ಬೆಂಗಳೂರು: ‘ನನ್ನ ಮೇಲೆ ಹಲ್ಲೆ ನಡೆಸಿದ್ದ ಅಂತರರಾಷ್ಟ್ರೀಯ ಕ್ರಿಕೆಟಿಗ ಅಮಿತ್ ಮಿಶ್ರಾ, ಈವರೆಗೂ ಕ್ಷಮಾಪಣೆ ಕೋರಿಲ್ಲ. ಹೀಗಿರುವಾಗ ನಾನೇಕೆ ದೂರು ಹಿಂಪಡೆಯಲಿ’ ಎಂದು ಅಮಿತ್ ಮಿಶ್ರಾ ಅವರ ಗೆಳತಿ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಹೇಳಿದ್ದಾರೆ.
ವಂದನಾ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಗಳವಾರ ಮಿಶ್ರಾ ಅವರನ್ನು ಬಂಧಿಸಿದ್ದ ಅಶೋಕನಗರ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
‘ಗೆಳತಿ ವಂದನಾ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, ರಾಜಿ ಮೂಲಕ ವಿವಾದ ಬಗೆಹರಿಸಿಕೊಂಡಿದ್ದೇವೆ’ ಎಂದು ಮಿಶ್ರಾ ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದರು. ಆದರೆ, ವಂದನಾ ಅವರು ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಬುಧವಾರ ಮುಂಬೈಗೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರಕರಣ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದೆ. ಈಗಲೂ ನನ್ನ ಆರೋಪಕ್ಕೆ ಬದ್ಧಳಾಗಿದ್ದೇನೆ. ತನಿಖೆಗೆ ಸಹಕಾರ ನೀಡುತ್ತಿದ್ದೇನೆ.
ರಾಜಿ ಮೂಲಕ ಬಗೆಹರಿಸುವ ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂದರು. ‘ಮಿಶ್ರಾ ಅವರ ಭವಿಷ್ಯ ಹಾಳು ಮಾಡಬೇಕೆಂಬ ಯಾವುದೇ ದುರುದ್ದೇಶವಿಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ಅವರು ನನ್ನ ಮನೆಗೆ ಬಂದು ಹೋಗುತ್ತಿದ್ದರು. ಹೀಗಿರುವಾಗ ಅವರ ಕೊಠಡಿಗೆ ಹೋಗುವುದಕ್ಕೆ ನನಗೇಕೆ ನಿರ್ಬಂಧ. ಅಷ್ಟೊಂದು ರಾದ್ಧಾಂತ ಮಾಡುವ ಅಗತ್ಯವೇನಿತ್ತು’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
‘ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಯೋಗಕ್ಷೇಮ ವಿಚಾರಿಸಲೂ ಅವರು ಕರೆ ಮಾಡಿಲ್ಲ. ಘಟನೆ ನಂತರ ಮುಖಾಮುಖಿ ಭೇಟಿಯೂ ಆಗಿಲ್ಲ. ಹೀಗಿರುವಾಗ ಅವರು ಕ್ಷಮಾಪಣೆ ಕೇಳಿದ್ದಾರೆ ಎಂಬ ಮಾತೆಲ್ಲಿ ಬಂತು? ನಾನೇಕೆ ದೂರು ಹಿಂಪಡೆಯುವ ಯೋಚನೆ ಮಾಡಲಿ’ ಎಂದು ಆಕ್ರೋಶದಿಂದ ನುಡಿದರು.
‘ನನ್ನ ಮೇಲೆ ಹಲ್ಲೆ ನಡೆದಿರುವುದಕ್ಕೆ ವೈದ್ಯಕೀಯ ದಾಖಲೆಗಳಿವೆ. ಸೆ.26ರಂದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಆ ದಾಖಲೆಗಳನ್ನು ಅದೇ ದಿನ ಮಧ್ಯಾಹ್ನ ಪೊಲೀಸರಿಗೆ ಒಪ್ಪಿಸಿದ್ದೇನೆ’ ಎಂದು ವಂದನಾ ಹೇಳಿದರು.