ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಡ್ಡಿ: ಸಾಹಿತ್ಯಿಕ- ಸಾಂಸ್ಕೃತಿಕ ವ್ಯಕ್ತಿತ್ವ

Last Updated 11 ಮೇ 2019, 19:31 IST
ಅಕ್ಷರ ಗಾತ್ರ

‘ಗಿರಡ್ಡಿಯವರ ಶೈಲಿಯ ಪಾರದರ್ಶಕತೆಯ ಬಗ್ಗೆ ಹೆಚ್ಚು ಹೇಳುವ ಕಾರಣವಿಲ್ಲ. ಅವರ ಭಾಷೆಯಲ್ಲಿ ವೈಚಾರಿಕ ಗೊಂದಲಕ್ಕೆ ಅವಕಾಶವೇ ಇಲ್ಲ. ವೈಚಾರಿಕ ಬಿಕ್ಕಟ್ಟು ತಲೆದೋರಿದಾಗಲೆಲ್ಲ – ಅದುಗ್ರಂಥಕ್ಕೆ ಸಂಬಂಧಿಸಿದ್ದಾಗಿರಬಹುದು ಇಲ್ಲವೆ ವಿಮರ್ಶಕನ ತಿಳಿವಳಿಕೆಯಲ್ಲಿಯೇ ಇರಬಹುದು – ಅದರ ಪರಿಹಾರ ಹೇಗೆ ಆಗಬಹುದೆಂದು ಗಿರಡ್ಡಿಯವರ ಭಾಷೆಗೇ ಗೊತ್ತಿರುತ್ತದೆ. ಭಾಷೆ ಸೂಚಿಸುವ ಪರಿಹಾರವನ್ನು ಒಪ್ಪಲೇಬೇಕೆಂಬ ಹಟವೂ ಅವರ ಭಾಷೆಗೆ ಇಲ್ಲ. ಮುಖ್ಯವಾಗಿ ಅವರ ಭಾಷೆ ಯಾವುದೇ ಬಗೆಯ ಆವೇಶದಿಂದ, ತನ್ಮಯತೆಯಿಂದ ಬೀಗುವುದಿಲ್ಲ. ಎತ್ತಿಕೊಂಡ ವಿಷಯದೊಡನೆ ಚಕ್ಕಂದವಾಡುತ್ತ, ಆಟದಲ್ಲಿ ತನ್ಮಯವಾಗದೆ, ಉದ್ದೇಶ ಪೂರ್ತಿಯಾದೊಡನೆ, ಅದರಿಂದ ಬಿಡಿಸಿಕೊಳ್ಳುವುದು ಹೇಗೆಂದು ಭಾಷೆಗೆ ಗೊತ್ತಿರುತ್ತದೆ’. ಇವು ಕೀರ್ತಿನಾಥ ಕುರ್ತಕೋಟಿಯವರು ಗಿರಡ್ಡಿಯವರ ವಿಮರ್ಶೆಯನ್ನು ಕುರಿತು ಹೇಳಿದ ಮಾತುಗಳು.

ಗಿರಡ್ಡಿಯವರ ಭಾಷೆ ಅವರ ವ್ಯಕ್ತಿತ್ವ - ಅಂತಃಕರಣದ ಹೊರಗಿದ್ದ ವ್ಯವಸ್ಥೆಯಲ್ಲ; ಅದು ಅವರೊಳಗಿನ – ಅಂತಃಸತ್ವದೊಂದಿಗೆ ಏಕೀಭವಿಸಿದ್ದು ಎನ್ನುತ್ತಾರೆ ಕುರ್ತಕೋಟಿಯವರು. ಅಂತಲೇ ಅದಕ್ಕೆ ಎಲ್ಲ ಗೊಂದಲಗಳಿಂದಲೂ ಗಿರಡ್ಡಿಯವರನ್ನು ಬಿಡಿಸುವ ಸಹಜ ಕ್ರಿಯೆ ಸಾಧ್ಯವಾಗುತ್ತದೆ. ಆದರೆ ಗಿರಡ್ಡಿಯವರು ತಮ್ಮ ಅಂತಃಸತ್ವದೊಂದಿಗೆ ಏಕೀಭವಿಸಿದ ಭಾಷೆಯನ್ನು ವಸ್ತುನಿಷ್ಠವಾಗಿ ಬಳಸುವ – ಅದನ್ನು ತಮ್ಮಿಂದ ಆಚೆಗಿಟ್ಟು – ವೈಯಕ್ತಿಕತೆಯಿಂದ ಬಿಡಿಸಿ ಬಳಸುವ ಶಕ್ತಿಯನ್ನೂ ಪಡೆದಿದ್ದರೆನ್ನುವುದು ಅವರ ವಿಶೇಷ ಶಕ್ತಿಯನ್ನು ಹೇಳುವಂತಹ ಮಾತಾಗಿದೆ. ವೈಯಕ್ತಿಕತೆಯನ್ನು ಮೀರುವುದು – ವಸ್ತುನಿಷ್ಠತೆಯನ್ನು ಸಾಧಿಸುವುದು ನವ್ಯದ ಬಹುದೊಡ್ಡ ಮೌಲ್ಯವಾಗಿದ್ದಿತು. ಆದರೆ ಅದನ್ನು ಸಾಧಿಸುವುದು ಅತ್ಯಂತ ಕಠಿಣತರವಾದ ಕಾರ್ಯ - ಗ್ರೆಗರಿ ಬೇಟ್ಸನ್ ‘ಆಬ್ಜೆಕ್ಟಿವಿಟಿ ಈಸ್ ಆ್ಯನ್‌ ಇಂಪಾಸ್ಸಿಬಿಲಿಟಿ’ ಎನ್ನುತ್ತಾನೆ. ಆದರೆ ಗಿರಡ್ಡಿಯವರ ಮೂಲವ್ಯಕ್ತಿತ್ವದಲ್ಲಿಯೇ ಇಂತಹ ನಿರಪೇಕ್ಷ ವಸ್ತುನಿಷ್ಠತೆಯನ್ನು ಒಳಗೊಳ್ಳುವ ಸಾಧ್ಯತೆ ಅಡಕವಾಗಿದ್ದಿತು ಅನಿಸುತ್ತದೆ. ಅಂತಲೇ ಅವರು ಅದನ್ನು ಗರಿಷ್ಠ ಪ್ರಮಾಣದಲ್ಲಿ ಸಾಧಿಸಿ ಆತ್ಮಸಾತ್ ಮಾಡಿಕೊಂಡರು. ಅವರ ವಿಮರ್ಶಾ ಲೋಕದುದ್ದಕ್ಕೂ ಈ ರೀತಿಯು ಖಚಿತವಾಗಿ ಕಾಣಿಸುತ್ತದೆ.

ಗಿರಡ್ಡಿಯವರು ಸಾಮಾಜಿಕ ವಾಸ್ತವಗಳನ್ನು ಅತ್ಯಂತ ಸೂಕ್ಷ್ಮವಾಗಿ, ಶುದ್ಧ ನಿರಪೇಕ್ಷದಲ್ಲಿ ಅರಿತುಕೊಂಡಿದ್ದರು. ಸಾಮಾಜಿಕ ನ್ಯಾಯದ ಅನಿವಾರ್ಯತೆ ಕುರಿತು ಅವರಿಗೆ ಖಚಿತವಾದ ಅಭಿಪ್ರಾಯವಿದ್ದಿತು. ಆ ನಿಲುವು ಇಂದಿನ ಬಹುತೇಕ ಪ್ರಗತಿಪರರು ವ್ಯಕ್ತಪಡಿಸುವಂತಹ ರೋಮ್ಯಾಂಟಿಕ್ ಭಾವಾವೇಶ ಆಗಿರಲಿಲ್ಲ - ಭಾವಾವೇಶದ ಈ ರೋಮ್ಯಾಂಟಿಕ್ ನಿಲುವು ಸಮಾಜವನ್ನು ಒಡೆದು ನೋಡುವಂತಹದ್ದೂ, ಅಧಿಕಾರ ರಾಜಕಾರಣದ ಉದ್ದೇಶದ್ದೂ ಆಗಿದೆ. ಅದು ತನ್ನ ಆಳದಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ನಾಶಪಡಿಸಬೇಕು ಎನ್ನುವ ಆಕಾಂಕ್ಷೆಯನ್ನು ಹೊಂದಿರುವಂತಹದ್ದಾಗಿದೆ! ಗಿರಡ್ಡಿಯವರ ನಿಲುವು ಸಾಮಾಜಿಕ ವಾಸ್ತವಗಳ ಅರಿವಿನ ನಿರಪೇಕ್ಷದಲ್ಲಿ ರೂಪುಗೊಂಡ ಅಂತಃಕರಣ ಪ್ರಣೀತ ಅಭಿಜಾತ ರೀತಿಯದು ಆಗಿದ್ದಿತು; ಅಧಿಕಾರ ರಾಜಕಾರಣದ ಬಗೆಗೆ ಶುದ್ಧ ನಿರಪೇಕ್ಷತೆಯನ್ನು ತೋರುವಂತಹದಾಗಿತ್ತು. ಅದು ಮೂಲಭೂತವಾಗಿ ವಸಾಹತುಶಾಹಿಯು ತನ್ನ ಉದ್ದೇಶಗಳಿಗಾಗಿ ನಮ್ಮಲ್ಲಿ ಹರಡಿದ ಭ್ರಮಾಧೀನತೆಯ ಜ್ಞಾನವನ್ನು ನಿರಾಕರಿಸುವಂತಹದು ಆಗಿತ್ತು. ನಮ್ಮ ಸಮಾಜದಲ್ಲಿ ಸೇರಿಕೊಂಡಿರುವ ಅನ್ಯಾಯಗಳಿಗೆ ವಸಾಹತುಶಾಹಿಯು ಕಟ್ಟಿಕೊಟ್ಟ ಇತಿಹಾಸವು ನೀಡುವ ಕಾರಣಗಳು ಅಸಮಂಜಸವಾದವುಗಳು ಎನ್ನುವುದು ಅವರ ತಿಳಿವಳಿಕೆಯಾಗಿದ್ದಿತು. ಅಂತಲೇ, ಅವರ ಅಂತಃಸತ್ವವು ಮಧ್ಯಮ ಮಾರ್ಗವನ್ನು ಒಪ್ಪಿಕೊಳ್ಳುವಂತಾಗಿದ್ದು.

ವಸಾಹತುಶಾಹಿ ನಿರೂಪಿಸಿದ ತಾತ್ವಿಕತೆ ಮತ್ತು ಜ್ಞಾನವನ್ನು ಮರು ಪ್ರಶ್ನಿಸದೇ ಇಡಿಯಾಗಿ ಒಪ್ಪಿಕೊಂಡಿರುವ ಪ್ರಗತಿಪರರೆನ್ನುವ ಎಡಪಂಥೀಯರ ನಿಲುವು ಮತ್ತು ಸಾಮಾಜಿಕ ನ್ಯಾಯಕ್ಕೆ ಕುರುಡುಗಣ್ಣಾದ, ಭಾರತೀಯ ಸಂಸ್ಕೃತಿಯನ್ನು ಉಧ್ವಸ್ತಗೊಳಿಸಿ ತನ್ನ ರಾಜಕೀಯಕ್ಕೆ ಬಳಸುವ ಬಲಪಂಥೀಯ ಕ್ರೌರ್ಯ ಇವೆರಡನ್ನೂ ಗಿರಡ್ಡಿಯವರು ತಮ್ಮ ನಿರಪೇಕ್ಷ-ವಸ್ತುನಿಷ್ಠ ಅಂತಃಕರಣದ ತಿಳಿವಳಿಕೆಯ ನೆಲೆಯಲ್ಲಿ ತಿರಸ್ಕರಿಸಿದರು. ಗಿರಡ್ಡಿಯವರ ಮಧ್ಯಮಮಾರ್ಗ ಎನ್ನುವುದು ಎಡಪಂಥೀಯ ಸಾಮಾಜಿಕ ಕಾಳಜಿಯನ್ನು ಮತ್ತು ಬಲಪಂಥೀಯ ಕಾಳಜಿಯಾದ ಸಾಂಸ್ಕೃತಿಕ ಪರಂಪರೆಯ ನೋಟಗಳನ್ನು ಒಪ್ಪಿಕೊಳ್ಳುವುದಾಗಿತ್ತು. ರಾಜಕಾರಣದ ಬಗೆಗೆ ತೀವ್ರ ನಿರಾಸಕ್ತಿಯನ್ನು ತೋರಿಸುತ್ತಿದ್ದ ಗಿರಡ್ಡಿಯವರ ರಾಜಕಾರಣದ ಸ್ವರೂಪ ಈ ಬಗೆಯದಾಗಿತ್ತು. ಸಾಮಾಜಿಕ ಆರೋಗ್ಯವನ್ನು
ಸಾಂಸ್ಕೃತಿಕ ಕ್ರಿಯಾತ್ಮಕತೆಯ ಮೂಲಕ ಪರಿಭಾವಿಸುವುದು ಗಿರಡ್ಡಿಯವರ ಆಶಯವಾಗಿದ್ದಿತು. ಅಂತಲೇ ಅವರು ತಮ್ಮ ಜೀವನದುದ್ದಕ್ಕೂ ಸಾಂಸ್ಕೃತಿಕ ಕ್ರಿಯಾತ್ಮಕತೆಯನ್ನು ನಡೆಸಿಕೊಂಡು ಬಂದರು.

ವಿದ್ಯಾರ್ಥಿಯಾಗಿದ್ದಾಗ - ಭಾರತ ಮತ್ತು ಇಂಗ್ಲೆಂಡ್‍ನಲ್ಲಿ, ರಂಗ ಚಟುವಟಿಕೆಗಳ ಬಗೆಗೆ ವಿಶೇಷ ಆಸಕ್ತಿ ತೋರಿದರು; ಕಲಬುರ್ಗಿಯಲ್ಲಿ ಅಧ್ಯಾಪಕರಾಗಿದ್ದಾಗ ‘ರಂಗಮಾಧ್ಯಮ’ ಸಂಸ್ಥೆ ಕಟ್ಟಿ ಅಲ್ಲಿ ರಂಗಚಟುವಟಿಕೆ ಗರಿಗೆದರುವಂತೆ ಮಾಡಿದರು; ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ ಅನೇಕ ಸಾಹಿತ್ಯಿಕ ಪುನರುತ್ಥಾನದ ಕಾರ್ಯಗಳನ್ನು ಕೈಕೊಂಡರು; ಮರೆಯಬಾರದ ಹಳೆಯ ಕಥೆಗಳನ್ನು ಪುನಃ ನಮ್ಮ ಹೃದಯದ ಮುಂದೆ ತಂದರು; ‘ಸಾಹಿತ್ಯ ಸಂಭ್ರಮ’ವನ್ನು ಆರಂಭಿಸುವ ಮೂಲಕ ಧಾರವಾಡದಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಹೊಸ ಯುಗವೊಂದನ್ನು ಆರಂಭಿಸಿದರು... ಹೀಗೆ ಗಿರಡ್ಡಿಯವರು ತಮ್ಮ ಜೀವನದುದ್ದಕ್ಕೂ ಹಲವು ಸಾಂಸ್ಕೃತಿಕ ಸಂಘಟನೆಯ ಕಾರ್ಯಗಳನ್ನು ನಡೆಸಿದರು. ಗಿರಡ್ಡಿಯವರ ಬರಹದ ಚಟುವಟಿಕೆಗಳು ಸಾಂಸ್ಕೃತಿಕ ಪುನರುತ್ಥಾನದ ಅವರ ಆಕಾಂಕ್ಷೆಯನ್ನು ಅನುಸರಿಯೇ ನಡೆದುಬಂದವು.

ಗಿರಡ್ಡಿಯವರು ತೀರಿಹೋಗಿ ಈ ತಿಂಗಳ ಹನ್ನೊಂದಕ್ಕೆ ಒಂದು ವರ್ಷವಾಗುತ್ತಿದೆ. ಅವರ ಆದರ್ಶ ಮತ್ತು ಅವರ ಪ್ರೇರಣೆಗಳು ನಮ್ಮ ಮುಂದಿರುವವರೆಗೂ ಗಿರಡ್ಡಿಯವರು ನಮ್ಮೊಂದಿಗೆ ಜೀವಂತವಾಗಿಯೇ ಇರುತ್ತಾರೆ.

ನಿನ್ನೆಯ ದಿನ, ಮೇ ಹನ್ನೊಂದರಂದು ಗಿರಡ್ಡಿಯವರು ಅನುವಾದಿಸಿದ, ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ, ‘ಜಯ’ ಕೃತಿಯನ್ನು ಕುರಿತ ವಿಚಾರಸಂಕಿರಣ ಮತ್ತು ದಕ್ಷಿಣಾಮೂರ್ತಿ ಮತ್ತು ಮಹೇಶ ತಿಪ್ಪಶೆಟ್ಟಿಯವರು ಸಂಪಾದಿಸಿದ, ಗಿರಡ್ಡಿಯವರನ್ನು ಕುರಿತ ಪುಸ್ತಕದ ಬಿಡುಗಡೆಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಧಾರವಾಡದ ಗಿರಡ್ಡಿ ಗೋವಿಂದರಾಜ ಫೌಂಡೇಶನ್ನಿನ ನಾವು ಅವರ ನೆನಪನ್ನು ಹಸಿರಾಗಿಟ್ಟುಕೊಳ್ಳುವ ಪ್ರತ್ಯಭಿಜ್ಞಾನದ ಕಾರ್ಯವನ್ನು ಆಚರಿಸಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT