ಕಂಪಲಾಪುರ ದುರಂತದಲ್ಲಿ 9 ಜನ ಸಾವು

ಬೆಂಗಳೂರು: ರಾಜ್ಯದ ಮೂರು ಕಡೆ ಬುಧವಾರ ನಡೆದ ರಸ್ತೆ ಅಪಘಾತಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಬಳಿ ನಡೆದ ಅಪಘಾತದಲ್ಲಿ 9 ಮಂದಿ ಮತ್ತು ಮಾನ್ವಿ ತಾಲ್ಲೂಕಿನ ಪೋತ್ನಾಳ ಸಮೀಪ ಬೈಕ್ಗೆ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಬಾಲಕರು ಹಾಗೂ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪ ಲಾರಿ ಡಿಕ್ಕಿ ಹೊಡೆದು ಇಬ್ಬರು ಸಾವಿಗೀಡಾದ ಘಟನೆ ಬುಧವಾರ ನಡೆದಿದೆ.
ಪಿರಿಯಾಪಟ್ಟಣ ವರದಿ (ಮೈಸೂರು ಜಿಲ್ಲೆ): ತಾಲ್ಲೂಕಿನ ಕಂಪಲಾಪುರದ ಬಳಿ ಟೆಂಪೊ ಟ್ರಾವೆಲರ್ ಮತ್ತು ಸರಕು ಸಾಗಣೆ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮಕ್ಕಳೂ ಸೇರಿದಂತೆ 9 ಮಂದಿ ಮೃತಪಟ್ಟು, 11 ಮಂದಿ ಗಾಯಗೊಂಡ ಘಟನೆ ಬುಧವಾರ ನಸುಕಿನಲ್ಲಿ 5.30ರ ವೇಳೆಗೆ ನಡೆದಿದೆ.
ಮೃತಪಟ್ಟವರನ್ನು ಮಂಗಳೂರು ಸಮೀಪದ ದೇರಳಕಟ್ಟೆ ಗ್ರಾಮದ ನಿವಾಸಿಗಳಾದ ಅಮೀರುದ್ದೀನ್ (55), ಫೌಜಿಯಾ (45), ಮೊಹಮ್ಮದ್ ಇಷಾಮ್ (2), ಆಸಿಮಾ (60), ರುಕ್ಕಿಯಾ (45), ಟೆಂಪೂ ಟ್ರಾವೆಲರ್ ಚಾಲಕ ಫಾರುಕುದ್ದೀನ್ (38), ಜುನೈದ್(28), ಶಫಿದಾ (5), ಮೊಹಮ್ಮದ್ ಮುಸ್ತಫಾ(1 ವರ್ಷ 4 ತಿಂಗಳು) ಎಂದು ಗುರುತಿಸಲಾಗಿದೆ.ಮಂಗಳೂರಿನ ಜವಳಿ ವ್ಯಾಪಾರಿ ಅಮೀರುದ್ದೀನ್ ಕುಟುಂಬದವರು ಮತ್ತು ಅವರ ಹತ್ತಿರದ ಸಂಬಂಧಿಕರು ಸೇರಿ 20 ಮಂದಿ ಟೆಂಪೊ ಟ್ರಾವೆಲರ್ನಲ್ಲಿ ತಮಿಳುನಾಡಿನ ಪ್ರವಾಸ ಮುಗಿಸಿ ದೇರಳಕಟ್ಟೆಗೆ ಹಿಂದಿರುಗುತ್ತಿದ್ದರು.
ಗ್ಯಾಸ್ ಸಿಲಿಂಡರುಗಳನ್ನು ತುಂಬಿಕೊಂಡು ಮಡಿಕೇರಿಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಲಾರಿ ಮತ್ತು ಟೆಂಪೊ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಜೀನತ್, ರಾಜಿಯಾ, ಬಸ್ಸುರಾ, ಸಾಜಿಯಾ, ಸನ್ನಿ, ಮೊಹಮ್ಮದ್, ಆಯಿಷಾ, ಬಿ.ಎಚ್. ಮೊಹಮ್ಮದ್ ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಮೈಸೂರಿನ ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡ ಮಹ್ಮದ್ ಇಕ್ಬಾಲ್ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಲಾರಿ ಚಾಲಕ ಶೇಷಪ್ಪಗೌಡ ಸಹ ಗಾಯಗೊಂಡಿದ್ದಾರೆ.
ಆಂಬುಲನ್ಸ್ಗೆ ಪರದಾಟ: ಅಪಘಾತದಲ್ಲಿ ಗಾಯಗೊಂಡವರನ್ನು ಮೈಸೂರಿಗೆ ಸಾಗಿಸಲು ಆಂಬುಲನ್ಸ್ಗಾಗಿ ಪರದಾಡಬೇಕಾಯಿತು. ಪಟ್ಟಣದಲ್ಲಿ ಇದ್ದ ಆಂಬುಲನ್ಸ್ ಬೀಗ ಆಸ್ಪತ್ರೆಯ ವ್ಯವಸ್ಥಾಪಕ ನಾಗೇಶ್ ಬಳಿ ಇತ್ತು. ಅವರು ಮೈಸೂರಿಗೆ ತೆರಳಿದ್ದ ಕಾರಣ ಸಕಾಲಕ್ಕೆ ಆಂಬುಲನ್ಸ್ ದೊರಕಲಿಲ್ಲ.
ಶವ ಪರೀಕ್ಷೆಯ ನಂತರ ಮೃತದೇಹಗಳನ್ನು ಪಟ್ಟಣದ ಮಲಬಾರ್ ಮಸೀದಿಗೆ ತಂದು ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಆಂಬುಲನ್ಸ್ ಮೂಲಕ ಮೃತದೇಹಗಳನ್ನು ದೇರಳಕಟ್ಟೆಗೆ ಕೊಂಡೊಯ್ಯಲಾಯಿತು.
ಆನೇಕಲ್ ವರದಿ: ತಾಲ್ಲೂಕಿನ ಬಿದರಗುಪ್ಪೆ ಬಳಿ ಬುಧವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಆರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರನ್ನು ಅತ್ತಿಬೆಲೆಯ ನಿವಾಸಿಗಳಾದ ಪಾಪರೆಡ್ಡಿ (55) ಮತ್ತು ಜೂಜುವಾಡಿಯ ಜನಾರ್ದನ್ (30) ಎಂದು ಗುರುತಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.