ಬೆಂಗಳೂರು: ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿರುವುದು ಖಂಡನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಅವರು ಜವಾಬ್ದಾರಿ ಅರಿತು ಮಾತನಾಡಬೇಕಿತ್ತು. ಇಂತಹ ಬೇಜವಾಬ್ದಾರಿಯ ಹೇಳಿಕೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಮಣ್ಣು ಪಾಲಾಗುತ್ತದೆ ಎಂಬ ಕನಿಷ್ಠ ತಿಳಿವಳಿಕೆ ಅವರಿಗೆ ಇಲ್ಲದಿರುವುದು ದುರ್ದೈವದ ಸಂಗತಿ ಎಂದು ಸವದಿ ತಿಳಿಸಿದ್ದಾರೆ.
ದೌರ್ಜನ್ಯ ಸಾಮಾಜಿಕ ಪಿಡುಗು. ಅದನ್ನು ಮಟ್ಟ ಹಾಕಲು ಪಕ್ಷಾತೀತವಾಗಿ ಹೋರಾಡಬೇಕಾಗಿದೆ. ಅದನ್ನು ಬಿಟ್ಟು ರಾಜಕೀಯ ಪ್ರೇರಿತ ಹೇಳಿಕೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಚೋದನಕಾರಿ ಹೇಳಿಕೆಯಿಂದ ಸಮಸ್ಯೆ ಬಿಗಡಾಯಿಸುತ್ತದೆಯೇ ಹೊರತು ಪರಿಹಾರವಾಗುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಿಂಸಾಚಾರದಲ್ಲಿ ನಂಬಿಕೆ ಹೊಂದಿದ್ದಾರೆ ಎಂದು ರಾಹುಲ್ಗಾಂಧಿ ಹೇಳಿದ್ದಾರೆ. ಸಿಖ್ಖರ ನರಮೇಧ ನಡೆಸಿದ್ದು ಯಾರು ಎಂಬುದನ್ನು ಅವರು ನೆನಪಿಸಿಕೊಂಡರೆ ಹಿಂಸಾವಾದಿಗಳು ಯಾರು ಎಂಬ ಸತ್ಯ ಬಯಲಾಗುತ್ತದೆ ಎಂದಿದ್ದಾರೆ.