ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಯಕಿ ಎಂಬುದು ರಂಗನಾಯಕಮ್ಮ ಅವರಿಗೆ ಅನ್ವರ್ಥನಾಮ

Last Updated 10 ಜೂನ್ 2019, 5:21 IST
ಅಕ್ಷರ ಗಾತ್ರ

ಇವರ ಹೆಸರು ರಂಗನಾಯಕಮ್ಮ. ಅರ್ಧ ಶತಮಾನಕ್ಕೂ ಮಿಕ್ಕಿ ರಂಗದ ಮೇಲೆ ನಾಯಕಿಯಾಗಿ ಮೆರೆದ ಇವರಿಗೆ ಇದು ಅನ್ವರ್ಥನಾಮ. ಹುಟ್ಟಿದಾಗ ತಂದೆ ತಾಯಿ ಇಟ್ಟ ಹೆಸರಲ್ಲ. ಅವರು ನಿರ್ಮಲ ಎಂದು ಕರೆದಿದ್ದರು. ಎಂಟು ವರ್ಷದ ಬಾಲಕಿ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪೆನಿಯನ್ನು ಬಾಲನಟಿ(ಟ)ಯಾಗಿ ಸೇರಿದರು. ಬಾಲಕಿಯ ಚುರುಕುತನ, ನಾಟಕದ ಬದ್ಧತೆ ಗಮನಿಸಿ ಸ್ವತಃ ಸುಬ್ಬಯ್ಯ ನಾಯ್ಡು ಅವರೇ, ’ನೀನು ರಂಗದ ಮೇಲೆ ನಾಯಕಿ ಆಗು. ಇನ್ನು ಮುಂದೆ ನಿನ್ನ ಹೆಸರು ರಂಗನಾಯಕಿ’ ಎಂದು ಹರಸಿದರು.

ಅವರ ಹಾರೈಕೆ ಸುಳ್ಳಾಗಲಿಲ್ಲ. ಕನ್ನಡದ ಹಲವು ಹೆಸರಾಂತ ನಾಟಕ ಕಂಪೆನಿಗಳು ಹಾಗೂ ಗ್ರಾಮೀಣ ರಂಗಭೂಮಿಯಲ್ಲಿ ಅರ್ಧ ಶತಮಾನಕ್ಕೂ ಮಿಕ್ಕಿದ ಕಾಲ ಎಲ್ಲ ಪಾತ್ರಗಳಲ್ಲೂ ಮನೋಜ್ಞವಾಗಿ ಅಭಿನಯಿಸಿ ನಿಜ ಅರ್ಥದ ರಂಗನಾಯಕಿಯೇ ಆದರು.

೧೯೪೦ರಲ್ಲಿ ಬೆಂಗಳೂರಿನಲ್ಲಿ ಟಿ.ಕೇಶವನ್- ಶಾರದಮ್ಮ ದಂಪತಿಗೆ ಜನಿಸಿದ ನಿರ್ಮಲ ರಂಗ ಪ್ರವೇಶಿಸಿದ್ದು ಸಂಗೀತದ ಮೂಲಕ. ತಂದೆಯೇ ಮೂಲ ಪ್ರೇರಣೆ. ಶಾಲೆಯಲ್ಲಿ ಸಂಗೀತ ಹೇಳಿಕೊಡುತ್ತಿದ್ದ ಕೇಶವನ್ ತಮ್ಮ ಪತ್ನಿ ತೀರಿ ಹೋದಮೇಲೆ ಮೂವರು ಮಕ್ಕಳನ್ನು ಕಟ್ಟಿಕೊಂಡು ನಾಟಕ ಕಂಪೆನಿಗೆ ನಡೆದುಬಿಟ್ಟರು. ೨-೩ ವರ್ಷ ಕಳೆದ ಮೇಲೆ ಮಗನ ವಿದ್ಯಾಭ್ಯಾಸಕ್ಕೆ ಅನುವಾಗಲಿ ಎಂದು ಮತ್ತೆ ಬೆಂಗಳೂರಿಗೆ ವಾಪಸ್ ಬಂದರಾದರೂ, ರಂಗನಾಯಕಮ್ಮ ಮಾತ್ರ ಕಂಪೆನಿಯಲ್ಲೇ ಉಳಿದರು. ಮುಂದೆ ರಂಗನಾಯಕಮ್ಮನ ತಮ್ಮನೂ ನಾಟಕ ಕಂಪೆನಿಗೆ ಮರಳಿದರು. ಅವರು ಬೇರಾರೂ ಅಲ್ಲ, ಚಿತ್ರರಂಗದಲ್ಲಿ ಹೆಸರು ಮಾಡಿರುವ ಡಿಂಗ್ರಿ ನಾಗರಾಜ್.
ಸುಬ್ಬಯ್ಯ ನಾಯ್ಡು ಕಂಪೆನಿಯ ಬೇಡರ ಕಣ್ಣಪ್ಪ, ಕೃಷ್ಣಲೀಲೆ, ಭೂಕೈಲಾಸ, ಜಗಜ್ಯೋತಿ ಬಸವೇಶ್ವರ, ಭಕ್ತ ಅಂಬರೀಶ ಮುಂತಾದ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲಿ ಅಭಿನಯಿಸಿದ ರಂಗನಾಯಕಮ್ಮ ಒಂದು ವರ್ಷದ ನಂತರ ಆ ಕಂಪೆನಿ ತೊರೆದು ಗುಬ್ಬಿ ವೀರಣ್ಣ ನಾಟಕ ಕಂಪೆನಿ ಸೇರಿದರು. ಮುಂದಿನ ೨೫ವರ್ಷಗಳ ಕಾಲ ಗುಬ್ಬಿ ವೀರಣ್ಣ ಕಂಪೆನಿಯೇ ಅವರ ಅಖಾಡ. ಬಾಲ ಪಾತ್ರಗಳಿಂದ ನಾಯಕಿ, ಖಳನಾಯಕಿ, ತಾಯಿ ಪಾತ್ರದವರೆಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದರು. ತಂದೆಯ ಗುರು ಸ್ಥಾನವನ್ನು ಇಲ್ಲಿ ಪಿಟೀಲು ಶಂಕರಯ್ಯ ತುಂಬಿದ್ದರು. ಈ ಮಧ್ಯೆ ನಟ ಹಾಗೂ ಸಂಘಟಕ ಕೆ.ನಂಜಪ್ಪ ಅವರನ್ನು ರಂಗನಾಯಕಮ್ಮ ವರಿಸಿದರು.

ನಟಿಯಾಗಿ ಹೆಸರು ಮಾಡಿದ ಹಲವರು ಕಾಣುವ ದೊಡ್ಡ ಕನಸು ಸ್ವಂತ ನಾಟಕ ಕಂಪೆನಿ ಮಾಡಬೇಕೆಂಬುದು! ಅದೇ ಆಸೆ ಹೊತ್ತು ಗುಬ್ಬಿ ಕಂಪೆನಿ ತೊರೆದು ಬಂದ ರಂಗನಾಯಕಮ್ಮ ಪತಿಯೊಂದಿಗೆ ಲೋಕನಾಥ ಮಿತ್ರ ಮಂಡಲಿ ಎಂಬ ನಾಟಕ ಕಂಪೆನಿ ಶುರು ಮಾಡೇಬಿಟ್ಟರು. ಮದುವೆ ಮಾರ್ಕೆಟ್, ರಾಜಸೂಯ ಯಾಗ, ಬಿಡುಗಡೆ ಮುಂತಾದ ನಾಟಕಗಳ ಪ್ರದರ್ಶನದ ಮೂಲಕ ನಂಜನಗೂಡು, ಚಾಮರಾಜನಗರ, ಚನ್ನಪಟ್ಟಣ ಮುಂತಾದ ನಾಲ್ಕಾರು ಕಡೆ ಕ್ಯಾಂಪ್ ಮಾಡಿ ನಷ್ಟದೊಂದಿಗೆ ಎರಡೇ ವರ್ಷಕ್ಕೆ ಮುಚ್ಚಬೇಕಾಯಿತು. ಆದರೆ ’ನಾಯಕಿ’ ’ರಂಗ’ ತೊರೆಯಲಿಲ್ಲ. ಪತಿ ನಂಜಪ್ಪ ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮ್ಯಾನೇಜರ್ ಆಗಿ ಹೋದರೆ, ಬೆಂಗಳೂರಿನಲ್ಲಿ ನೆಲೆ ನಿಂತ ರಂಗನಾಯಕಮ್ಮ ಹೊನ್ನಪ್ಪ ಭಾಗವತರ್, ಸುಳ್ಳದ ದೇಸಾಯಿ, ಮಹಾಂತೇಶ ಶಾಸ್ತ್ರಿ, ಯೋಗನರಸಿಂಹ, ಮಹದೇವಸ್ವಾಮಿ, ಸ್ತ್ರೀ ನಾಟಕ ಮಂಡಳಿ, ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಉದ್ದಕ್ಕೂ ನಿವೃತ್ತಿ ವಯಸ್ಸನ್ನು ದಾಟಿದ ನಂತರವೂ ಅಭಿನಯಿಸುತ್ತಲೇ ಬಂದರು. ಈ ಮಧ್ಯೆ ಹಳ್ಳಿ ಪಟ್ಟಣಗಳ ಪೌರಾಣಿಕ ನಾಟಕಗಳಿಗೂ ಅವರಿಗೆ ಆಹ್ವಾನ ಇರುತ್ತಿತ್ತು.

ರಂಗನಾಯಕಮ್ಮ ತಮ್ಮ ಸುದೀರ್ಘ ರಂಗ ಜೀವನದ ನಾಲ್ಕೈದು ಪ್ರಸಂಗಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ. ಅವರ ರಂಗವ್ಯಕ್ತಿತ್ವದ ವಿಶೇಷವೂ ಇದಾದ್ದರಿಂದ ಒಂದೆರಡು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಗುಬ್ಬಿ ಕಂಪೆನಿಯ ತೀರ್ಥಹಳ್ಳಿ ಕ್ಯಾಂಪ್: ದಶಾವತಾರ ನಾಟಕಕ್ಕೆ ಭರ್ಜರಿ ಕಲೆಕ್ಷನ್. ಉತ್ತರೆ, ಚಂಚಲಕುಮಾರಿ ಪಾತ್ರಗಳನ್ನು ಮಾಡಿಕೊಂಡಿದ್ದ ರಂಗನಾಯಕಮ್ಮನಿಗೆ ಒಂದು ದಿನ ಏಕಾಏಕಿ ಪ್ರಹ್ಲಾದನ ಪಾತ್ರ ಮಾಡು ಎಂದರು.ಅದನ್ನು ಅವರ ಮಾತುಗಳಲ್ಲೇ ಕೇಳಿ;
"ಆ ಪಾತ್ರಕ್ಕೆ ನಾನು ದಪ್ಪ ಆಗ್ತೀನಿ ಎಂದೆ. ಕಯಾದು ಪಾತ್ರದ ಜಯಾನು ದಪ್ಪ, ಹಿರಣ್ಯಕಶಿಪುನೂ ದಪ್ಪ, ನೀನು ಮಾಡಿದರೆ ಏನು ತಪ್ಪು ಎಂದು ಅಪ್ಪಾವ್ರು (ಗುಬ್ಬಿ ವೀರಣ್ಣನವರನ್ನು ತಪ್ಪಿಯೂ ರಂಗನಾಯಕಮ್ಮ ಹೆಸರಿಡಿದು ಕರೆದವರಲ್ಲ) ಹುರಿದುಂಬಿಸಿದರು. ’ಹರಿಯಲ್ಲದಿನ್ನುಂಟೆ ಬೇರೆ ಪರದೈವ...’ ಎಂದು ಹಾಡುತ್ತ ಪ್ರಹ್ಲಾದನಾಗಿ ಪ್ರವೇಶಿಸಿದೆ. ನಾಟಕ ಪೂರ್ತಿ ವೀಕ್ಷಿಸಿದ ವೀರಣ್ಣನವರು ನಾಟಕ ಮುಗಿದ ಮೇಲೆ ಭೇಷ್ ಮರಿ ಎಂದು ಪ್ರಶಂಸಿಸಿ ಜೇಬಿನಲ್ಲಿ ಎಷ್ಟಿತ್ತೋ ಅಷ್ಟು ದುಡ್ಡನ್ನು ತೆಗೆದು ಕೈಗೆ ಕೊಟ್ಟರು. (ಅದು ವೀರಣ್ಣನವರ ಶೈಲಿ)."

ಗುಬ್ಬಿ ವೀರಣ್ಣ ಕಂಪೆನಿಯಲ್ಲಿ ರಂಗನಾಯಕಮ್ಮ ಇನ್ನೂ ಸೀತೆ ಪಾತ್ರದಲ್ಲಿ ಅಭಿನಯಿಸಿರಲಿಲ್ಲ. ಕೊಟ್ಟೂರು ಕ್ಯಾಂಪ್‌ನಲ್ಲಿ ಆ ಅವಕಾಶವೂ ಆಕಸ್ಮಿಕ ಎನ್ನುವಂತೆ ಬಂತು. ಆರಂಭದಲ್ಲಿ ಹಿಂದೇಟು ಹಾಕಿದೆ. ’ಮಾಡು ರಂಗ.. ಮಾಡು ರಂಗ..’ ಎಂದು ಸ್ವರ್ಣಮ್ಮ, ಅಚ್ಯುತರಾಯರು ಹುರಿದುಂಬಿಸಿದರು. ’ತೊರೆದ ನನ್ನ ಪತಿ ನಿರ್ದಯದಿ, ಆದೆ ಅನಾಥೆ- ಆಶ್ರಯರಹಿತೆ...’ ಎಂದು ಹಾಡುವ ದೃಶ್ಯದಲ್ಲಿ ನನ್ನ ಪಾತ್ರಕ್ಕೆ ಮನಸೋತ ರಾಯರು ಸಾಕ್ಷಾತ್ ಮಾಲತಮ್ಮನವರನ್ನು ನೋಡಿದ ಹಾಗಾಯಿತು ಎಂದು ಬೆನ್ನು ತಟ್ಟಿದರು.

ಯಾವ ಪಾತ್ರಕ್ಕೆ ಕೊರತೆ ಬಿದ್ದರೂ, ತಕ್ಷಣ ನೆನಪಾಗುತ್ತಿದ್ದವರು ರಂಗನಾಯಕಮ್ಮ. ವೃತ್ತಿರಂಗಭೂಮಿಯಲ್ಲಿ ಕೆಲವು ಪಾತ್ರಗಳಿಗೆ ದಂತಕತೆಯಾದ ನಟ ನಟಿಯರೇ ಇದ್ದಾರೆ. ಕೆಲವರು ಮಾತ್ರ ತಮಗೆ ಹೆಸರು ಕೊಟ್ಟ ಪಾತ್ರ ಬಿಟ್ಟು ಬೇರೆ ಪಾತ್ರ ಮಾಡಿದವರಲ್ಲ! ರಂಗನಾಯಕಮ್ಮ ಹಾಗಲ್ಲ, ಯಾವುದೇ ಪಾತ್ರಕ್ಕೆ ಸದಾಸಿದ್ಧ. ದೊರೆತ ಎಲ್ಲ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸುವವರೇ ನಿಜವಾದ ನಾಯಕರಲ್ಲವೇ? ತಮಗೆ ಬಿರುದಾಂಕಿತವಾಗಿ ಬಂದ ಹೆಸರನ್ನು ರಂಗನಾಯಕಮ್ಮ ಸಾರ್ಥಕ ಪಡಿಸಿಕೊಂಡದ್ದು ಹೀಗೆ.

ಗುಬ್ಬಿ ವೀರಣ್ಣ ಪ್ರಶಸ್ತಿ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿ. ಆ ಕಾಲದಲ್ಲೇ ದೊಡ್ಡ ಹೆಸರು ಮಾಡಿರುವ ಇನ್ನೂ ನಾಲ್ಕಾರು ಮಂದಿ ಈ ಪ್ರಶಸ್ತಿ ಪಡೆಯಲು ಅರ್ಹರಾದವರಿದ್ದಾರೆ. ಅವರ ಸಾಲಿನಲ್ಲಿ ರಂಗನಾಯಕಮ್ಮನೂ ಒಬ್ಬರು. ಗುಬ್ಬಿ ವೀರಣ್ಣ ಪ್ರಶಸ್ತಿಗೆ ಇದುವರೆಗೂ ಭಾಜನರಾದವರೆಲ್ಲರೂ ಅರ್ಹರೇ. ಹಾಗಂತ ಎಲ್ಲ ಅರ್ಹರಿಗೂ ದೊರೆಯುತ್ತದೆ ಎಂದು ಹೇಳಲಾಗದು. ಅಂತಹ ಕೊರತೆಯನ್ನು ಕೆಲವು ಖಾಸಗಿ ಪ್ರಶಸ್ತಿಗಳು ತುಂಬಿಕೊಡುತ್ತವೆ. ಚಿತ್ರರಂಗದ ದಂತಕಥೆ ಡಾ.ರಾಜಕುಮಾರ್ ಅವರ ತಮ್ಮ ವರದರಾಜು ಅವರ ಹೆಸರಿನಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತು ಗೆಳೆಯರು ಸ್ಥಾಪಿಸಿರುವ ಎಸ್.ಪಿ.ವರದರಾಜು ಪ್ರಶಸ್ತಿ ಕಳೆದ ಆರುವರ್ಷಗಳಿಂದ ಅಂತಹ ಕೆಲಸ ಮಾಡುತ್ತ ಬಂದಿದೆ. ಚಿತ್ರ ಹಾಗೂ ರಂಗದ ತಲಾ ಒಬ್ಬರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅರ್ಹರಿದ್ದೂ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಗುರುತಿಸುವುದೇ ಈ ಪ್ರಶಸ್ತಿಯ ವಿಶೇಷ. ಪ್ರಸಕ್ತವರ್ಷ (೨೦೧೨) ರಂಗನಾಯಕಮ್ಮನವರಿಗೆ ಈ ಪ್ರಶಸ್ತಿ ದೊರೆಯುವ ಮೂಲಕ ಪ್ರಶಸ್ತಿಯ ಘನತೆಯೂ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT