ಮಲೆನಾಡಿನ ಶಿಕಾರಿಲೋಕ (ಭಾಗ-2)
ಲೇ: ಉಮೇಶ್ ಹೊಸಹಳ್ಳಿ, ಪು: 172; ಬೆ: ರೂ. 120; ಪ್ರ: ಪುಣ್ಯಗಂಗಾ ಪ್ರಕಾಶನ, ಸ.ಸ್ವ.ಪ.ಪೂ. ಕಾಲೇಜು, ವಿದ್ಯಾನಗರ, ಹಾಸನ-573 201.
ಕಥೆ, ಕವಿತೆ ಸಂಕಲನಗಳನ್ನು ಪ್ರಕಟಿಸಿರುವ ಉಮೇಶ್ ಹೊಸಹಳ್ಳಿ `ಮಲೆನಾಡಿನ ಶಿಕಾರಿಲೋಕ~ ಎನ್ನುವ ಪುಸ್ತಕವನ್ನು ಪ್ರಕಟಿಸಿದವರು. ಆ ಕೃತಿಯ ಎರಡನೇ ಭಾಗವನ್ನು ಈಗ ಹೊರತಂದಿದ್ದಾರೆ.
ಮಲೆನಾಡಿನ ಪರಿಸರದಿಂದ ಬಂದ ಲೇಖಕರಿಗೆ ಸಹಜವಾಗಿಯೇ ಕಾಡಿನ ಪ್ರಾಣಿಗಳ ಬಗ್ಗೆ, ಅವುಗಳ ಶಿಕಾರಿಯ ಬಗ್ಗೆ ಕುತೂಹಲ. ಈಗ ಶಿಕಾರಿ ಕಾನೂನುಬಾಹಿರವಾದರೂ, ಶಿಕಾರಿ ಕಥೆಗಳಿಗೆ ಬರವೇನೂ ಅಲ್ಲ. ಅಂಥ ಶಿಕಾರಿ ಅನುಭವಗಳನ್ನು ಸಂಗ್ರಹಿಸಿ ದಾಖಲಿಸುವ ಕೆಲಸವನ್ನು ಈ ಕೃತಿಯಲ್ಲಿ ಉಮೇಶ್ ಮಾಡಿದ್ದಾರೆ.
ಉಮೇಶ್ ಅವರ ಇಲ್ಲಿನ ಬೇಟೆ ಬರಹಗಳಿಗೆ ಕಥನ ಗುಣವಿದೆ. `ಹಾರುವ ಓತಿಯನ್ನು ನಾನೂ ನೋಡಿದ್ದೆ~ ಬರಹ ತೇಜಸ್ವಿ ಅವರ ಬಗ್ಗೆ ಲೇಖಕರ ಅಭಿಮಾನವನ್ನು ತೋರಿಸುವಂತಿದೆ. `ಶಿಕಾರಿಯ ವಿಧಗಳು~ ಸಂಕಲನದ ದೀರ್ಘವಾದ ಬರಹ.
ಶಿಕಾರಿಯ ಹಲವು ವಿಧಗಳನ್ನು ಸಾದೋಹರಣವಾಗಿ ವಿವರಿಸುವ ಈ ಬರಹ, ಬೇಟೆಗೆ ಸಂಬಂಧಿಸಿದ ಹಲವು ಅಪರೂಪದ ವಿವರಗಳನ್ನು ದಾಖಲಿಸುತ್ತದೆ. ಉದ್ದಕ್ಕೂ ಇರುವ ಉಪಕಥನಗಳು ಬರಹದ ಸ್ವಾರಸ್ಯವನ್ನು ಹೆಚ್ಚಿಸಿವೆ. `ಮಲಗಿದ್ದ ಮಲೆಸರ್ಪಕ್ಕೆ ಗುಂಡು ಹೊಡೆದಾಗ~ ಒಂದು ರೋಚಕ ಬರಹ.
ಶಿಕಾರಿಲೋಕ ಎನ್ನುವುದು ಪುಸ್ತಕದ ಶೀರ್ಷಿಕೆಯಾದರೂ, ಲೇಖಕರು ಶಿಕಾರಿಯ ನೆಪದಲ್ಲಿ ಮಲೆನಾಡಿನ ಸಂಸ್ಕೃತಿಯನ್ನು ಪರಿಚಯಿಸಲು ಪ್ರಯತ್ನಿಸಿದ್ದಾರೆ. `ಮಳೆಗಾಲವೂ ನಮ್ಮ ಆಹಾರವೂ~, `ಹೆಣ್ಣು ಕೇಳಿ ಮದುವೆ ಮಾಡಿಸಿದ ಚೌಡಿ~, `ಸುಡುಗಾಡಿನಲ್ಲಿ ಸರಿರಾತ್ರಿ~ ಬರಹಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು.
ಇವು ಲಲಿತ ಪ್ರಬಂಧಗಳಂತೆಯೂ ಓದಿಸಿಕೊಳ್ಳುತ್ತದೆ. ಕೊನೆಯಲ್ಲಿ ನೀಡಿರುವ ಬೇಟೆ ಪದಕೋಶ ಹಾಗೂ ವನ್ಯಜೀವಿ ಕಾಯ್ದೆಯ ಪಕ್ಷಿನೋಟ ಪುಸ್ತಕದ ವೈವಿಧ್ಯವನ್ನು ಹೆಚ್ಚಿಸಿವೆ.