ಈ ಮಾತನ್ನು‘ಭಾರತೀಯ ಧರ್ಮ – ಅಂತಃಸತ್ವದ ಹುಡುಕಾಟ‘ ಕೃತಿಯ ಎಲ್ಲ ಲೇಖನಗಳಲ್ಲೂ ಎಡ–ಬಲಗಳೆಂಬ ಎರಡೂ ಗುಂಪುಗಳಿಗೆ ಒತ್ತಿ ಹೇಳುತ್ತಾ ಸಮನ್ವಯಕಾರರಾಗಲು ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಪ್ರಯತ್ನಿಸಿದ್ದಾರೆ. ಎಡ ಬಲಗಳ ಈ ಅಬ್ಬರದ ಕಾಲದಲ್ಲಿ ಮಧ್ಯಮ ಮಾರ್ಗದ ಜರೂರನ್ನು ಮನದಟ್ಟು ಮಾಡುವ ಪ್ರಯತ್ನದಂತೆ ಈ ಕೃತಿ ಗೋಚರವಾಗುತ್ತದೆ. ಎರಡೂ ಗುಂಪುಗಳಲ್ಲಿರುವ ಅತಿರೇಕಗಳ ಬಗ್ಗೆ ಅವರಿಗೆ ಬೇಸರವಿದೆ. ಸಾತ್ವಿಕ ಕೋಪವೂ ಇದೆ. ಈ ಗುಂಪುಗಳಲ್ಲಿ ನಿಂತು ಸುದ್ದಿಯಾದವರು, ವಿವಾದ ಸೃಷ್ಟಿಸಿದವರಿಗೆ ಅವರ ಮಾತುಗಳ ಉಲ್ಲೇಖಗಳ ಸಹಿತ ಮಧ್ಯಮ ಚಿಂತನೆಯಲ್ಲೇ ಉತ್ತರಿಸಲು ಪ್ರಯತ್ನಿಸಿದ್ದಾರೆ. ಹುಸಿವಾದಗಳನ್ನು ಬಯಲುಗೊಳಿಸುವ ಉತ್ಸಾಹವನ್ನೂ ಪ್ರದರ್ಶಿಸಿದ್ದಾರೆ. ಹಾಗೆಯೇ ಕರ್ಮಠ ಆಚರಣೆಗಳು, ಮಡಿಮೈಲಿಗೆ ಹೆಸರಿನ ಕಂದಾಚಾರಗಳನ್ನು ಖಂಡಿಸಲೂ ಹಿಂಜರಿದಿಲ್ಲ (ಭಾರತೀಯ ಧರ್ಮ: ಸಮಸ್ಯೆ ಸವಾಲುಗಳು, ಅಂತಿಮ ಪರಿಶೀಲನೆ ಲೇಖನಗಳು).