್ನು ಮತ್ತೆ ಆಸ್ಪತ್ರೆಯಲ್ಲಿ ಬರೆದಿದ್ದರು.
‘ವರ್ಷದ ಆರಂಭದಿಂದಲೇ ಕ್ರಮಬದ್ಧವಾಗಿ ವ್ಯಾಸಂಗ ಮಾಡುತ್ತಿದ್ದೆ. ಟ್ಯೂಷನ್ಗೆ ಹೋಗುತ್ತಿರಲಿಲ್ಲ. ಸಮರ್ಥವಾಗಿ ಪರೀಕ್ಷೆ ಬರೆಯಬಲ್ಲೆ ಎಂಬ ಆತ್ವವಿಶ್ವಾಸ ಇತ್ತು. ಹೀಗಾಗಿಯೇ ಅಪಘಾತ ಸಂಭವಿಸಿದರೂ ವಿಚಲಿತನಾಗದೆ ಗರಿಷ್ಠ ಅಂಕ ಗಳಿಸಲು ಸಾಧ್ಯವಾಯಿತು’ ಎಂದು ದರ್ಶಿತ್ ತಿಳಿಸಿದರು.
ಇದೇ ಶಾಲೆಯ ವಿ.ವೈಭವ್ ಶೇ 97.8, ಎಸ್.ಅರವಿಂದ ಶೇ 97.5, ಶ್ರೇಯಾ ಮಂಡಿ ಶೇ97.2, ಶರಣ್ಯಾಮೋಹನ್ ಶೇ 96.8 ಅಂಕ ಗಳಿಸಿದ್ದಾರೆ. ಬ್ರಿಗೇಡ್ ಸ್ಕೂಲ್ ವಿದ್ಯಾರ್ಥಿಗಳಾದ ದೀಪಾಲಿ ಪ್ರಧಾನ್ ಶೇ 97.8, ಅಖಿಲಾ ವರ್ಮಾ ಶೇ 97.2, ಮಿಥಾಲಿ ಶರ್ಮಾ ಶೇ 96.6 ಅಂಕ ಗಳಿಸಿದ್ದಾರೆ.
ಕೆ.ಸಿ.ರೆಡ್ಡಿ ಮರಿ ಮೊಮ್ಮಗಳ ಸಾಧನೆ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಮರಿ ಮೊಮ್ಮಗಳು, ಹೆಬ್ಬಾಳದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ಕೆ.ಸಿ.ಸಂಯುಕ್ತಾರೆಡ್ಡಿ ಈ ಬಾರಿಯ ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 100ಕ್ಕೆ 99 ಅಂಕ ಪಡೆದು ಒಟ್ಟಾರೆ ಶೇ 91ರಷ್ಟು ಅಂಕ ಗಳಿಸಿದ್ದಾರೆ.