ಇವರ ವಯಸ್ಸು ಬರೋಬ್ಬರಿ 72. ಆದರೂ 22ರ ಅದಮ್ಯ ಚೇತನ. ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ನಿವೃತ್ತರಾದರೂ ಆರಾಮದಾಯಕ ಜೀವನ ಮಾಡುವ ಬದಲು ಸದಾ ಚಟುವಟಿಕೆಯಿಂದ ಇರಬಯಸಿದ ಇವರು ತಮ್ಮನ್ನು ತೊಡಗಿಸಿಕೊಂಡದ್ದು ಕೃಷಿಯಲ್ಲಿ.
‘ಆಳು ಮಾಡಿದ್ದು ಹಾಳು’ ಎಂದು ಸ್ವತಃ ದುಡಿಮೆ ಮಾಡಿ ಯಾರೂ ಬೆಳೆಯದಂತಹ ಅತ್ಯುತ್ತಮ ಕಬ್ಬು ಬೆಳೆದು ಮಾದರಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ ಹಲಗತ್ತಿ ಗ್ರಾಮದ ಶಂಕರಗೌಡ. ಮಕ್ಕಳು ಉನ್ನತ ಹುದ್ದೆಯಲ್ಲಿದ್ದು, ಕೈತುಂಬಾ ಸಂಬಳ ತಂದರೂ ಶಂಕರಗೌಡರಿಗೆ ಕೃಷಿಯೇ ಅಚ್ಚುಮೆಚ್ಚು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಯಿಸಿದ ಕೊಳವೆ ಬಾವಿಯಿಂದ ಸಿಕ್ಕ 5ಇಂಚಿನಷ್ಟು ಕಡಿಮೆ ನೀರಿನಲ್ಲಿಯೇ ಹುಲುಸಾದ ಫಸಲು ಬೆಳೆದಿದ್ದಾರೆ.
ನಾಲ್ಕು ಎಕರೆ ಭೂಮಿಯಲ್ಲಿ ಶಂಕರಗೌಡರು ಮಾಡಿರುವ ನಾಟಿ ಪದ್ಧತಿ ಇತರರಿಗಿಂತ ಭಿನ್ನ. ಸಾಮಾನ್ಯವಾಗಿ ಸಾಲಿನಿಂದ ಸಾಲಿಗೆ ೪ ಹಾಗೂ ೬ ಅಡಿ ಮತ್ತು ಇಡಿಯಾದ ಬೀಜದ ಗಣಿಕೆಗಳನ್ನು ಒಂದಕ್ಕೊಂದು ತಾಗಿಕೊಂಡಂತೆ ನಾಟಿ ಮಾಡುತ್ತಾರೆ. ಆದರೆ ಇವರ ಹೊಲದಲ್ಲಿ ಸಾಲಿನಿಂದ ಸಾಲಿಗೆ ೮ ಅಡಿ ಮತ್ತು ಬೀಜದಿಂದ ಬೀಜಕ್ಕೆ ೩ ಅಡಿ ಅಂತರದಲ್ಲಿ ಒಂದೇ ಬೀಜದ ಗಣಿಕೆ ನಾಟಿ ಮಾಡಿದ್ದಾರೆ.
‘ಒಂದೇ ಕಣ್ಣಿನ ನಾಟಿಯಿಂದ ೨೫ಕ್ಕೂ ಹೆಚ್ಚು ಕಬ್ಬು ಬೆಳೆದಿದೆ. ಒಂದು ಕಬ್ಬಿನಲ್ಲಿ ೫ ಇಂಚಿನಷ್ಟು ಗಣಿಕೆಗಳು ಬೆಳೆದಿದೆ. ೧೨ ತಿಂಗಳ ಬೆಳೆಯು ೧೧ ಅಡಿಗಳಷ್ಟು ಎತ್ತರಕ್ಕೆ ಬೆಳೆದಿದೆ. ಒಟ್ಟು ಎಕರೆಗೆ ನೂರು ಟನ್ ಕಬ್ಬು ಬೆಳೆಯುವ ನಿರೀಕ್ಷೆ ಇದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಂಕರಗೌಡ ದಂಪತಿ.
‘ಹೊಲಗದ್ದೆಗಳ ಕೆಲಸಕ್ಕೆ ಕೂಲಿಗಳು ಸಿಗುವುದಿಲ್ಲ ಎಂದು ಕೈ ಕಟ್ಟಿ ಕುಳಿತರೆ ಇರುವ ಭೂಮಿ ಪಾಳು ಬೀಳುತ್ತದೆ. ಕೃಷಿ ಅವಲಂಬಿತ ದೇಶದಲ್ಲಿ ಎಲ್ಲರೂ ಮೈಬಗ್ಗಿಸಿ ದುಡಿದರೆ ಎಂಥ ಕಷ್ಟದಲ್ಲಿಯೂ ಬೆಳೆ ಬರುತ್ತದೆ’ ಎನ್ನುತ್ತಾರೆ ಶಂಕರಗೌಡರು. ಸಂಪರ್ಕಕ್ಕೆ ೯೩೪೧೩೩೪೮೨೮