ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಸಮಸ್ಯೆ ನಿವಾರಣೆಗಾಗಿ ಧರಣಿ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನಿವಾಸದ ಮುಂಭಾಗ ರೈತರ ಸತ್ಯಾಗ್ರಹ
Last Updated 27 ಮಾರ್ಚ್ 2018, 12:09 IST
ಅಕ್ಷರ ಗಾತ್ರ

ವಿಜಯಪುರ: ರೈತರ ಜಮೀನುಗಳಿಗೆ ತೆರಳಲು ಅಲ್ಲಲ್ಲೇ ಸೃಷ್ಟಿಯಾಗಿರುವ ದಾರಿ ಸಮಸ್ಯೆಗೆ ಇತಿಶ್ರೀ ಹಾಕಬೇಕು. ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನಿವಾಸದ ಮುಂಭಾಗ ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದರು.

ಮುಗಳಖೋಡ ಮಠದಿಂದ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದವರೆಗೂ ಪಾದಯಾತ್ರೆ ನಡೆಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ‘ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಯಾ ಗ್ರಾಮ ಠಾಣದ ನಕ್ಷೆಯಲ್ಲಿ ಜಮೀನುಗಳಿಗೆ ಹೋಗಲು ದಾರಿ ಗುರುತಿಸಿದ್ದರೆ ಮಾತ್ರ ರೈತರು ತಮ್ಮ ಜಮೀನಿನಲ್ಲಿ ಹಾದುಹೋಗಲು ಅವಕಾಶ ನೀಡುತ್ತಾರೆ. ಆದರೆ ಕೆಲವೆಡೆ ದಾರಿ ಗುರುತಿಸಿಲ್ಲ. ಇಲ್ಲಿ ಸಮಸ್ಯೆ ಬಿಗಡಾಯಿಸಿದೆ. ಕೆಲವೊಮ್ಮೆ ಹೊಡೆದಾಟವೂ ನಡೆದಿದೆ. ಪ್ರಾಣ ಹಾನಿಯೂ ಸಂಭವಿಸಿದೆ’ ಎಂದು ಹೇಳಿದರು.

‘ದಾರಿಗಾಗಿ ಜಗಳ, ಮನಸ್ತಾಪ ಎಲ್ಲೆಡೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಊರುಗಳಲ್ಲಿ 8–10 ವರ್ಷಗಳಿಂದಲೂ ಉಳುಮೆ ನಡೆಸದೆ ಹೊಲ ಬೀಳು ಬಿಟ್ಟಿದ್ದಾರೆ. ವಿನಾಃ ಕಾರಣ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ.

ಈ ಸಮಸ್ಯೆ ತಪ್ಪಿಸಿ ಎಂದು ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಖುದ್ದು ಮನವಿ ಸಲ್ಲಿಸಿದರೂ ಯಾರೊಬ್ಬರೂ ಸ್ಪಂದಿಸದಾಗಿದ್ದಾರೆ. ಅನಿವಾರ್ಯವಾಗಿ ಅಂತಿಮವಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಸಮಸ್ಯೆ ಬಗೆಹರಿಯುವ ತನಕವೂ ಅಹೋರಾತ್ರಿ ಹೋರಾಡುತ್ತೇವೆ’ ಎಂದು ಅರವಿಂದ ತಿಳಿಸಿದರು.

‘ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಿಂದ ಉತ್ಪಾದನೆಯಾಗುವ ವಿದ್ಯುತ್ ಸರಬರಾಜು ಮಾಡುವ ಕಾರಿಡಾರ್ ಯೋಜನೆಯಡಿ ಕೆಪಿಟಿಸಿಎಲ್‌ನವರು ವಿದ್ಯುತ್ ಸರಬರಾಜು ಮಾಡಲು ಟವರ್ ಹಾಕುವುದನ್ನು ವಿರೋಧಿಸಿ ಹೋರಾಟ ಮಾಡಿದ ಸಂದರ್ಭದಲ್ಲಿ, ಐವರು ರೈತ ಪರ ಹೋರಾಟಗಾರರ ಮೇಲೆ ಹಾಕಿದ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಬೇಕು’ ಎಂದು ಇದೇ ಸಂದರ್ಭ ಕುಲಕರ್ಣಿ ಆಗ್ರಹಿಸಿದರು.

ಸಿದ್ರಾಮಪ್ಪ ರಂಜಣಗಿ, ಗೌಡಪ್ಪಗೌಡ ಮೈಗೂರ, ಡಾ.ಎಂ.ರಾಮಚಂದ್ರ ಬಮ್ಮನಜೋಗಿ, ಸದಾಶಿವ ಬರಟಗಿ, ಕೃಷ್ಣಪ್ಪ ಬಮಶೆಟ್ಟಿ, ಶಿವಾನಂದ ಬುಜರಿ, ಸಿದ್ರಾಮ ಅಂಗಡಗೇರಿ, ಜಯಶ್ರೀ ಜಂಗಮಶೆಟ್ಟಿ, ಚಂದ್ರಾಮ ತೆಗ್ಗಿ, ಬಸವರಾಜ ಹೆಬ್ಬಾಳ, ಶಿವನಗೌಡ ಬಿರಾದಾರ, ಪರುಗೌಡ ಬಿರಾದಾರ, ಈರಣ್ಣ ದೇವರಗುಡಿ, ಮುತ್ತಪ್ಪ ಬಿರಾದಾರ, ಗುರಪ್ಪ ಸುಣಗಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

**

ದಾರಿ ಸಮಸ್ಯೆಗೆ ಸಂಬಂಧಿಸಿದಂತೆ ಸರ್ಕಾರ ಹಣ ವ್ಯಯಿಸಬೇಕಿಲ್ಲ. ಮೊದಲಿನಂತೆ ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿದರೆ ಸಾಕು.

-ಅರವಿಂದ ಕುಲಕರ್ಣಿ, ರೈತ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT