ತುಮಕೂರು: ‘ಪ್ರಜಾವಾಣಿ’ ಜತೆ ಸಿದ್ಧಗಂಗಾ ಮಠದ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ 71 ವರ್ಷಗಳ ಅವಿನಾಭಾವ ಸಂಬಂಧ ಇತ್ತು. ಪ್ರಜಾವಾಣಿ ಆರಂಭದ ದಿನದಿಂದಲೂ ಅನಾರೋಗ್ಯದಿಂದ ಆಸ್ಪತ್ರೆ ಸೇರುವ ಮುಂಚಿನ ದಿನದವರೆಗೂ ಪ್ರಜಾವಾಣಿ ಓದಿದ್ದು ಸ್ಮರಣೀಯ.
‘ಪತ್ರಿಕೆ ಓದದಿದ್ದರೆ ಸಮಾಧಾನ ಇರಲ್ಲ’ ಎಂದು ಹಲವು ಬಾರಿ ಪತ್ರಿಕೆಯನ್ನು ಮಾರುಕಟ್ಟೆಯಿಂದ ತರಿಸಿ ಓದಿದ್ದರು ಎಂಬುದನ್ನು ಸ್ಮರಿಸುತ್ತಾರೆ ಶ್ರೀಮಠದ ಗ್ರಂಥಾಲಯ ವಿಭಾಗದ ನಿರ್ವಹಣೆ ಹೊತ್ತಿರುವ ರೇಣುಕಾರಾಧ್ಯ.
ಭಕ್ತರ ಮನೆಗೆ ಪಾದಪೂಜೆಗಾಗಲಿ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗ ಅವರ ಕಾರಿನಲ್ಲಿ ಪತ್ರಿಕೆಗಳು ಇರುತ್ತಿದ್ದವು. ಧರ್ಮ, ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ವಿಚಾರ ಪತ್ರಿಕೆಯಲ್ಲಿ ಪ್ರಕಟವಾಗಿದ್ದರೆ ಆ ಪುಟವನ್ನು ತೆಗೆದು ತಮ್ಮಲ್ಲಿ ಇಟ್ಟುಕೊಂಡಿದ್ದರು. ಆಗಾಗ ಅವುಗಳನ್ನು ಮೆಲುಕು ಹಾಕುತ್ತಿದ್ದರು.
‘ದೇಶ, ಭಾಷೆ, ಸಂಸ್ಕೃತಿ, ಇತಿಹಾಸದ ಜೊತೆಗೆ ಮೌಲ್ಯಯುತ ಮಾಹಿತಿ ತಿಳಿಸುವ ಪತ್ರಿಕೆಗಳನ್ನು ಓದಬೇಕು. ಅದರಲ್ಲಿರುವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು’ ಎಂದು ಸ್ವಾಮೀಜಿ ಮಕ್ಕಳಿಗೆ ಸಲಹೆ ನೀಡುತ್ತಿದ್ದರು.