ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಮಾಧ್ಯಮ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಅಗತ್ಯ: ಸಾಹಿತಿ ಡಾ.ಹಂ.ಪ.ನಾಗರಾಜಯ್ಯ

ಸಮಾರೋಪದಲ್ಲಿ ಡಾ.ಹಂ.ನಾಗರಾಜಯ್ಯ ಸಲಹೆ
Last Updated 6 ಜನವರಿ 2019, 15:44 IST
ಅಕ್ಷರ ಗಾತ್ರ

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಜಗತ್ತಿನಲ್ಲಿ 60 ವರ್ಷಗಳಲ್ಲಿ 120 ಭಾಷೆಗಳು ನಾಶವಾಗಿವೆ ಈ ಹೊತ್ತಿನಲ್ಲಿ ಕನ್ನಡಿಗರು ಶಿಕ್ಷಣದಲ್ಲಿ ಭಾಷಾ ಮಾಧ್ಯಮದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಅಗತ್ಯ’ ಎಂದು ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಹೇಳಿದರು.

84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ‘ಭಾಷೆಗಳು ಜನರಿಂದ ದೂರವಾದಾಗ ವಿನಾಶದತ್ತ ಹೋಗುತ್ತವೆ. ಅಂತಹ ಅಪಾಯ ಬಾರದಂತೆ ಕನ್ನಡವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ’ ಎಂದರು.

‘ಕನ್ನಡ ನಮ್ಮ ಹೃದಯ. ಅದಕ್ಕೆ ನೋವಾದರೆ ಕನ್ನಡಿಗರು ಕಣ್ಣೀರು ಸುರಿಸಬೇಕಾಗುತ್ತದೆ. ಭಾರತದಲ್ಲಿ ಭಾಷೆ ಮತ್ತು ಸಂಸ್ಕೃತಿಗೆ ಕೊಡುವಷ್ಟು ನೆರವು, ಪ್ರೋತ್ಸಾಹವನ್ನು ಬೇರೆ ಯಾವ ರಾಜ್ಯಗಳೂ ನೀಡುತ್ತಿಲ್ಲ. ಇಲ್ಲಿ ಪಕ್ಷಭೇದವಿಲ್ಲದೆ ಸಹಾಯ ದೊರೆಯುತ್ತಿದೆ. ಎಲ್ಲ ಮುಖ್ಯಮಂತ್ರಿಗಳೂ ಕನ್ನಡದ ವಿಚಾರದಲ್ಲಿ ಧಾರಾಳತನ ತೋರುತ್ತಾರೆ’ ಎಂದು ಹೇಳಿದರು.

ಸಾಹಿತ್ಯದಲ್ಲಿ ರಾಜಕಾರಣ ಬರಬಾರದು. ಆದರೆ, ರಾಜಕಾರಣಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಹಿತ್ಯದತ್ತ ಆಕರ್ಷಿತರಾದರೆ ಒಳ್ಳೆಯದು. ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಕನ್ನಡದ ಪರವಾದ ದೊಡ್ಡ ಧ್ವನಿಯಾಗಿದ್ದಾರೆ. ಎಂದಿಗೂ ಅವರು ಕನ್ನಡಪರ ಜನರ ಮುಖವಾಣಿಯಂತೆ ಇದ್ದಾರೆ ಎಂದು ಶ್ಲಾಘಿಸಿದರು.

ಬದಲಾವಣೆ ಬರಲಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ‘ಸಾಹಿತ್ಯ ಸಾಮಾಜಿಕ ಬದಲಾವಣೆಗೂ ಕಾರಣವಾಗಬೇಕು. ಇರುವ ಸಂಪನ್ಮೂಲವನ್ನು ಬಳಸಿಕೊಂಡು ಎಲ್ಲ ಜನರ ಜೀವನವನ್ನು ಸುಧಾರಣೆ ಮಾಡಲು, ಬದಲಾವಣೆ ತರಲು ಕಾರಣವಾಗುವಂತಹ ಜ್ಞಾನವನ್ನು ಪಸರಿಸಲು ಕನ್ನಡ ಸಾಹಿತ್ಯ ಸಶಕ್ತವಾಗಬೇಕು’ ಎಂದರು.

ರಾಜಕಾರಣಿಗಳು ಅಕ್ಷರ ಮಾರಾಟ ಮಾಡುವ ಮಾಲ್‌ಗಳನ್ನು ತೆರೆದು ಉಳಿತಿದ್ದಾರೆ. ಇದರಿಂದ ಸಮಾಜವನ್ನು ರಕ್ಷಿಸಬೇಕಾದರೆ ಶಿಕ್ಷಣದ ರಾಷ್ಟ್ರೀಕರಣ ಆಗಬೇಕು. ಅದರ ಜೊತೆಯಲ್ಲೇ ದೇಶದ ಸಂಪತ್ತನ್ನು ಬಳಸಿಕೊಳ್ಳುವ ಉದ್ಯಮಗಳ ರಾಷ್ಟ್ರೀಕರಣವೂ ಆಗಬೇಕು. ಜಿಂದಾಲ್‌ನಂತಹ ಕೈಗಾರಿಕೆಗಳಿಗೆ ರೈತರ ಪಾಲಿನ ನೀರನ್ನು ನೀಡುವುದು ನಿಲ್ಲಬೇಕು ಎಂದು ಆಗ್ರಹಿಸಿದರು.

ವಿರೋಧಕ್ಕೆ ಬೆಂಬಲಿಸಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್‌ ಮಾತನಾಡಿ, ‘ಸರ್ಕಾರದಿಂದಲೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯುವ ನಿರ್ಧಾರವನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ವಿರೋಧಕ್ಕೆ ಸಿದ್ದರಾಮಯ್ಯ ಅವರೂ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರತ್ಯೇಕ ರಾಜ್ಯಧ್ವಜ ಹೊಂದುವ ಕುರಿತು ಹಿಂದಿನ ಸರ್ಕಾರದ ಅವಧಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗನೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT