ಕಲಬುರ್ಗಿ: ಲೋಕಸಭಾ ಚುನಾವಣೆಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಲ್ಲೇ ರಣಕಹಳೆ ಮೊಳಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಖರ್ಗೆ ಅವರಿಗೆ ಸವಾಲು ಹಾಕುತ್ತಾರೆ ಎಂಬ ಈ ಭಾಗದ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು.
ಡಾ.ಉಮೇಶ ಜಾಧವ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಖರ್ಗೆ ವಿರುದ್ಧ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಇವರೇ ನಮ್ಮ ಅಭ್ಯರ್ಥಿ ಎಂದು ಪರಿಚಯಿಸುತ್ತಾರೆ ಎಂದು ಕಾರ್ಯಕರ್ತರು ನಿರೀಕ್ಷಿಸಿದ್ದರು.
ಮೋದಿ ತಮ್ಮ ಭಾಷಣದಲ್ಲಿ ಖರ್ಗೆ ಆಗಲಿ, ಜಾಧವ ಹೆಸರುಗಳನ್ನು ಪ್ರಸ್ತಾಪಿಸಲಿಲ್ಲ. ಅವರ ಬಗ್ಗೆ ಏನನ್ನೂ ಹೇಳಲಿಲ್ಲ. ಇಷ್ಟೇ ಅಲ್ಲ, ‘ಕಲಬುರ್ಗಿ ಜಿಲ್ಲೆ’ ಎಂದು ಮಾತನಾಡಿದರೇ ಹೊರತು ‘ಕಲಬುರ್ಗಿ ಲೋಕಸಭಾ ಕ್ಷೇತ್ರ’ ಎಂದು ಎಲ್ಲೂ ಹೇಳಲಿಲ್ಲ. ಮೋದಿ ಈ ನಡೆ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿತು.