ಉಳ್ಳಾಲ: ನಿಷೇಧಾಜ್ಞೆ ಮುಂದುವರಿಕೆ

ಉಳ್ಳಾಲ: ಉಳ್ಳಾಲ ಮೊಗವೀರಪಟ್ಣದಲ್ಲಿ ಎರಡು ಕೋಮಿನ ಗುಂಪುಗಳ ನಡುವೆ ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮುಂದುವರಿಸಿದ್ದಾರೆ. ಉಳ್ಳಾಲ ಪರಿಸರದಲ್ಲಿ ಶುಕ್ರವಾರ ಬಸ್ಗೆ ಕಲ್ಲೆಸೆದ ಘಟನೆ ನಡೆದಿದ್ದು, ಮಗುವೊಂದು ಗಾಯಗೊಂಡಿದೆ. ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.
ದೋಣಿಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಜನರು ಗುಂಪು ಸೇರಿದ್ದರು. ವ್ಯಕ್ತಿಯೊಬ್ಬರ ಮೇಲೂ ಹಲ್ಲೆ ನಡೆಯಿತು. ಗಾಯಾಳುವನ್ನು ಕೋಡಿ ನಿವಾಸಿ ಮಹಮ್ಮದ್ ಶಹನವಾಜ್ ಎಂದು ಗುರುತಿಸಲಾಗಿದೆ.
ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಈ ಸಂದರ್ಭದಲ್ಲಿ ಗುಂಪು ಕಲ್ಲೆಸೆದುದರಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಉಳ್ಳಾಲ ಪರಿಸರದಲ್ಲಿ ಶುಕ್ರವಾರವೂ ಬಸ್ ಮತ್ತಿತರ ವಾಹನಗಳ ಓಡಾಟ ಸ್ಥಗಿತಗೊಂಡಿತ್ತು. ಸೀರೋಡ್ನ ಸೋಲಾರ್ ಗೇಮ್ಸ್ ಕ್ಲಬ್ನ ಗಾಜು, ಪೀಠೋಪಕರಣ, ಧ್ವಜಸ್ತಂಭವನ್ನು ಪುಡಿ ಮಾಡಲಾಗಿದೆ. ಮೂರು ಮನೆಗಳಿಗೂ ಕಲ್ಲೆಸೆಯಲಾಗಿದೆ. ಉಳ್ಳಾಲ ಕೋಡಿ ನಿವಾಸಿಗಳು ಪ್ರತಿ ದಾಳಿಗೆ ಮುಂದಾಗಿ ಮೊಗವೀರಪಟ್ಣದ ಕೆಲವು ಮನೆಗಳಿಗೆ ಕಲ್ಲು ತೂರಾಟ ನಡೆಸಿದರು. ಆಗ ಕೆಎಸ್ಆರ್ಪಿ ತುಕಡಿಗಳು ಹಾಗೂ ಪೊಲೀಸರು ಬಂದು ಲಾಠಿ ಪ್ರಹಾರ ನಡೆಸಿ ಸ್ಥಳದಲ್ಲಿದ್ದವರನ್ನು ಚದುರಿಸಿದರು.
ಬಂಧಿತರು ಬಳ್ಳಾರಿ ಜೈಲಿಗೆ:75 ಜನರನ್ನು ಬಂಧಿಸಲಾಗಿದ್ದು, ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಎಲ್ಲರಿಗೂ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಬಳ್ಳಾರಿ ಜೈಲಿಗೆ ಕೊಂಡೊಯ್ಯಲಾಗಿದೆ. ಈ ಘಟನೆ ನಂತರವೂ ಬಂಡಿಕೊಟ್ಯದಲ್ಲಿರುವ ಮಲರಾಯ ದೇವಸ್ಥಾನ, ಬ್ರಹ್ಮಶ್ರೀ ನಾರಾಯಣ ಗುರು, ತೊಕ್ಕೊಟ್ಟು ವಿಠೋಭ ಮಂದಿರಗಳಿಗೆ ಕಲ್ಲು ತೂರಾಟ ನಡೆದು ಹಾನಿ ಮಾಡಲಾಗಿದೆ. ಗಾಳಿ ಸುದ್ದಿಗಳಿಗೆ ಓಗೊಡದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.