ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸುಸ್ವರದ ಗೀತ ಗೊಂಚಲು

Last Updated 1 ಜನವರಿ 2022, 19:30 IST
ಅಕ್ಷರ ಗಾತ್ರ

ಆಕಾಶವಾಣಿಗೆ ಕಿವಿಯಾಗುವ ಸುಖವೇ ಬೇರೆ. ಬಾಲ್ಯದಲ್ಲಿ ಕೇಳಿದ ಸುಮಧುರ ಗೀತೆಗಳು ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತವೆ. ಅಂತಹ ಆಕಾಶವಾಣಿಯ ಸಂಗೀತವನ್ನು ಬಾಲ್ಯದಿಂದಲೂ ಕೇಳಿಸಿಕೊಂಡ ಲೇಖಕಿ ಜ್ಯೋತಿ ಗುರುಪ್ರಸಾದ್‌, ಆಯ್ದ 73 ಕನ್ನಡದ ಚಿತ್ರಗೀತೆಗಳ ಅರ್ಥ, ಒಳಾರ್ಥ ಮತ್ತು ಕವಿತೆಯ ಹಿಂದಿನ ಕಥೆಯನ್ನು ವಿಶ್ಲೇಷಿಸಿದ ಕೃತಿ ‘ಮನಸು ಮಾಗಿದ ಸುಸ್ವರ’. ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹಗಳ ಗುಚ್ಛವಿದು. ಚಿತ್ರಗೀತೆಗಳ ಸಮೃದ್ಧ ಸಾಹಿತ್ಯ, ಭಾಷಾ ಗಟ್ಟಿತನವನ್ನು ಓದುಗನ ಮುಂದೆ ತೆರೆದಿಡುವಲ್ಲಿ ಕೃತಿ ಯಶಸ್ವಿಯಾಗಿದೆ. 

ಸುಮ್ಮನೆ ಚಿತ್ರಗೀತೆಗಳನ್ನು ಓದಿ ವಿಶ್ಲೇಷಿಸಿದ್ದಲ್ಲ. ಕೇಳಿ, ಸ್ಮರಿಸಿ ರಸಗ್ರಹಣ ಮಾಡಿ ಬರೆದ ಲೇಖನಗಳಿವು. ಇಲ್ಲಿನ ಗೀತೆಗಳ ಪೈಕಿ ಬಹುತೇಕ ಚಿತ್ರಗಳನ್ನು ವೀಕ್ಷಿಸಿದ ಲೇಖಕಿ ಗೀತ–ಚಿತ್ರ ಎರಡನ್ನೂ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆಯಾ ಚಿತ್ರ, ಸಾಹಿತಿ, ಗಾಯಕರ ಪುಟ್ಟ ಪರಿಚಯವೂ ಇರುವುದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಕಪ್ಪು ಬಿಳುಪು ಯುಗದಿಂದ 90ರ ದಶಕದ ಅಂಚಿನವರೆಗಿನ ಗೀತೆಗಳನ್ನು ಆಯ್ದು ವಿಶ್ಲೇಷಿಸಲಾಗಿದೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಸೌಖ್ಯಗಳ ತತ್ವದ ಅಡಿಯಲ್ಲಿ ಈ ಗೀತೆಗಳನ್ನು ಒರೆಗೆ ಹಚ್ಚಲಾಗಿದೆ ಎಂದಿದ್ದಾರೆ ಲೇಖಕಿ. ಹಾಡಿನಲ್ಲಿ ಪೂರ್ಣ ಕಥೆಯೇ ಹೆಣೆದುಕೊಂಡು ಪಾತ್ರಗಳನ್ನು ನಿರ್ದೇಶಿಸುವ ಸಂಗತಿಯನ್ನೂ ಅವರು ರತ್ನಗಿರಿ ರಹಸ್ಯ ಚಿತ್ರದ ‘ಅಮರ ಮಧುರಾ ಪ್ರೇಮ... ನೀ ಬಾ ಬೇಗ ಚಂದಮಾಮ...’ ಗೀತೆಯಲ್ಲಿ ಗುರುತಿಸಿದ್ದಾರೆ. ಇಂಥದ್ದೇ ಚಿತ್ರಣ ‘ಮೆಲ್ಲುಸಿರೇ ಸವಿಗಾನ...’ ಗೀತೆಯ ವಿಶ್ಲೇಷಣೆಯಲ್ಲೂ ಕಾಣಬಹುದು.

ಮನಸು ಮಾಗಿದ ಸುಸ್ವರ

ಲೇ: ಜ್ಯೋತಿ ಗುರುಪ್ರಸಾದ್‌

ಪ್ರ: ದೇಸಿ ಪುಸ್ತಕ

ಸಂ: 9342326655

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT