ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಗುರುವಾರ ಶಮಂತ್ ಗೌಡ (4) ಚಿರತೆ ದಾಳಿಗೆ ಬಲಿ ಆಗಿದ್ದಾನೆ.
ಶಮಂತ್, ತನ್ನ ಅಜ್ಜಿಯ ಜತೆ ಹಸುವನ್ನು ಮೇಯಿಸಲು ಗ್ರಾಮದ ಹೊರವಲಯದ ತೋಪಿಗೆ ಹೋಗಿದ್ದ. ಸಂಜೆ ಮನೆಗೆ ಮರಳುವಾಗ ಹಸುಗಳನ್ನು ಹಿಡಿದುಕೊಂಡು ಅಜ್ಜಿ ಮುಂದೆ ಸಾಗಿದ್ದಾರೆ. ಶಮಂತ್ ಆಟ ಆಡುತ್ತ ನಿಧಾನವಾಗಿ ಬರುತ್ತಿದ್ದ ವೇಳೆ ಚಿರತೆ ಹಿಂಬದಿಯಿಂದ ದಾಳಿ ನಡೆಸಿದೆ. ನೂರು ಮೀಟರ್ ದೂರ ಬಾಲಕನನ್ನು ಎಳೆದುಕೊಂಡು ಹೋಗಿದೆ.
ಇದನ್ನು ನೋಡಿದ ಆತನ ಅಜ್ಜಿ ಮತ್ತು ದಾರಿಹೋಕರು ಕಿರುಚಾಡಿದ್ದಾರೆ. ಚಿರತೆ ಅಲ್ಲಿಂದ ಮರೆಯಾಗಿದ್ದು ಬಾಲಕ ಮೃತಪಟ್ಟಿದ್ದಾನೆ. ಶಮಂತ್, ಅಜ್ಜಿ ಮತ್ತು ತಂದೆ, ತಾಯಿಯ ರೋದನ ಅಪಾರವಾಗಿತ್ತು. ಸ್ಥಳದಲ್ಲಿದ್ದವರು ಬಾಲಕನ ಮುಖ ನೋಡಿ ಮರುಗಿದರು.
ದುರ್ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ತುಮಕೂರು ತಾಲ್ಲೂಕಿನ ಹೆಬ್ಬೂರಿನಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಪದೇ ಪದೇ ಚಿರತೆ ದಾಳಿ ಪ್ರಕರಣಗಳು ಮರುಕಳಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿದರು.
ಇತ್ತೀಚೆಗೆ ಕುಣಿಗಲ್ ತಾಲ್ಲೂಕಿನ ಬನ್ನಿಕುಪ್ಪೆ ಮತ್ತು ಮಳಲವಾಡಿ ಗ್ರಾಮಗಳಲ್ಲಿ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದರು. ಕುಣಿಗಲ್, ಗುಬ್ಬಿ, ತುರುವೇಕೆರೆ ತಾಲ್ಲೂಕುಗಳಲ್ಲಿ ಚಿರತೆ ದಾಳಿಗಳು ವ್ಯಾಪಕವಾಗುತ್ತಿದ್ದು ನಾಗರಿಕರು ಆತಂಕಗೊಂಡಿದ್ದಾರೆ.