ನವದೆಹಲಿ: ಅನರ್ಹ ಶಾಸಕರ ಮೇಲ್ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ತುರ್ತು ವಿಚಾರಣೆಗೆ ನಿರಾಕರಿಸಿದೆ.
ಜುಲೈ 26 ಹಾಗೂ ಆಗಸ್ಟ್ 1 ರಂದು ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ 17 ಜನ ಅನರ್ಹ ಶಾಸಕರು ಅರ್ಜಿ ಸಲ್ಲಿಸಿದ್ದರು.
ಈ ಹಿಂದೆಯೂ ಒಮ್ಮೆ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಪೀಠದೆದುರು ಅನರ್ಹರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಮನವಿ ಸಲ್ಲಿಸಿದ್ದರು. ಆದರೆ, ರಿಜಿಸ್ಟ್ರಾರ್ರಿಂದಲೇ ವಿಚಾರಣೆಗೆ ಲಿಸ್ಟ್ ಆಗಲಿ ಎಂದು ಪೀಠ ತಿಳಿಸಿತ್ತು.
ಸೋಮವಾರ ಕಿರಿಯ ವಕೀಲರು ಮನವಿ ಸಲ್ಲಿಸಿದ್ದರು.
ಅನರ್ಹಗೊಂಡಿರುವ ಶಾಸಕರು ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸುವಂತಿಲ್ಲ ಹಾಗೂ 15ನೇವಿಧಾನಸಭೆ ಅವಧಿ (2023 ರವರೆಗೆ) ಮುಗಿಯುವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹಿಂದಿನ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ತೀರ್ಪು ನೀಡಿದ್ದರು.
ಅನರ್ಹಗೊಂಡಿರುವ ಅರ್ಜಿ ಇತ್ಯರ್ಥವಾಗದೇ ಇರುವುದರಿಂದ ಅವರು ತಕ್ಷಣಕ್ಕೆ ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವ ಸ್ಥಾನ ಹೊಂದುವಂತಿಲ್ಲ. ಒಂದು ವೇಳೆ ಉಪಚುನಾವಣೆ ಘೋಷಣೆಯಾದರೆ ಸ್ಪರ್ಧೆ ಮಾಡುವಂತೆಯೂ ಇಲ್ಲ. ಹೀಗಾಗಿ ಅನರ್ಹಗೊಂಡ 17 ಶಾಸಕರ ಸ್ಥಿತಿ ಸದ್ಯಕ್ಕೆ ಅತಂತ್ರವಾಗಿಯೇ ಮುಂದುವರಿಯಲಿದೆ.