ವಿಶ್ವಸಂಸ್ಥೆ : ಉಕ್ರೇನ್ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಭಾರತವು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.
‘ಪಾಕಿಸ್ತಾನದ ಪ್ರಚೋದನೆ ವಿಷಾದದ ಸಂಗತಿಯಾಗಿದೆ. ಅಲ್ಲದೆ ತಪ್ಪಾದ ನಡೆಯೂ ಆಗಿದೆ’ ಎಂದು ಪ್ರತಿಪಾದಿಸಿರುವ ಭಾರತ, ‘ಇಸ್ಲಾಮಾಬಾದ್, ಭಯೋತ್ಪಾದಕರಿಗೆ ಸುರಕ್ಷಿತ ಮತ್ತು ನಿರ್ಭೀತ ಆಶ್ರಯ ಒದಗಿಸಿದೆ’ ಎಂದು ಟೀಕಿಸಿದೆ.
‘ಪಾಕಿಸ್ತಾನದ ಕುಚೇಷ್ಟೆಯ ಪ್ರಚೋದನೆಗಳಿಗೆ ಪ್ರತಿಕ್ರಿಯಿಸದಿರಲು ಭಾರತ ಈ ಬಾರಿ ನಿರ್ಧರಿಸಿದೆ ಎಂಬುದನ್ನು ತಿಳಿಸುವುದಕ್ಕಾಗಿ ನಾನು ಇಂದು ಮಾತನಾಡುತ್ತಿದ್ದೇನೆ. ಈ ಹಿಂದೆ ನಾವು ನೀಡಿರುವ ಹಲವಾರು ಪ್ರತ್ಯುತ್ತರದ ಹಕ್ಕುಗಳನ್ನು ಉಲ್ಲೇಖಿಸುವಂತೆ ಪಾಕಿಸ್ತಾನದ ಪ್ರತಿನಿಧಿಗೆ ಸಲಹೆ ನೀಡುತ್ತೇವೆ’ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಮಿಷನ್ ಕೌನ್ಸಲರ್ ಪ್ರತೀಕ್ ಮಾಥೂರ್ ಅವರು ಹೇಳಿದರು.
ಗುರುವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನದಲ್ಲಿ ಉಕ್ರೇನ್ ಕುರಿತ ನಿರ್ಣಯದ ಮೇಲೆ ಮತದ ವಿವರಣೆಯನ್ನು ನೀಡುವಾಗ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಉಲ್ಲೇಖಿಸಿದ ನಂತರ ಮಾಥುರ್ ಅವರು ಭಾರತದ ಪ್ರತ್ಯುತ್ತರ ಹಕ್ಕನ್ನು ಚಲಾಯಿಸಿದರು.