ಮಂಡ್ಯ. ಮೈಸೂರು:ನಾಡ ಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆ ಪಯಣಕ್ಕೆ ಭಾನುವಾರ ನಾಗರಹೊಳೆ ದ್ವಾರದ ಬಳಿಯಲ್ಲೇ ಚಾಲನೆ ನೀಡಲಾಯಿತು.
ವೀರನಹೊಸಹಳ್ಳಿ ಪ್ರದೇಶದಲ್ಲಿರುವ ನಾಗರ ಹೊಳೆ ದ್ವಾರದಲ್ಲಿ ಸಿಂಗಾರಗೊಂಡಿದ್ದ ಗಜ ಪಡೆಗೆ ದೀಪ ಬೆಳಗಿ, ಪುಷ್ಪ ಸಮರ್ಪಣೆಯೊಂದಿಗೆ ಪೂಜೆ ಸಲ್ಲಿಸಲಾಯಿತು. ನಾಲ್ಕೈದು ವರ್ಷಗಳಿಂದ ನಾಗಾಪುರ ಹಾಡಿ ಸಮೀಪ ಆಶ್ರಮ ಶಾಲೆ ಬಳಿ ಕಾರ್ಯಕ್ರಮ ನಡೆಯುತ್ತಿತ್ತು.
ಶಾಸಕ ಎಚ್.ವಿಶ್ವನಾಥ್ ಸೂಚನೆ ಮೇರೆಗೆ ಹಿಂದಿನ ಸಂಪ್ರದಾಯ ಮುಂದುವರಿಸಲಾಗಿದೆ. ದ್ವಾರದ ಸಮೀಪ ಅಣಿಯಾಗಿತ್ತು ಕ್ಯಾಪ್ಟನ್ ಅರ್ಜುನ ಪಡೆ. ಅರ್ಜುನ ನೇತೃತ್ವದ ಐದು ಆನೆಗಳಿಗೆ ಪೂಜೆ ನೆರವೇರಿಸಲಾಯಿತು.
ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಅರ್ಜುನ(54), ವರಲಕ್ಷ್ಮಿ(ಹೆಣ್ಣಾನೆ, 62), ವಿಕ್ರಮ(45), ಚೈತ್ರ(47), ವರ್ಷ(ಹೆಣ್ಣಾನೆ), ಧನಂಜಯ(25) ಆನೆಗಳು ಪಯಣ ಬೆಳೆಸಿದವು. ಧನಂಜಯ ಮೊದಲಬಾರಿಗೆ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿರುವ ಆನೆ.
ಕಾರ್ಯಕ್ರಮದಲ್ಲಿ ಶಾಸಕ ಎಚ್.ವಿಶ್ವನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಸಚಿವ ಸಾರಾ ಮಹೇಶ್, ಮಾಜಿ ಸಚಿವ ತನ್ವೀರ್ ಸೇಠ್ ಮತ್ತಿತರ ಗಣ್ಯರು ಭಾಗಿಯಾಗಿ, ದೀಪ ಬೆಳಗಿ ಗಜಪಯಣಕ್ಕೆ ಚಾಲನೆ ನೀಡಿದರು.
ಮೈಸೂರು ದಸರಾ ಗಜಪಡೆ ಪಯಣಕ್ಕೆ ಶಾಸಕ ಎಚ್.ವಿಶ್ವನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಸಚಿವ ಸಾರಾ ಮಹೇಶ್, ಮಾಜಿ ಸಚಿವ ತನ್ವೀರ್ ಸೇಠ್ ಮತ್ತಿತರ ಗಣ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.