ಮೈಸೂರು: ‘ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಸರಿಯಾದ ಕ್ರಮ’ ಎಂದು ಇಲ್ಲಿಗೆ ಬಂದಿರುವ ಕಾಶ್ಮೀರದ ಬಹುತೇಕ ಯುವಕರು ಅಭಿಪ್ರಾಯಪಟ್ಟರು.
ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಗೃಹ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ನೆಹರು ಯುವ ಕೇಂದ್ರದ ವತಿಯಿಂದ ಇಲ್ಲಿನ ಯೂತ್ ಹಾಸ್ಟೆಲ್ನಲ್ಲಿ ಶುಕ್ರವಾರ ನಡೆದ ‘ಕಾಶ್ಮೀರಿ ಯುವಜನ ವಿನಿಮಯ ಕಾರ್ಯಕ್ರಮ’ದಲ್ಲಿ ಭಾಗಿಯಾಗಿದ್ದವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಆರೀಫ್ ಮುಸ್ತಾಫ್, ‘370ನೇ ವಿಧಿಯನ್ನು ರದ್ದುಗೊಳಿಸಿದ್ದು ಸರಿಯಾದ ಕ್ರಮ ಎಂದು ಈಗ ಅನ್ನಿಸುತ್ತಿದೆ. ಕ್ರಮೇಣ ಹೊಸ ಪರಿಸ್ಥಿತಿಗೆ ಜನರು ಹೊಂದಿಕೊಳ್ಳುತ್ತಿದ್ದಾರೆ. ಕಾಶ್ಮೀರವೂ ಕರ್ನಾಟಕದಂತೆ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನವನ್ನು ಬೆಂಬಲಿಸುತ್ತೇವೆ’ ಎಂದರು.
ಮಾರ್ಚ್ 11ರವರೆಗೆ ಇಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಶ್ಮೀರದ 132 ಯುವಕ–ಯುವತಿಯರು ಭಾಗವಹಿಸಲಿದ್ದಾರೆ. ಸದ್ಯ, 88 ಮಂದಿ ಬಂದಿದ್ದು, ಇಲ್ಲಿನ ಸಂಸ್ಕೃತಿ, ಕಲೆಗಳನ್ನು ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.