ಸೋಮವಾರ, ಮಾರ್ಚ್ 27, 2023
21 °C

ಎಂಟು ತಾಸು ಈಜಿ ದಡ ಸೇರಿದ ಏಳು ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಟು ತಾಸು ಈಜಿ ದಡ ಸೇರಿದ ಏಳು ಮಂದಿ

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ಪಟ್ಟಿ ದೋಣಿಯೊಂದು ಅಲೆಗಳ ರಭಸಕ್ಕೆ ಸಿಲುಕಿ ಮಗುಚಿದ ಪರಿಣಾಮ ಅದರಲ್ಲಿದ್ದ ಎಂಟು ಮೀನುಗಾರರ ಪೈಕಿ ಒಬ್ಬ ನಾಪತ್ತೆಯಾಗಿರುವ ಘಟನೆ ಇಲ್ಲಿನ ಮಾವಿನಕುರ್ವೆ ಬಂದರು ಸಮೀಪ ಬುಧವಾರ ರಾತ್ರಿ ನಡೆದಿದೆ.



ಉಳಿದ 7 ಮೀನುಗಾರರು ಸುಮಾರು 8 ತಾಸು ಈಜಿ, ಬೇರೊಂದು ದೋಣಿಯ ಮೂಲಕ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾವಿನಕುರ್ವೆ ಬಂದರಿನ ಮಂಜುನಾಥ ಬಾಬು ಖಾರ್ವಿ (35) ಅವರಿಗಾಗಿ ಹುಡುಕಾಟ ನಡೆದಿದೆ. ಗುರುವಾರ ಸಂಜೆವರೆಗೂ ಪತ್ತೆಯಾಗಿಲ್ಲ.



ಮಾವಿನಕುರ್ವೆಯ ಪಾಂಡುರಂಗ ಖಾರ್ವಿ, ಕೃಷ್ಣ ಖಾರ್ವಿ, ನಾಗೇಶ ಖಾರ್ವಿ, ರಾಮದಾಸ ಖಾರ್ವಿ, ಮಾದೇವ ಖಾರ್ವಿ, ಸುಭಾಸ ಖಾರ್ವಿ, ಅಜಿತ್ ಖಾರ್ವಿ ಈಜಿ ದಡ ಸೇರಿದವರು.



ಸತತ ಈಜಿದ್ದರಿಂದ ತೀವ್ರ ಅಸ್ವಸ್ಥಗೊಂಡಿರುವ ಇವರೆಲ್ಲರನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.



ಇವರೆಲ್ಲರೂ ಬುಧವಾರ ಮಧ್ಯಾಹ್ನ ಶ್ರೀ ಗುರು ಅನುಗ್ರಹ ಎಂಬ ಪಟ್ಟಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಂಜೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ದೋಣಿ ಮಗುಚಿತು ಎನ್ನಲಾಗಿದೆ.



ಎಲ್ಲರೂ ನೀರಿನಲ್ಲಿ ಮುಳುಗಿದಾಗ ಮಂಜುನಾಥ ಖಾರ್ವಿ ಮಾತ್ರ ನಾಪತ್ತೆಯಾದರು. ಉಳಿದ 7 ಮಂದಿ ತಡರಾತ್ರಿವರೆಗೂ ಈಜಿ, ಬಳಿಕ ಮತ್ಸ್ಯರಾಜ ಎಂಬ ದೋಣಿಯ ಸಹಾಯದಿಂದ ದಡಕ್ಕೆ ಬಂದು ತಲುಪಿದ್ದಾರೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೀನುಗಾರರನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.