ಬೆಂಗಳೂರು: ‘ಕಾಂಗ್ರೆಸ್ ಮುಖಂಡರು ತಮ್ಮ ಶಾಸಕರ ಸಹಿಗಳನ್ನು ನಕಲು ಮಾಡಿ ರಾಜ್ಯಪಾಲರಿಗೆ ಪಟ್ಟಿ ಸಲ್ಲಿಸಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದರು.
‘ಕಾಂಗ್ರೆಸ್ ಶಾಸಕಾಂಗ ಸಭೆಗೆ ಕೆಲ ಶಾಸಕರು ಹಾಜರಿರಲಿಲ್ಲ. ಹೀಗಾಗಿ, ಮುಖಂಡರೇ ಅವರ ಸಹಿ ನಕಲು ಮಾಡಿ ರಾಜ್ಯಪಾಲರಿಗೆ ಶಾಸಕರ ಪಟ್ಟಿ ಸಲ್ಲಿಸಿದ್ದಾರೆ’ ಎಂದು ಗುರುವಾರ ಪತ್ರಿಕಾ
ಗೋಷ್ಠಿಯಲ್ಲಿ ತಿಳಿಸಿದರು.
‘ಮಣಿಪುರದಲ್ಲೂ ಕಾಂಗ್ರೆಸ್ ಇದೇ ಕುತಂತ್ರ ಅನುಸರಿಸಿತ್ತು. ತಮಗೆ ಎಂಪಿಪಿ ಪಕ್ಷದ ಬೆಂಬಲವಿದೆ ಎಂದು ಆ ಪಕ್ಷದ ಶಾಸಕರ ಸಹಿಯನ್ನು ನಕಲು ಮಾಡಿತ್ತು. ಇದರಿಂದ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿತ್ತು. ಈಗಲೂ ಅದೇ ಸ್ಥಿತಿ ಎದುರಾಗುತ್ತದೆ’ ಎಂದು ಹೇಳಿದರು.
‘ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ತಮ್ಮ ಶಾಸಕರ ಮೇಲೆ ವಿಶ್ವಾಸವಿಲ್ಲ. ಹೀಗಾಗಿ, ಅವರನ್ನು ಕೊಠಡಿಗಳಲ್ಲಿ ಕೂಡಿ ಹಾಕಿದ್ದಾರೆ. ಶಾಸಕರ ಕುಟುಂಬ ಸದಸ್ಯರು ಸಂಪರ್ಕ ಸಾಧ್ಯವಾಗದೆ ಭೀತಿಗೆ ಒಳಗಾಗಿದ್ದಾರೆ. ಅಧಿಕಾರದಾಸೆಗೆ ತಮ್ಮವರಿಗೆ ಗೃಹಬಂಧನದ ಶಿಕ್ಷೆ ನೀಡಿದ್ದಾರೆ’ ಎಂದು ಆರೋಪಿಸಿದರು.