ಬೆಳಗಾವಿ:'ಇನ್ನೊಂದು ಅವಧಿಗೆ ರಾಜ್ಯಸಭಾ ಸ್ಥಾನ ಕೇಳಿದ್ದೇನೆ, ರಮೇಶ ಕತ್ತಿ ಅವರೂ ಕೇಳಿದ್ದಾರೆ. ಕೇಳಿರುವುದರಲ್ಲಿ ತಪ್ಪೇನಿಲ್ಲ. ಯಾರಿಗೆ ನೀಡಬೇಕು ಎನ್ನುವುದನ್ನು ಪಕ್ಷ ನಿರ್ಧರಿಸಲಿದೆ' ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಹತ್ತಾರು ಜನ ಎಂ.ಎಲ್.ಎ ಟಿಕೆಟ್ ಕೇಳಿದ್ಹಂಗೆ ಇದನ್ನೂ ಕೇಳಿದ್ದಾರೆ. ಆದರೆ, ಯಾವುದೇ ಲಾಬಿ ಮಾಡಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಲಾಬಿ ಎನ್ನುವುದು ಇಲ್ಲವೇ ಇಲ್ಲ' ಎಂದರು.
'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಯತ್ನ ನಡೆದಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ತಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಚಿಕ್ಕೋಡಿ ಲೋಕಸಭಾ ಟಿಕೆಟ್ ನಾನೂ ಕೇಳಿದ್ದೆ. ಆದರೆ, ಸಿಗಲಿಲ್ಲ' ಎಂದರು.