ಉಜಿರೆ: ಜ್ಞಾನದ ಬೆಳಕು ಎಲ್ಲರಿಗೂ ಸಿಗುವಂತಾಗಬೇಕು ಎಂಬುದೇ ಗಾಯತ್ರಿ ಮಹಾಯಜ್ಞದ ಸಂದೇಶ. ಗಾಯತ್ರಿ ಮಂತ್ರ ವಿಶ್ವಗೀತೆಯಾಗಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಟ್ರಸ್ಟ್ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ರಾಮಕ್ಷೇತ್ರದಲ್ಲಿ ಮೂರು ದಿನ ನಡೆಯುವ ವಿಶ್ವ ಹೃದಯ ಸಮ್ಮೇಳನವನ್ನು ಅವರು ಶುಕ್ರವಾರ ಉದ್ಘಾಟಸಿ ಮಾತನಾಡಿದರು.
ಪಕ್ಕದಲ್ಲಿರುವ ಧರ್ಮಸ್ಥಳದಲ್ಲಿ ಶಿವ ಇದ್ದಾನೆ. ಕನ್ಯಾಡಿಯ ರಾಮ ಕ್ಷೇತ್ರದಲ್ಲಿ ರಾಮ ಇದ್ದಾನೆ. ಹಾಗಾಗಿ ಇದು ರಾಮೇಶ್ವರ ಕ್ಷೇತ್ರ. ಜನಗಣಮನ ರಾಷ್ಟ್ರಗೀತೆಯಾದಂತೆ ಗಾಯತ್ರಿ ಮಂತ್ರ ವಿಶ್ವಗೀತೆಯಾಗಬೇಕು. ಇಂದು ನಮ್ಮ ಮನಸ್ಸು ಚಂಚಲವಾಗಿದೆ. ಮನಸ್ಸಿನ ಮೇಲೆ ನಾವು ನಿಯಂತ್ರಣ ಹೊಂದಲು ಸಿದ್ಧಿ ಸಮಾಧಿ ಯೋಗದಿಂದ ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಮನಸ್ಸಿನ ಅಂಧಕಾರ ಕಳೆಯಲು ಭಗವಂತನ ಭಕ್ತಿಯ ಬೆಳಕು ನಮ್ಮಲ್ಲಿ ಮೂಡಿ ಬರವೇಕು. ಭಕ್ತಿಯು ಹೃದಯದಲ್ಲಿ ಅರಳಿದಾಗ ನಮ್ಮಲ್ಲಿ ಸಾತ್ವಿಕ ಗುಣ ಬೆಳೆಯುತ್ತವೆ ಎಂದು ಹೇಳಿದರು.
ಹೊಸದುರ್ಗದ ಶ್ರೀಕಾಂತಾನಂದ ಸರಸ್ವತಿ ಸ್ವಾಮೀಜಿ, ಶಿವಮೊಗ್ಗದ ಬ್ರಹ್ಮಾನಂದ ತೀರ್ಥಭಿಕ್ಷು ಮತ್ತು ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಹೊರನಾಡು ಅನ್ನಪೂರ್ಣೆಶ್ವರೀ ದೇವಸ್ಥಾನದ ಭೀಮೇಶ್ವರ ಜೋಷಿ, ಲಲಿತ ವಿದ್ಯಾಮಂದಿರದ ಶ್ರೀಕಂಠ ಗುರೂಜಿ, ಚಿತ್ತರಂಜನ್, ಮೋಹನ್ ಉಜ್ಜೋಡಿ, ಸುಜಿತಾ ವಿ. ಬಂಗೇರ ಮತ್ತು ಪೀತಾಂಬರ ಹೇರಾಜೆ ಇದ್ದರು. ಎಚ್.ಎಸ್. ರಮೇಶ ಚಂದ್ರ ಸ್ವಾಗತಿಸಿದರು. ನಾಗೇಂದ್ರ ಕುಮಾರ್ ವಂದಿಸಿದರು.