ಬಳ್ಳಾರಿ: ಜಿಲ್ಲೆಯಲ್ಲಿ ನರಭಕ್ಷಕ ಚಿರತೆ ಮತ್ತು ಕರಡಿಗಳ ದಾಳಿಗೆ ಹಳ್ಳಿ ಜನ ಬೆಚ್ಚಿಬೀಳುತ್ತಿದ್ದಾರೆ. ದಾಳಿಗೆ ಸಿಲುಕಿ ಕ್ರೂರವಾಗಿ ಸಾವಿಗೀಡಾಗುತ್ತಿರುವ ಜನರೊಂದಿಗೆ, ತೀವ್ರವಾಗಿ ಗಾಯಗೊಂಡು ಬದುಕುಳಿದ ಜನ ಇನ್ನೊಂದೆಡೆ ಇದ್ದಾರೆ.
ಐದು ವರ್ಷಗಳಲ್ಲಿ ಚಿರತೆ ದಾಳಿಯಿಂದ ಸಂಡೂರಿನಲ್ಲಿ ಐವರು ಹಾಗೂ ಹೊಸಪೇಟೆಯಲ್ಲಿ ಇಬ್ಬರು, ಕೂಡ್ಲಿಗಿಯಲ್ಲಿ ಕರಡಿ ದಾಳಿ ಯಿಂದ ಒಬ್ಬರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಾಡಂಚಿನ ಹೊಲಗಳಿಗೆ ರೈತರು ದನ, ಕುರಿ ಮೇಯಿಸಲು, ಬೆಳೆಗೆ ನೀರು ಹಾಯಿಸಲು ಹೋದಾಗಲೇ ಹೊತ್ತು–ಗೊತ್ತಿಲ್ಲದೆ ದುರ್ಘಟನೆಗಳು ನಡೆದಿವೆ. ನಡೆಯುತ್ತಿವೆ.
ಕಾಡಂಚಿನಲ್ಲಷ್ಟೇ ಕಾಣಿಸುತ್ತಿದ್ದ ಪ್ರಾಣಿಗಳು ಹಳ್ಳಿಗಳ ಒಳಕ್ಕೂ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಂಪ್ಲಿ ತಾಲ್ಲೂಕಿನ ಶ್ರೀರಾಮರಂಗಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿರತೆ ಓಡಾಡಿದ ಬಳಿಕ ಶಾಲೆಗೆ ಅಘೋಷಿತ ರಜೆ ನೀಡಲಾಗಿತ್ತು. ಮಕ್ಕಳೂ ಚಿರತೆಗಳನ್ನು ನೋಡಿ ಕಂಗಾಲಾಗಿದ್ದಾರೆ.
ಪ್ರಾಣಿಗಳನ್ನು ಬೋನಿನಲ್ಲಿ ಸೆರೆ ಹಿಡಿದು ಸ್ಥಳಾಂತರಿಸುವ, ಡ್ರೋನ್ ಕ್ಯಾಮೆರಾ ಮೂಲಕ ಪತ್ತೆ ಹಚ್ಚುವ ಕಾರ್ಯಾಚರಣೆ ಬಳ್ಳಾರಿ, ಹೊಸಪೇಟೆ ಮತ್ತು ದರೋಜಿ ಅರಣ್ಯವಲಯದಲ್ಲಿ ನಿರಂತರವಾಗಿ ಸಾಗಿದ್ದು, ಅರಣ್ಯಾಧಿಕಾರಿಗಳು ಯತ್ನಿಸುತ್ತಿದ್ದಾರೆ.
ಮೊಸಳೆ ದಾಳಿಗೆ 6 ಬಲಿ
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಐದು ವರ್ಷಗಳಲ್ಲಿ ಕ್ರಮವಾಗಿ ನಾಲ್ಕು ಮತ್ತು ಇಬ್ಬರು ಮೊಸಳೆ ದಾಳಿಗೆ ಬಲಿಯಾಗಿದ್ದಾರೆ. ಕೃಷ್ಣಾ ನದಿ ತೀರದಲ್ಲಿ ಈ ಘಟನೆಗಳು ಸಂಭವಿಸಿವೆ. ತಾಳಿಕೋಟೆ ತಾಲ್ಲೂಕಿನ ಬಿಳೇಬಾವಿ ಬಳಿ ಎರಡು ತಿಂಗಳ ಹಿಂದಷ್ಟೇ ಯುವಕನೊಬ್ಬ ಚಿರತೆ ದಾಳಿಗೆ ಸಿಲುಕಿ, ಗಾಯಗೊಂಡಿದ್ದ.