ರಾಮನಗರ: ‘ಮುಖ್ಯಮಂತ್ರಿ ಪತ್ನಿ ಅನಿತಾ ಕುಮಾರಸ್ವಾಮಿ ಸರ್ಕಾರಿ ಕೆಲಸಗಳಲ್ಲಿ ನೇರವಾಗಿ ಭಾಗಿಯಾಗುತ್ತಿದ್ದು, ಜಿಲ್ಲೆಯ ಕಾಮಗಾರಿಗಳೆಲ್ಲವನ್ನೂ ಪ್ರಕಾಶ, ಜಗದೀಶ ಎಂಬ ಇಬ್ಬರು ಗುತ್ತಿಗೆದಾರರಿಗೇ ಕೊಡಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಆರೋಪಿಸಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯಲ್ಲಿ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಪರ ಶನಿವಾರ ಮತಯಾಚನೆ ಮಾಡಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು.
‘ಈ ಇಬ್ಬರು ಗುತ್ತಿಗೆದಾರರಿಗೆ ಮುಖ್ಯಮಂತ್ರಿ ಕುಟುಂಬ ₹350 ಕೋಟಿ ಮೊತ್ತದ ಕಾಮಗಾರಿ ಕೊಡಿಸಿದೆ. ಈ ಬಗ್ಗೆ ನನ್ನಲ್ಲಿ ದಾಖಲೆ ಇದೆ. ಅವರೆಷ್ಟು ಪ್ರಾಮಾಣಿಕರು, ಯಾರ ಯಾರ ಬಳಿ ಎಷ್ಟೆಷ್ಟು ಹಣ ವಸೂಲಿ ಮಾಡಿದ್ದಾರೆ ಎಂಬುದೂ ತಿಳಿದಿದೆ’ ಎಂದು ಟೀಕಿಸಿದರು.