ಭಾರತವು ಇಂಧನ ಬಿಕ್ಕಟ್ಟನ್ನು ಪ್ರಬುದ್ಧವಾಗಿ ನಿಭಾಯಿಸಿದೆ: ಕೇಂದ್ರ ಸಚಿವ ಪುರಿ

ವಾಷಿಂಗ್ಟನ್: ಭಾರತವು ಸದ್ಯ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ಜವಾಬ್ದಾರಿಯುತವಾಗಿ ಮತ್ತು ಪ್ರಬುದ್ಧ ರೀತಿಯಲ್ಲಿ ನಿಭಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದ ಯಾವುದೇ ಭಾಗದಲ್ಲಿಯೂ ಇಂಧನ ಕೊರತೆ ಉಂಟಾಗದಂತೆ ನೋಡಿಕೊಂಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಪುರಿ ಅವರು ದ್ವಿಪಕ್ಷೀಯ ಮಾತುಕತೆ ಸಲುವಾಗಿ ಯುಎಸ್ ಇಂಧನ ಕಾರ್ಯದರ್ಶಿ ಜೆನ್ನಿಫರ್ ಗ್ರಾನ್ಹೋಮ್ ಅವರನ್ನು ಶುಕ್ರವಾರ ಭೇಟಿಯಾಗಲಿದ್ದಾರೆ.
ಯುಎಸ್ನಲ್ಲಿ ಭಾರತದ ರಾಯಭಾರಿಯಾಗಿರುವ ತರಂಜಿತ್ ಸಿಂಗ್ ಸಂಧು ಅವರು ಆಯೋಜಿಸಿದ್ದ ಸ್ವಾಗತ ಸಭೆಯಲ್ಲಿ ಮಾತನಾಡಿದ ಪುರಿ, 'ಇಂದು ನಾವು ಇಂಧನದ ಬಗ್ಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ವಿಭಿನ್ನವಾದ ಆಲೋಚನೆಗಳು (ಬಿಕ್ಕಟ್ಟಿನ ವಿಚಾರಗಳು) ಮೂಡಿಬರುತ್ತದೆ. ಆದರೆ, ಅವು ಕೂಡ ಕಳೆದುಹೋಗುತ್ತವೆ. ಜವಾಬ್ದಾರಿಯುತ ಹಾಗೂ ಪ್ರಬುದ್ಧ ರೀತಿಯಲ್ಲಿ ಆಲೋಚಿಸುವ ಮೂಲಕ ಸವಾಲುಗಳನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ' ಎಂದಿದ್ದಾರೆ.
'ಭಾರಿ ಪ್ರವಾಹ ಉಂಟಾಗುತ್ತಿರುವ ಈಶಾನ್ಯ ರಾಜ್ಯಗಳೂ ಸೇರಿದಂತೆ ನಮ್ಮ ದೇಶದ ಯಾವುದೇ ಭಾಗದ ಜನರಿಗೆ ಇಂಧನ ಕೊರತೆ ಎದುರಾಗುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಾವತ್ತೂ ಯಾವುದೇ ಕೊರತೆಯಾಗಿಲ್ಲ. ಮುಂದೆಯೂ ಹೀಗೆಯೇ ಮುನ್ನಡೆಯುವ ಭರವಸೆ ನಮಗಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.