ಮುಂಬೈ: ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಶನಿವಾರ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸೇರಿದಂತೆ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಭಾಗವಹಿಸಿದ್ದರು.
ಸಿನ್ಹಾ ಆರಂಭಿಸಿರುವ ‘ರಾಷ್ಟ್ರೀಯ ಮಂಚ್’ ಅಡಿಯಲ್ಲಿ ಈ ಸಭೆ ಆಯೋಜಿಸಲಾಗಿತ್ತು.
ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತ ಸುಧೀಂದ್ರ ಕುಲಕರ್ಣಿ, ಎಎಪಿ ರಾಷ್ಟ್ರೀಯ ವಕ್ತಾರರಾದ ಪ್ರೀತಿ ಶರ್ಮಾ ಮೆನನ್, ಎನ್ಸಿಪಿ ನಾಯಕ ಮಜೀದ್ ಮೆಮೊನ್, ಕಾಂಗ್ರೆಸ್ ಸಂಸದ ಕುಮಾರ್ ಕೆಟ್ಕರ್, ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು.
ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ದೆಹಲಿಯಲ್ಲಿ ಹಲವು ನಾಯಕರನ್ನು ಭೇಟಿಯಾಗಿದ್ದರು. ಜತೆಗೆ ಬಿಜೆಪಿ ನಾಯಕರಾದ ಯಶವಂತ್ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರನ್ನು ಸಹ ಭೇಟಿಯಾಗಿದ್ದರು. ಹೀಗಾಗಿ, ಇಲ್ಲಿ ನಡೆದಿರುವ ಸಭೆ ರಾಜಕೀಯವಾಗಿ ಮಹತ್ವ ಪಡೆದಿದೆ ಎಂದು ಮುಖಂಡರು ತಿಳಿಸಿದ್ದಾರೆ.
‘ಇದು ರಾಜಕೀಯ ಸಭೆಯಾಗಿರಲಿಲ್ಲ. ಸಭೆಯ ಬಗ್ಗೆ ಹೆಚ್ಚಿನ ವಿವರ ಹೇಳುವುದಿಲ್ಲ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಆಶೀಶ್ ದೇಶಮುಖ್ ತಿಳಿಸಿದ್ದಾರೆ.