ಕಸದ ಬುಟ್ಟಿ ಸೇರುವ ಪ್ಲಾಸ್ಟಿಕ್ ಡಬ್ಬ, ಮುರಿದ ಸೈಕಲ್ ಗಂಟೆ, ಬೇಡವೆಂದು ಎಸೆಯುವ ಮೋಟಾರ್ ನೆಟ್ ಇವುಗಳಿಂದಲೇ ಹೊಲಕ್ಕೆ ಬರುವ ಪ್ರಾಣಿ-ಪಕ್ಷಿಯನ್ನು ಓಡಿಸುವ ಉಪಕರಣ ಕಂಡುಹಿಡಿದಿದ್ದಾರೆ ಕೊಪ್ಪಳ ಜಿಲ್ಲೆಯ ಹಾಸಗಲ್ ಗ್ರಾಮದ ಯುವರೈತ ಶ್ರೀನಿವಾಸ ದೋಟಿಹಾಳ. ಇವುಗಳಿಗೆ ಒಂದು ಕಟ್ಟಿಗೆ ಕೋಲು ಕಟ್ಟಿ ಅದಕ್ಕೆ ತಂತಿ ಸುತ್ತಿ ಉಪಕರಣ ಸಿದ್ಧಪಡಿಸಿರುವ ಇವರು, ಅದನ್ನು ಹೊಲದಲ್ಲಿ ಒಂದು ಗೂಟಕ್ಕೆ ಕಟ್ಟುತ್ತಾರೆ. ಬೆಳೆಯ ನಡುವೆ ಕನಿಷ್ಠ ಐದು ಅಡಿ ಎತ್ತರದಲ್ಲಿ ಇದನ್ನು ನೇತು ಹಾಕುತ್ತಾರೆ. ಗಾಳಿ ಬಂದಾಗ ಈ ಯಂತ್ರ ತಿರುಗುತ್ತದೆ. ತಿರುಗುವ ವೇಗಕ್ಕೆ ಶಬ್ದ ಮಾಡುತ್ತದೆ. ಈ ಶಬ್ದವನ್ನು ಕೇಳಿ ಪ್ರಾಣಿ- ಪಕ್ಷಿಗಳೆಲ್ಲಾ ಹೆದರಿ ಓಡಿ ಹೋಗುತ್ತವೆ.
‘ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬಿತ್ತನೆ ಮಾಡಿದಾಗ ಕರಡಿ, ಕಾಡುಹಂದಿ ಹಾಗೂ ಹಕ್ಕಿಗಳು ಬೆಳೆಗಳನ್ನು ನಾಶ ಮಾಡುತ್ತಿದ್ದವು. ಬೆಳೆ ಕಟಾವು ಸಮಯದಲ್ಲೂ ಇವುಗಳ ಹಾವಳಿ ಹೆಚ್ಚಾಗಿದ್ದರಿಂದ ಸೂರ್ಯಕಾಂತಿ, ಶೇಂಗಾ, ಸಜ್ಜಿ, ಜೋಳದ ಬೆಳೆಗಳೂ ಕೈಗೆ ಸಿಗುತ್ತಿರಲಿಲ್ಲ. ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ತಲೆ ನೋವಾಗಿತ್ತು. ಈ ಸಾಧನ ಕಂಡುಹಿಡಿದ ಮೇಲೆ ನೆಮ್ಮದಿಯಿಂದ ಇದ್ದೇನೆ’ ಎಂದು ಖುಷಿಯಿಂದ ಹೇಳುತ್ತಾರೆ ಶ್ರೀನಿವಾಸ. ಈ ಸಾಧನ ಮಾಡುವ ಸಂಬಂಧ ಮಾಹಿತಿ ಬೇಕಿದ್ದರೆ ಸಂಪರ್ಕಿಸಿ: 9591871116