ಕೃಷಿ ಕ್ಷೇತ್ರಕ್ಕೆ ಎಲ್ಲಿಯ ತನಕ ವಿದ್ಯಾವಂತರು ಬರುವುದಿಲ್ಲವೊ ಅಲ್ಲಿಯ ತನಕ ಭಾರತ ಉದ್ಧಾರ ಆಗದು~ ಎಂದು ಕೃಷಿ ವಿಜ್ಞಾನಿಯೊಬ್ಬರು ಈಚೆಗೆ ಹೇಳಿದ್ದಾರೆ. ಇದಕ್ಕೆ ಉದಾಹರಣೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಸಂಗೇನಹಳ್ಳಿ ಮಂಜುನಾಥ.
ಕೊಟ್ಟೂರು ಸಮೀಪ ಹುಣಸಿಕಟ್ಟೆ ಗ್ರಾಮದ ಹತ್ತಿರದ ತಮ್ಮ ಹೊಲದಲ್ಲಿ ಆಸ್ಟ್ರೇಲಿಯಾ ಮೂಲದ ಎಮು ಹಕ್ಕಿಗಳನ್ನು ಸಂಗೇನಹಳ್ಳಿ ಮಂಜುನಾಥ್ ಸಾಕತೊಡಗಿದ್ದಾರೆ. ಕೋಳಿ ಸಾಕಾಣಿಕೆಗೆ `ಇಸ್ರೈಲ್~ ಎಂದು ಗುರುತಿಸಿಕೊಂಡಿರುವ ಕೊಟ್ಟೂರಿನ ಸುತ್ತಮುತ್ತಲ ಪ್ರದೇಶ ಈಗ ಎಮು ಹಕ್ಕಿ(ಕೋಳಿ)ಸಾಕಾಣಿಕೆಗೂ ಸೂಕ್ತ ಪ್ರದೇಶವೆಂಬುದನ್ನು ಮಂಜುನಾಥ ತೋರಿಸಿಕೊಟ್ಟಿದ್ದಾರೆ.
ಮಂಜುನಾಥ ಓದಿದ್ದು ಎಂಬಿಎ. ರಿಲಯನ್ಸ್ ಕಂಪೆನಿಯಲ್ಲಿ ಅಧಿಕಾರಿಯಾಗಿದ್ದರು. ಕೈತುಂಬ ಸಂಬಳವಿತ್ತು. ಆದರೆ ಅವರಿಗೆ ಈ ಉದ್ಯೋಗ ಇಷ್ಟವಾಗಲಿಲ್ಲ. ಆದುದರಿಂದ ಆಸ್ಟ್ರೇಲಿಯಾ ಮೂಲದ ಎಮು ಹಕ್ಕಿ(ಕೋಳಿ) ಸಾಕಾಣಿಕೆಗೆ ಮುಂದಾದರು. ಸದಾ ಬಿಸಿಲು, ಅಲ್ಪ ಮಳೆ ಬೀಳುವ ಕೊಟ್ಟೂರಿನಲ್ಲಿ ಇದಕ್ಕಿಂತ ಸೂಕ್ತ ಕೃಷಿ ಇನ್ನೊಂದಿಲ್ಲ ಎಂದೆನಿಸಿತು. ಪ್ರಗತಿ ಗ್ರಾಮೀಣ ಬ್ಯಾಂಕ್ ಆರ್ಥಿಕ ನೆರವು ನೀಡಿತು.
ಮುಕ್ಕಾಲು ಎಕರೆಯಲ್ಲಿ ಮಂಜುನಾಥ ನಿರ್ಮಿಸಿರುವ ಫಾರ್ಮ್ನಲ್ಲಿ 170 ಎಮು ಮರಿಗಳಿವೆ. 40 ಮೊಟ್ಟೆ ಇಡುವ ಎಮು ಹಕ್ಕಿಗಳಿವೆ. ಎಮುಗಳ ಕಲರವ, ಸದ್ದು, ಓಡಾಟ ನೋಡುತ್ತಿದ್ದರೆ ಆಸ್ಟ್ರೇಲಿಯಾ ನೆನಪಾಗುತ್ತದೆ. ಇಲ್ಲಿಯ ವಾತಾವರಣಕ್ಕೆ ಈ ಹಕ್ಕಿಗೆ ರೋಗ ಬರುವುದು ಕಮ್ಮಿ. ಒಂದು ಇಂಚು ನೀರು, ಸೊಪ್ಪು, ತರಕಾರಿಯೇ ಇವಕ್ಕೆ ಆಹಾರ.
ದಶಕದ ಹಿಂದೆ ಬಂದ ಹಕ್ಕಿ
2000ರಲ್ಲಿ ಎಮು ಹಕ್ಕಿಗಳು ಭಾರತವನ್ನು ಪ್ರವೇಶಿಸಿದವು. ಸಾಕಾಣಿಕೆ ಆರಂಭವಾಗಿದ್ದು ಹೈದರಾಬಾದ್ನಲ್ಲಿ. ಐದಾರು ಎಮು ಮಾಂಸದ ಸಂಸ್ಕಾರದ ಘಟಕಗಳು ತಲೆ ಎತ್ತಿವೆ ಅಲ್ಲಿ.
ಒಂದು ವರ್ಷದ ಎರಡು ಎಮು ಮರಿಗೆ 25 ಸಾವಿರ ರೂಪಾಯಿ. ಎಮು ಸಾಕಾಣಿಕೆಗೆ ಯಾರಾದರೂ ಮುಂದೆ ಬಂದರೆ, ಎಮು ಮರಿ ಕೊಡುವುದಲ್ಲದೆ. ಸಾಕಾಣಿಕೆ ವಿಧಾನ ತಿಳಿಸುತ್ತೇನೆ ಎನ್ನುತ್ತಾರೆ ಮಂಜುನಾಥ್.
ಇಲ್ಲಿನ ಅಲ್ಪ ಮಳೆಗಾಲ ಮತ್ತು ಬಿಸಿಲ ಪ್ರದೇಶಕ್ಕೆ ಎಮು ಸಾಕಾಣಿಕೆ ಅತ್ಯಂತ ಲಾಭದಾಯಕ ಎನ್ನುತ್ತಾರೆ ಮಂಜುನಾಥ್. ನಿರುದ್ಯೋಗಿ ವಿದ್ಯಾವಂತ ಯುವಕರು ಎಮು ಸಾಕಾಣಿಕೆಗೆ ಮುಂದೆ ಬರಬೇಕು ಎಂಬುದು ಇವರ ಇಚ್ಛೆ. ಮಧುಮೇಹವನ್ನು ತಡೆಗಟ್ಟುವ ಶಕ್ತಿ ಎಮು ಮಾಂಸಕ್ಕಿದೆ. ಆದ್ದರಿಂದ ಕೊಟ್ಟೂರಿನಲ್ಲಿ ಎಮು ಮಾಂಸದ ಪರಿಚಯ ಮಾಡಬೇಕು ಎಂಬ ಚಿಂತನೆ ಇವರದು. ಮಾರಾಟ ಮಾಡಲು ಮುಂದಾದರೆ ಅವರಿಗೆ ಎಲ್ಲಾ ರೀತಿಯ ನೆರವು ನೀಡುತ್ತೇನೆ ಎನ್ನುತ್ತಾರೆ.
ಆರಂಭದಲ್ಲಿ, ಮೊಟ್ಟೆ ಇಡುವ ಕೆಲವು ಎಮು ಹಕ್ಕಿಗಳನ್ನು ತಂದರೆ ಸಾಕು, ಅವುಗಳು ಮೊಟ್ಟೆ ಇಡುತ್ತವೆ. ಯಂತ್ರದ ಸಹಾಯದಿಂದ ಮರಿ ಮಾಡಬಹುದು. ಇದರಿಂದ ಎಮು ಹಕ್ಕಿಗಳ ಸಂತಾನ ವೃದ್ಧಿಯಾಗುತ್ತವೆ. ಒಮ್ಮೆ ಹಣ ಹಾಕಿದರೆ ವರ್ಷದಲ್ಲಿ ಲಕ್ಷಾಂತರ ರೂಪಾಯಿ ದುಡಿಯಬಹುದು. ಮುಕ್ಕಾಲು ಎಕರೆಯಲ್ಲಿ ಒಂದು ವರ್ಷಕ್ಕೆ ಲಕ್ಷಾಂತರ ರೂಪಾಯಿ ಲಾಭ ತರುವ ಏಕೈಕ ದಾರಿ ಎಮು ಸಾಕಾಣಿಕೆಯಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ಎಮು ಸಾಕಾಣಿಕೆಗೆ ಬ್ಯಾಂಕ್ ಮತ್ತು ನಬಾರ್ಡ್ ಸಾಲ ಕೊಡುತ್ತದೆ. ಆದರೆ ದುಡಿಯುವ ಮನಸ್ಸಿರಬೇಕು ಎನ್ನುತ್ತಾರೆ ಮಂಜುನಾಥ.
ಎಮು ಸಾಕಾಣಿಕೆ ಮಾಡಬಯಸುವವರು ಸಂಗೇನಹಳ್ಳಿ ಮಂಜುನಾಥ ಅವರಿಗೆ ಕರೆ ಮಾಡಬಹುದು-9008736001.
್ಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.