ಕೊಲಂಬೊ: ಹಿಂದಿನ ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ಛಿದ್ರಗೊಳಿಸಿದೆ. 2019ರಲ್ಲಿ ಈಸ್ಟರ್ ಭಾನುವಾರ ನಡೆದ ದಾಳಿಯನ್ನು ತಡೆಯಲು ಆ ಸರ್ಕಾರ ವಿಫಲವಾಯಿತು ಎಂದು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಆರೋಪಿಸಿದರು.
ಈಸ್ಟರ್ ಭಾನುವಾರ ನಡೆದ ದಾಳಿಯಲ್ಲಿ 11 ಮಂದಿ ಭಾರತೀಯರು ಸೇರಿದಂತೆ 270 ಮಂದಿ ಸಾವಿಗೀಡಾಗಿದ್ದರು.
ಐಎಸ್ಗೆ ಸೇರಿದ ನ್ಯಾಷನಲ್ ತವ್ಹೀದ್ ಜಮಾದ್ (ಎನ್ಟಿಜೆ) ಅಂದು ಶ್ರೀಲಂಕಾದಲ್ಲಿ ಮೂರು ಚರ್ಚ್ಗಳು ಮತ್ತು ಐಷಾರಾಮಿ ಹೋಟೆಲ್ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 270 ಜನರನ್ನು ಹತ್ಯೆಗೈದಿತ್ತು. ಸುಮಾರು 500 ಮಂದಿ ಗಾಯಗೊಂಡಿದ್ದರು.
ಈ ದಾಳಿಯ ಸಂಚುಕೋರರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕೆಂದು ತಮ್ಮ ಮೇಲೆ ಒತ್ತಡ ಹೇರುವವರು ಎಚ್ಚರಿಕೆಯಿಂದಿರಬೇಕು. ಅಗತ್ಯವಾದರೆ ತಮ್ಮನ್ನು ಟೀಕಿಸುವವರ ವಿರುದ್ಧವೂ ಕಠಿಣವಾಗಿ ವರ್ತಿಸಬೇಕಾಗುತ್ತದೆ ಎಂದು ರಾಜಪಕ್ಸೆ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು,‘ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರೆ, ದಾಳಿಗೆ ಕಾರಣರಾದವರ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಸಂಸತ್ತಿನಲ್ಲಿ ಪ್ರಸ್ತಾಪಿಸಬಹುದು’ ಎಂದು ಹೇಳಿದರು.
ಪ್ರಕರಣದ ಬಗ್ಗೆ ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದ್ದು ಇದರಲ್ಲಿ ಮಧ್ಯ ಪ್ರವೇಶಿಸಲು ತಮ್ಮ ಸರ್ಕಾರ ಬಯಸುವುದಿಲ್ಲ ಎಂದೂ ತಿಳಿಸಿದರು.
ರಾಷ್ಟ್ರೀಯ ಭದ್ರತೆಯನ್ನು ಹಿಂದಿನ ಸರ್ಕಾರ ನಿರ್ಲಕ್ಷ್ಯಿಸಿದೆ. ತಾವು 2015ಕ್ಕೂ ಮೊದಲು ರೂಪಿಸಿದ್ದ ಬೇಹಗಾರಿಕೆ ವ್ಯವಸ್ಥೆಯನ್ನು ನಾಶಗೊಳಿಸಿದೆ ಎಂದು ಟೀಕಿಸಿದರು.