ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದಶಿವಕುಮಾರ ಸ್ವಾಮೀಜಿ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರುಗಳಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.
ಶಿವಕುಮಾರ ಸ್ವಾಮೀಜಿ ಹುಟ್ಟೂರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಮತ್ತುಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳವಾದ ರಾಮನಗರದ ಬಿಡದಿ ತಾಲ್ಲೂಕಿನ ಬಾಣಂದೂರುಗಳಲ್ಲಿ ತಲಾ ₹ 25 ಕೋಟಿ ವೆಚ್ಚದಲ್ಲಿ ಈ ಕೇಂದ್ರಗಳು ತಲೆ ಎತ್ತಲಿವೆ. ಇದರಲ್ಲಿ ಗ್ರಾಮಗಳ ಅಭಿವೃದ್ಧಿಯೂ ಸೇರಿದೆ.
ಮೈಸೂರಿನ ಸುತ್ತೂರುಮಠದಲ್ಲಿನ ಕರಕುಶಲ ಕಾರ್ಮಿಕರಿಗೆ ಮಾರುಕಟ್ಟೆ ವ್ಯವಸ್ಥೆ(ಅರ್ಬನ್ ಹಾತ್) ಕಲ್ಪಿಸಲು ಹಾಗೂ ಉನ್ನತೀಕರಿಸಲು ₹ 5 ಕೋಟಿ ಅನುದಾನ ನೀಡಲಾಗಿದೆ. ಈ ಕಾರ್ಯಕ್ಕೆಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾರ್ಗದರ್ಶನ ಮಾಡಲಿದ್ದಾರೆ.
ಸದ್ಯ ನಿಂತಿರುವ ಜಿಲ್ಲಾ ಜಾನಪದ ಜಾತ್ರೆಗಳನ್ನು ಆರಂಭಿಸಲು ಯೋಜಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಜಾತ್ರೆ ನಡೆಸಿ, ಜನಪದಿಯ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಲು ₹ 2 ಕೋಟಿ ನೀಡಲಾಗಿದೆ. ಹಾಸ್ಯನಟ ದಿವಂಗತ ನರಸಿಂಹರಾಜು ಸ್ಮರಣಾರ್ಥ ತುಮಕೂರಿನ ತಿಪಟೂರಿನಲ್ಲಿ ಸಭಾಭವನ ನಿರ್ಮಾಣಕ್ಕೆ ₹ 2 ಕೋಟಿ ಕೊಡಲಾಗಿದೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 5 ಕೋಟಿ,ಕೊಡವ ಸಮಾಜ ಅಭಿವೃದ್ಧಿಗೆ ₹ 10 ಕೋಟಿ,ಕರಗ ಆಚರಿಸುವ 139 ಸಂಘ–ಸಂಸ್ಥೆಗಳಿಗೆ, ತುಮಕೂರಿನ ತುರುವೇಕೆರೆ ತಾಲ್ಲೂಕಿನ ಆದಿಶಕ್ತಿ ಮಾತೆಯರ ವೃದ್ಧಶ್ರಾಮ, ರಾಜ್ಯ ಕುಂಚಿಟಿಗರ–ಒಕ್ಕಲಿಗರ ಸಂಘಕ್ಕೆ ತಲಾ ₹ 2 ಕೋಟಿ ಮೀಸಲಿಡಲಾಗಿದೆ.
ಕೆಂಗಲ್ ಹನುಮಂತಯ್ಯ ಹಾಸ್ಟೆಲ್ ಟ್ರಸ್ಟ್ಗೆ ₹ 5 ಕೋಟಿ, ದಾವಣಗೆರೆಯ ಮಲೇಬೆನ್ನೂರಿನ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ಗೆ ₹ 1 ಕೋಟಿ ಅನುದಾನ ನೀಡಲು ಯೋಜಿಸಲಾಗಿದೆ.
ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ₹ 1 ಕೋಟಿ ನೀಡಲು ನಿರ್ಧರಿಸಲಾಗಿದೆ. ಮಂಡ್ಯದ ಕರ್ನಾಟಕ ಸಂಘಕ್ಕೆ ₹ 1 ಕೋಟಿ ಕೊಡಲಾಗಿದೆ.