ಬೆಂಗಳೂರು: ಬೇಸಿಗೆ ರಜಾ ದಿನಗಳನ್ನು ಕಡಿತಗೊಳಿಸಬೇಡಿ. ಈ ಹಿಂದೆ ಇರುವಂತೆ ಮುಂದುವರಿಸಿ ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟವು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದೆ.
‘2008ಕ್ಕೂ ಮೊದಲು ನೇಮಕಗೊಂಡವರು ನಿವೃತ್ತಿಯಾಗುವಾಗ ಕಾಲ್ಪನಿಕ ವೇತನ ನಿಗದಿ ಪಡಿಸಿ, ಪಿಂಚಣಿ ನೀಡಬೇಕು. ಅನುದಾನಿತ ನೌಕರರಿಗೆ ಮೂರು ತಿಂಗಳಿಗೆ ಒಮ್ಮೆ ಸಂಬಳದ ಮೊತ್ತ ಬಿಡುಗಡೆ ಮಾಡುವ ಬದಲು, ಸರ್ಕಾರಿ ನೌಕರರಂತೆ ಪ್ರತಿ ತಿಂಗಳು ವೇತನ ನೀಡಬೇಕು’ ಎಂದು ಒಕ್ಕೂಟ ಒತ್ತಾಯಿಸಿದೆ.
‘ಇಲಾಖೆಯಲ್ಲಿ ಖಾಲಿಯಾಗುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು. ಸ್ಥಗಿತಗೊಂಡಿರುವ 6, 7 ಮತ್ತು 8ನೇ ವೇತನ ಬಡ್ತಿಗಳನ್ನು 2012ರಿಂದಲೇ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು’ ಎಂದು ಮನವಿ ಮಾಡಿದೆ.