ರಬಕವಿ ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಜಲಾಶಯದ ಗೇಟ್ ದುರಸ್ತಿಯ ವೇಳೆ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿದೆ. ಇದರಿಂದ ಜಲಾಶಯದಲ್ಲಿ ಅಂದಾಜು 1.5 ಟಿಎಂಸಿ ಅಡಿಯಷ್ಟು ನೀರು ಕಡಿಮೆಯಾಗಿದೆ.
ನವೆಂಬರ್ 28ರಂದು ಜಲಾಶಯದಲ್ಲಿ ಸಾಮರ್ಥ್ಯಕ್ಕೂ ಹೆಚ್ಚು ನೀರು ಸಂಗ್ರಹವಾಗಿದ್ದು, 11ನೇ ನಂಬರ್ ಗೇಟ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿದ್ದು, ಅದನ್ನು ದುರಸ್ತಿ ಪಡಿಸಿದರೂ ಗೇಟ್ ಸರಿಯಾಗಿ ಕುಳಿತುಕೊಳ್ಳದೇ ನೀರು ನದಿಗೆ ಹರಿದುಹೋಗಿದೆ ಎನ್ನಲಾಗಿದೆ.
ನೀರು ನದಿಯಲ್ಲಿ ಹರಿದು ಹೋದ ಪರಿಣಾಮ ಜಲಾಶಯದಲ್ಲಿ ಐದು ಅಡಿಯಷ್ಟು ನೀರು ಖಾಲಿಯಾಗಿದೆ. ಇದರಿಂದ ಬೇಸಿಗೆಯಲ್ಲಿ ಮತ್ತೆ ನೀರಿನ ಅಭಾವ ಉಂಟಾಗಬಹುದು ಎಂದು ಈ ಭಾಗದ ಜನರು ಆತಂಕಗೊಂಡಿದ್ದಾರೆ.
‘ಈಗ ಗೇಟ್ ಸರಿಯಾಗಿ ಕೂರಿಸಲಾಗಿದೆ. ನೀರು ಜಲಾಶಯದಿಂದ ಹೊರಗೆ ಹರಿದು ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಜಲಾಶಯದಲ್ಲಿ 5 ಟಿಎಂಸಿ ಅಡಿ ನೀರು ಇರಬೇಕಿತ್ತು. ಆದರೆ 4.30 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇನ್ನೂ ಒಳಹರಿವು ಇದ್ದು, ಜಲಾಶಯದ ಸಾಮರ್ಥ್ಯದಷ್ಟು ನೀರು ಇನ್ನೊಂದು ವಾರದಲ್ಲಿ ತುಂಬಿಕೊಳ್ಳಲಿದೆ. ಹೀಗಾಗಿ ನದಿ ತೀರದ ಜನರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ’ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಎಂಜಿನಿಯರ್ ವಿ.ಎನ್.ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.