<p>ಕನ್ನಡಕ್ಕೆ ಮತ್ತೊಂದು ಶೃಂಗಸದೃಶ ಪುರಸ್ಕಾರದ ಪುಳಕ. ಅದನ್ನು ತಂದುಕೊಟ್ಟವರು ಕವಿ ಚಂದ್ರಶೇಖರ ಕಂಬಾರ. 2009ರ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸುವ ಮೂಲಕ ಕಂಬಾರರು ಕನ್ನಡಿಗರ ಸಾಂಸ್ಕೃತಿಕ ಹಿರಿಮೆಗೆ ಕೋಡು ಮೂಡಿಸಿದ್ದಾರೆ.<br /> <br /> ಇದು ಕನ್ನಡಕ್ಕೆ ಸಂದ ಎಂಟನೆಯ ಜ್ಞಾನಪೀಠ. ಕನ್ನಡ ಸಾಹಿತ್ಯದ ಭವ್ಯ ಪರಂಪರೆ, ಹೊಸತನ ಮತ್ತು ಮೌಲಿಕ ಸತ್ವಗಳಿಗೆ ಮತ್ತೊಮ್ಮೆ ಸಂದಿರುವ ರಾಷ್ಟ್ರೀಯಮಟ್ಟದ ಪುರಸ್ಕಾರ. ಭಾರತೀಯ ಸಾಹಿತ್ಯದಲ್ಲಿ ಪ್ರತಿಷ್ಠಿತವಾಗಿರುವ ಈ ಪ್ರಶಸ್ತಿಯನ್ನು ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗಳಿಸಿದ ಹಿರಿಮೆ ಕನ್ನಡದ್ದಾಗಿದೆ. <br /> <br /> ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರಯೋಗಗಳ ಕಾಲದಲ್ಲಿ ಸಾಹಿತ್ಯಕೃಷಿಯನ್ನು ಆರಂಭಿಸಿದ ಕಂಬಾರರದು ಹೊಸಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಯಶಸ್ಸು ಕಂಡ ಸಮೃದ್ಧತೆ. <br /> <br /> ನವ್ಯ ಸಾಹಿತ್ಯದ ಪ್ರಚಾರ ಅಬ್ಬರದ ಕಾಲದಲ್ಲಿಯೂ ಹತ್ತರಲ್ಲಿ ಒಬ್ಬರಾಗದೆ, `ಹೇಳತೇನ ಕೇಳ ಗೆಳೆಯ ನಿನ ಮುಂದ ಕತಿಯೊಂದ, ನನ ಮುಂದೆ ಕುಂಡ್ರ ಹೀಂಗ ತೆರೆದ ಮನ~ ಎಂದು ತಮ್ಮದೇ ಪ್ರತ್ಯೇಕ ಧ್ವನಿಯನ್ನೂ ಅದಕ್ಕೆ ಸ್ಪಂದಿಸುವ ಆಪ್ತವಾದ ಓದುಗ ವರ್ಗವನ್ನೂ ಸೃಷ್ಟಿಸಿಕೊಂಡವರು ಕಂಬಾರರು. <br /> <br /> ತಮ್ಮೆಲ್ಲ ಬರಹಗಳಲ್ಲಿ ಅವರದು ಮಿತ್ರಸಂಹಿತೆಯ ಅನುನಯ. ಅದು ಹತ್ತು ಕಾವ್ಯ ಸಂಕಲನ, 24 ನಾಟಕ, ಐದು ಕಾದಂಬರಿ ಹಾಗೂ ಸಂಶೋಧನೆ ಮತ್ತು ಸಾಹಿತ್ಯ ಸಂಸ್ಕೃತಿಯ ಚಿಂತನೆ ಕುರಿತ ಹದಿಮೂರು ಮೌಲಿಕ ಕೃತಿಗಳ ಸಮೃದ್ಧ ಸಾಹಿತ್ಯ ಭಂಡಾರ.<br /> <br /> ಸಮೃದ್ಧಿಯ ಜೊತೆಗೆ ವೈವಿಧ್ಯ. ಈ ಪ್ರಮಾಣದ ಪ್ರಕಾರ ವೈವಿಧ್ಯ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿರಳ. ಚಲನಶೀಲ ಸಮಾಜದ ಗತಿಸ್ಥಿತಿಯನ್ನು ನೆಲಮೂಲದ ಜಾನಪದ ಹಿನ್ನೆಲೆಯಲ್ಲಿ ರೂಪಕವಾಗಿ ಕಂಡರಿಸಿದ ಅಭಿಜಾತ ಪ್ರತಿಭೆ ಕಂಬಾರರ ಸಾಹಿತ್ಯ ಕೃತಿಗಳಲ್ಲಿ ಹರಳುಗಟ್ಟಿದೆ. <br /> <br /> ಕನ್ನಡದಲ್ಲಿ ದೇಸಿ ಸತ್ವವನ್ನು ಕವಿ ದ.ರಾ. ಬೇಂದ್ರೆ ಅವರಿಗಿಂತಲೂ ವಿಭಿನ್ನವಾಗಿ ಮತ್ತು ಸಮರ್ಥವಾಗಿ ಸಾಹಿತ್ಯದಲ್ಲಿ ತಂದವರೆಂದು ಕಂಬಾರರನ್ನು ವಿಮರ್ಶಕರು ಗುರುತಿಸಿದ್ದಾರೆ. ಈ ಪ್ರಶಸ್ತಿಯ ಮೂಲಕ ಕನ್ನಡದ ಜಾನಪದ ಸತ್ವಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆ.<br /> <br /> ಗ್ರಾಮೀಣ ಹಿನ್ನೆಲೆಯಿಂದ ಬಂದು ಪ್ರತಿಭಾ ವಿಶೇಷ ಮಾತ್ರದಿಂದಲೇ ಸಾಹಿತ್ಯದ ಮುಖ್ಯಧಾರೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಕಂಬಾರರು ಈ ನಿಟ್ಟಿನಲ್ಲಿ ದಾರ್ಶನಿಕ ಕವಿ ಕುವೆಂಪು ಅವರನ್ನು ನೆನಪಿಗೆ ತರುತ್ತಾರೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮೊದಲಾಗಿ ಹಲವಾರು ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆದಿರುವ ಕಂಬಾರರು ಬಹುಮುಖ ಪ್ರತಿಭೆಯ ಧೀಮಂತ. <br /> <br /> ಕಂಬಾರರ ಈಚಿನ ಮಹತ್ವದ ಕಾದಂಬರಿ `ಶಿಖರಸೂರ್ಯ~ವನ್ನು ಉತ್ಕೃಷ್ಟ ಕಾವ್ಯವೆಂದೇ ಪರಿಭಾವಿಸಿರುವ ವಿಮರ್ಶಕರು, ಅದು ಸಾಂಸ್ಕೃತಿಕ ಮತ್ತು ದಾರ್ಶನಿಕ ಸ್ವಾಯತ್ತತೆಯನ್ನು ಸಾಧಿಸುವ ಕೃತಿಯೆಂದು ಬಣ್ಣಿಸಿದ್ದಾರೆ. <br /> <br /> ಅವರ ಸಮಕಾಲೀನ ಬರಹಗಾರರೆಲ್ಲ ಸೃಜನಾತ್ಮಕ ಚಟುವಟಿಕೆಯಿಂದ ನಿರ್ಗಮಿಸಿ ಆತ್ಮಕತೆ, ಸಮಗ್ರ ಸಾಹಿತ್ಯ ಸಂಗ್ರಹಗಳಲ್ಲಿ ತೊಡಗಿರುವಾಗ ಸಮಕಾಲೀನ ವಸ್ತುಗಳನ್ನು ಆಧರಿಸಿ ಇನ್ನೂ ಹೊಸರೀತಿಯ ನಾಟಕ ಬರೆಯುವ ಉತ್ಸಾಹವನ್ನು ಕಂಬಾರರು ಪ್ರಕಟಿಸಿದ್ದಾರೆ.<br /> <br /> ಸಾಹಿತ್ಯ ವಿದ್ಯಾರ್ಥಿಗಳು ಮಾತ್ರವಲ್ಲದೆ, ನಾಡಿನ ಎಲ್ಲ ವರ್ಗದ ಜನತೆ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದಕ್ಕೆ ಸಂಭ್ರಮಪಟ್ಟಿದ್ದಾರೆ. ಶ್ರೀಸಾಮಾನ್ಯರ ಬದುಕಿನಿಂದಲೇ ಬರವಣಿಗೆಗೆ ಪ್ರೇರಣೆ ಪಡೆದು ಅದನ್ನು ಜಾನಪದ ಸತ್ವದಲ್ಲಿ ಪುನರ್ಸೃಷ್ಟಿಸುವ ಚೈತನ್ಯವನ್ನು ಕಂಬಾರರು ಈ ವರೆಗೆ ಪ್ರಕಟಿಸಿದ್ದಾರೆ. <br /> <br /> ಎಪ್ಪತ್ತರ ಎತ್ತರದಲ್ಲೂ ಕಂಬಾರರಲ್ಲಿ ಉಳಿದುಕೊಂಡಿರುವ ಕಾರಯತ್ರೀ ಪ್ರತಿಭೆ ಅವರಿಂದ ಇನ್ನಷ್ಟು ಮಹತ್ವದ ಸಾಹಿತ್ಯ ಕೃಷಿಯನ್ನು ನಿರೀಕ್ಷಿಸುವಂತೆ ಮಾಡಿದೆ.<br /> <br /> ಈ ಸಂದರ್ಭದಲ್ಲಿ, ಕಂಬಾರರ ಶ್ರೇಷ್ಠ ಕೃತಿಗಳು ಕೈಗೆಟಕುವ ಬೆಲೆಯಲ್ಲಿ ಓದುಗರಿಗೆ ಸಿಗುವಂತೆ ಮಾಡುವ ಸಾಹಿತ್ಯಿಕ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ನಿರ್ವಹಿಸುವುದು ಅದರ ಸಾಂಸ್ಕೃತಿಕ ಜವಾಬ್ದಾರಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡಕ್ಕೆ ಮತ್ತೊಂದು ಶೃಂಗಸದೃಶ ಪುರಸ್ಕಾರದ ಪುಳಕ. ಅದನ್ನು ತಂದುಕೊಟ್ಟವರು ಕವಿ ಚಂದ್ರಶೇಖರ ಕಂಬಾರ. 2009ರ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸುವ ಮೂಲಕ ಕಂಬಾರರು ಕನ್ನಡಿಗರ ಸಾಂಸ್ಕೃತಿಕ ಹಿರಿಮೆಗೆ ಕೋಡು ಮೂಡಿಸಿದ್ದಾರೆ.<br /> <br /> ಇದು ಕನ್ನಡಕ್ಕೆ ಸಂದ ಎಂಟನೆಯ ಜ್ಞಾನಪೀಠ. ಕನ್ನಡ ಸಾಹಿತ್ಯದ ಭವ್ಯ ಪರಂಪರೆ, ಹೊಸತನ ಮತ್ತು ಮೌಲಿಕ ಸತ್ವಗಳಿಗೆ ಮತ್ತೊಮ್ಮೆ ಸಂದಿರುವ ರಾಷ್ಟ್ರೀಯಮಟ್ಟದ ಪುರಸ್ಕಾರ. ಭಾರತೀಯ ಸಾಹಿತ್ಯದಲ್ಲಿ ಪ್ರತಿಷ್ಠಿತವಾಗಿರುವ ಈ ಪ್ರಶಸ್ತಿಯನ್ನು ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗಳಿಸಿದ ಹಿರಿಮೆ ಕನ್ನಡದ್ದಾಗಿದೆ. <br /> <br /> ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರಯೋಗಗಳ ಕಾಲದಲ್ಲಿ ಸಾಹಿತ್ಯಕೃಷಿಯನ್ನು ಆರಂಭಿಸಿದ ಕಂಬಾರರದು ಹೊಸಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಯಶಸ್ಸು ಕಂಡ ಸಮೃದ್ಧತೆ. <br /> <br /> ನವ್ಯ ಸಾಹಿತ್ಯದ ಪ್ರಚಾರ ಅಬ್ಬರದ ಕಾಲದಲ್ಲಿಯೂ ಹತ್ತರಲ್ಲಿ ಒಬ್ಬರಾಗದೆ, `ಹೇಳತೇನ ಕೇಳ ಗೆಳೆಯ ನಿನ ಮುಂದ ಕತಿಯೊಂದ, ನನ ಮುಂದೆ ಕುಂಡ್ರ ಹೀಂಗ ತೆರೆದ ಮನ~ ಎಂದು ತಮ್ಮದೇ ಪ್ರತ್ಯೇಕ ಧ್ವನಿಯನ್ನೂ ಅದಕ್ಕೆ ಸ್ಪಂದಿಸುವ ಆಪ್ತವಾದ ಓದುಗ ವರ್ಗವನ್ನೂ ಸೃಷ್ಟಿಸಿಕೊಂಡವರು ಕಂಬಾರರು. <br /> <br /> ತಮ್ಮೆಲ್ಲ ಬರಹಗಳಲ್ಲಿ ಅವರದು ಮಿತ್ರಸಂಹಿತೆಯ ಅನುನಯ. ಅದು ಹತ್ತು ಕಾವ್ಯ ಸಂಕಲನ, 24 ನಾಟಕ, ಐದು ಕಾದಂಬರಿ ಹಾಗೂ ಸಂಶೋಧನೆ ಮತ್ತು ಸಾಹಿತ್ಯ ಸಂಸ್ಕೃತಿಯ ಚಿಂತನೆ ಕುರಿತ ಹದಿಮೂರು ಮೌಲಿಕ ಕೃತಿಗಳ ಸಮೃದ್ಧ ಸಾಹಿತ್ಯ ಭಂಡಾರ.<br /> <br /> ಸಮೃದ್ಧಿಯ ಜೊತೆಗೆ ವೈವಿಧ್ಯ. ಈ ಪ್ರಮಾಣದ ಪ್ರಕಾರ ವೈವಿಧ್ಯ ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿರಳ. ಚಲನಶೀಲ ಸಮಾಜದ ಗತಿಸ್ಥಿತಿಯನ್ನು ನೆಲಮೂಲದ ಜಾನಪದ ಹಿನ್ನೆಲೆಯಲ್ಲಿ ರೂಪಕವಾಗಿ ಕಂಡರಿಸಿದ ಅಭಿಜಾತ ಪ್ರತಿಭೆ ಕಂಬಾರರ ಸಾಹಿತ್ಯ ಕೃತಿಗಳಲ್ಲಿ ಹರಳುಗಟ್ಟಿದೆ. <br /> <br /> ಕನ್ನಡದಲ್ಲಿ ದೇಸಿ ಸತ್ವವನ್ನು ಕವಿ ದ.ರಾ. ಬೇಂದ್ರೆ ಅವರಿಗಿಂತಲೂ ವಿಭಿನ್ನವಾಗಿ ಮತ್ತು ಸಮರ್ಥವಾಗಿ ಸಾಹಿತ್ಯದಲ್ಲಿ ತಂದವರೆಂದು ಕಂಬಾರರನ್ನು ವಿಮರ್ಶಕರು ಗುರುತಿಸಿದ್ದಾರೆ. ಈ ಪ್ರಶಸ್ತಿಯ ಮೂಲಕ ಕನ್ನಡದ ಜಾನಪದ ಸತ್ವಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆ.<br /> <br /> ಗ್ರಾಮೀಣ ಹಿನ್ನೆಲೆಯಿಂದ ಬಂದು ಪ್ರತಿಭಾ ವಿಶೇಷ ಮಾತ್ರದಿಂದಲೇ ಸಾಹಿತ್ಯದ ಮುಖ್ಯಧಾರೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಕಂಬಾರರು ಈ ನಿಟ್ಟಿನಲ್ಲಿ ದಾರ್ಶನಿಕ ಕವಿ ಕುವೆಂಪು ಅವರನ್ನು ನೆನಪಿಗೆ ತರುತ್ತಾರೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮೊದಲಾಗಿ ಹಲವಾರು ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆದಿರುವ ಕಂಬಾರರು ಬಹುಮುಖ ಪ್ರತಿಭೆಯ ಧೀಮಂತ. <br /> <br /> ಕಂಬಾರರ ಈಚಿನ ಮಹತ್ವದ ಕಾದಂಬರಿ `ಶಿಖರಸೂರ್ಯ~ವನ್ನು ಉತ್ಕೃಷ್ಟ ಕಾವ್ಯವೆಂದೇ ಪರಿಭಾವಿಸಿರುವ ವಿಮರ್ಶಕರು, ಅದು ಸಾಂಸ್ಕೃತಿಕ ಮತ್ತು ದಾರ್ಶನಿಕ ಸ್ವಾಯತ್ತತೆಯನ್ನು ಸಾಧಿಸುವ ಕೃತಿಯೆಂದು ಬಣ್ಣಿಸಿದ್ದಾರೆ. <br /> <br /> ಅವರ ಸಮಕಾಲೀನ ಬರಹಗಾರರೆಲ್ಲ ಸೃಜನಾತ್ಮಕ ಚಟುವಟಿಕೆಯಿಂದ ನಿರ್ಗಮಿಸಿ ಆತ್ಮಕತೆ, ಸಮಗ್ರ ಸಾಹಿತ್ಯ ಸಂಗ್ರಹಗಳಲ್ಲಿ ತೊಡಗಿರುವಾಗ ಸಮಕಾಲೀನ ವಸ್ತುಗಳನ್ನು ಆಧರಿಸಿ ಇನ್ನೂ ಹೊಸರೀತಿಯ ನಾಟಕ ಬರೆಯುವ ಉತ್ಸಾಹವನ್ನು ಕಂಬಾರರು ಪ್ರಕಟಿಸಿದ್ದಾರೆ.<br /> <br /> ಸಾಹಿತ್ಯ ವಿದ್ಯಾರ್ಥಿಗಳು ಮಾತ್ರವಲ್ಲದೆ, ನಾಡಿನ ಎಲ್ಲ ವರ್ಗದ ಜನತೆ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದಕ್ಕೆ ಸಂಭ್ರಮಪಟ್ಟಿದ್ದಾರೆ. ಶ್ರೀಸಾಮಾನ್ಯರ ಬದುಕಿನಿಂದಲೇ ಬರವಣಿಗೆಗೆ ಪ್ರೇರಣೆ ಪಡೆದು ಅದನ್ನು ಜಾನಪದ ಸತ್ವದಲ್ಲಿ ಪುನರ್ಸೃಷ್ಟಿಸುವ ಚೈತನ್ಯವನ್ನು ಕಂಬಾರರು ಈ ವರೆಗೆ ಪ್ರಕಟಿಸಿದ್ದಾರೆ. <br /> <br /> ಎಪ್ಪತ್ತರ ಎತ್ತರದಲ್ಲೂ ಕಂಬಾರರಲ್ಲಿ ಉಳಿದುಕೊಂಡಿರುವ ಕಾರಯತ್ರೀ ಪ್ರತಿಭೆ ಅವರಿಂದ ಇನ್ನಷ್ಟು ಮಹತ್ವದ ಸಾಹಿತ್ಯ ಕೃಷಿಯನ್ನು ನಿರೀಕ್ಷಿಸುವಂತೆ ಮಾಡಿದೆ.<br /> <br /> ಈ ಸಂದರ್ಭದಲ್ಲಿ, ಕಂಬಾರರ ಶ್ರೇಷ್ಠ ಕೃತಿಗಳು ಕೈಗೆಟಕುವ ಬೆಲೆಯಲ್ಲಿ ಓದುಗರಿಗೆ ಸಿಗುವಂತೆ ಮಾಡುವ ಸಾಹಿತ್ಯಿಕ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ನಿರ್ವಹಿಸುವುದು ಅದರ ಸಾಂಸ್ಕೃತಿಕ ಜವಾಬ್ದಾರಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>