ಸುಮ್ಮನೆ ಚಿತ್ರಗೀತೆಗಳನ್ನು ಓದಿ ವಿಶ್ಲೇಷಿಸಿದ್ದಲ್ಲ. ಕೇಳಿ, ಸ್ಮರಿಸಿ ರಸಗ್ರಹಣ ಮಾಡಿ ಬರೆದ ಲೇಖನಗಳಿವು. ಇಲ್ಲಿನ ಗೀತೆಗಳ ಪೈಕಿ ಬಹುತೇಕ ಚಿತ್ರಗಳನ್ನು ವೀಕ್ಷಿಸಿದ ಲೇಖಕಿ ಗೀತ–ಚಿತ್ರ ಎರಡನ್ನೂ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆಯಾ ಚಿತ್ರ, ಸಾಹಿತಿ, ಗಾಯಕರ ಪುಟ್ಟ ಪರಿಚಯವೂ ಇರುವುದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಕಪ್ಪು ಬಿಳುಪು ಯುಗದಿಂದ 90ರ ದಶಕದ ಅಂಚಿನವರೆಗಿನ ಗೀತೆಗಳನ್ನು ಆಯ್ದು ವಿಶ್ಲೇಷಿಸಲಾಗಿದೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಸೌಖ್ಯಗಳ ತತ್ವದ ಅಡಿಯಲ್ಲಿ ಈ ಗೀತೆಗಳನ್ನು ಒರೆಗೆ ಹಚ್ಚಲಾಗಿದೆ ಎಂದಿದ್ದಾರೆ ಲೇಖಕಿ. ಹಾಡಿನಲ್ಲಿ ಪೂರ್ಣ ಕಥೆಯೇ ಹೆಣೆದುಕೊಂಡು ಪಾತ್ರಗಳನ್ನು ನಿರ್ದೇಶಿಸುವ ಸಂಗತಿಯನ್ನೂ ಅವರು ರತ್ನಗಿರಿ ರಹಸ್ಯ ಚಿತ್ರದ ‘ಅಮರ ಮಧುರಾ ಪ್ರೇಮ... ನೀ ಬಾ ಬೇಗ ಚಂದಮಾಮ...’ ಗೀತೆಯಲ್ಲಿ ಗುರುತಿಸಿದ್ದಾರೆ. ಇಂಥದ್ದೇ ಚಿತ್ರಣ ‘ಮೆಲ್ಲುಸಿರೇ ಸವಿಗಾನ...’ ಗೀತೆಯ ವಿಶ್ಲೇಷಣೆಯಲ್ಲೂ ಕಾಣಬಹುದು.