ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಕೆ.ಸಂಧ್ಯಾ ಶರ್ಮ ಅವರ ಕವಿತೆ: ಮರೆತೇನೆಂದರೆ ಮರೆಯಲಿ ಹೇಗೆ?

Published 26 ಆಗಸ್ಟ್ 2023, 23:30 IST
Last Updated 26 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ನನ್ನ ಮೈಗಂಟಿದ ಚರ್ಮ ನೀ ಇದ್ದೆ

ಉಸಿರಲ್ಲಿನ ಘಮವಾಗಿ ಲಯದೊಡಲಿನ ತಾಳವಾಗಿ

ಬಾಳ ಪಯಣದ ಕನಸಾಗಿ ಬದುಕಿನ ಭರವಸೆಯಾಗಿ.

ಈಗೇಕೆ ಕಾಡುವೆ ಈ ಪರಿಯಾಗಿ?


ಹೇಳಲೇ ಇಲ್ಲ ನೀನು ನಿನ್ನೊಳಗೆ

ನಾನೆಂಬ ಕಟು ಸತ್ಯವ

ಅಕ್ಕ, ಹೇಳು:ಇದು

ವಿಶ್ವಾಸ ಘಾತವೇ

ನಿನ್ನೊಳಗೆ ನಾನು, ನನ್ನೊಳಗೆ ನೀನು

ಈ ಬಂಧ ಸಂಬಂಧ

ಹೇಗೆ ಕಳಚಿಕೊಂಡು ದೂರಾದೆ?

ನಾನೆಂತು ಇಲ್ಲೇ ಉಳಿದು ಹೋದೆ?


ಹಾರಿ ಹೋದೆ ನೀನು ಸುಳಿವೇ ಕೊಡದೆ

ನಾನಿಲ್ಲೇ ಒಂಟಿ ಉಳಿದೇ ಹೋದೆ !


ಈಗ ಈ ಮನೆ ಮನದಲ್ಲಿ ಭಣಗುಡುವ ಮೌನ.

ನಿನ್ನ ಹೆಜ್ಜೆಯಲಿರದ ಗೆಜ್ಜೆಯ ದನಿಯ ಮೆಲು ಸದ್ದು

ಕೇಳಿಯೂ ಕೇಳಿಸದಂತೆ

ಇದ್ದದ್ದೇ ಸುಳ್ಳೆನುವ ‌ಹಾಗೆ ಈಗಿಲ್ಲಿ

ಹರಡಿಕೊಂಡಿದೆ ನಿತಾಂತ ಮೌನ.

ನನ್ನೊಳಗಿನ ಜೀವರಸ ನೀನಿರದೆ ನಾನೀಗ

ರಸಹೀನ ಕಬ್ಬಿನ ಸಿಪ್ಪೆ.


ಅರಿಯದೇ ಹೋದೆ ನಿನ್ನಲ್ಲಿ ಅಡಗಿದ್ದ

ನನ್ನ ಜೀವ ಪಕ್ಷಿ ಈಗ ನಿಸ್ತೇಜ.

ಈಗಿರದ ನನ್ನ ಜೀವರಸವೇ

ನನ್ನ ರಕ್ತದ ಹನಿಯೇ

ನನ್ನ ಬಾಳ ಪಥ ಬದಲು ಮಾಡಿದ

ನನ್ನುಸಿರ ಸೂತ್ರಧಾರಳೇ

ಈಗಲಾದರೂ ಹೇಳಿಬಿಡು ನೀನು

ಹೋಗಿಯೇ ಬಿಟ್ಟೆ ಯಾಕೆ

ನನ್ನ ತಬ್ಬಲಿ ಮಾಡಿ.?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT