ಜಾತಿ ನಿಂದನೆ: ಬಂಧನ
ಬೆಂಗಳೂರು: ನಗರದ ಸೋಮನಹಳ್ಳಿಯಲ್ಲಿರುವ ಎ.ಪಿ.ಎಸ್ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಎ.ಪಿ.ಎಸ್ ಶಿಕ್ಷಣ ಟ್ರಸ್ಟ್ನ ಜಂಟಿ ಕಾರ್ಯದರ್ಶಿ ಸಿ.ನಾಗರಾಜ್ ಎಂಬುವರನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದ ಘಟನೆ ನಡೆದಿದೆ.
ಕಾಲೇಜಿನ ಕಾರ್ಯಾಗಾರ ವಿಭಾಗದಲ್ಲಿ ಮೆಕಾನಿಕ್ ಆಗಿರುವ ಎಚ್.ಸೋಮಶೇಖರ್ ಎಂಬುವರು ನಾಗರಾಜ್ ವಿರುದ್ಧ ಫೆ.23ರಂದು ತಲಘಟ್ಟಪುರ ಠಾಣೆಯಲ್ಲಿ ಜಾತಿ ನಿಂದನೆಯ ಪ್ರಕರಣ ದಾಖಲಿಸಿದ್ದರು. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ-1989’ಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಗರಾಜ್ ಅವರನ್ನು ಫೆ.28ರಂದು ಬಂಧಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
‘ನಾನು ಮತ್ತು ಫಿಟ್ಟರ್ ವಿಭಾಗದಲ್ಲಿ ಸಹ ಶಿಕ್ಷಕರಾಗಿರುವ ಸಿ.ಗುಡ್ಡೆಚನ್ನಯ್ಯ ಅವರು ಫೆ.8ರಂದು ಕಾಲೇಜಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ನಾಗರಾಜ್ ಏಕಾಏಕಿ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆಯ ಮಾತುಗಳನ್ನು ಆಡಿದರು’ ಎಂದು ಸೋಮಶೇಖರ್ ದೂರು ಕೊಟ್ಟಿದ್ದರು.
‘ಖಾಸಗಿ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳ ಡಿಪ್ಲೊಮಾ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವೆಚ್ಚವನ್ನು ನೀಡುವಂತೆ ಪ್ರಾಂಶುಪಾಲರಿಗೆ ಮನವಿ ಮಾಡಿದ್ದೆವು. ಪರೀಕ್ಷಾ ವೆಚ್ಚ ಕೇಳಿದ ಕಾರಣಕ್ಕೆ ನಾಗರಾಜ್ ಅವರು, ನೀವು ಟ್ರಸ್ಟ್ನ ವಿರುದ್ಧವಾಗಿ ಅಶಿಸ್ತಿನಿಂದ ನಡೆದುಕೊಂಡಿದ್ದೀರಿ. ಆದ್ದರಿಂದ ನಿಮ್ಮ ವೇತನ ಬಡ್ತಿಯನ್ನು ತಡೆ ಹಿಡಿಯಲಾಗುವುದು ಎಂದು ಹೇಳಿ ಜ.31ರಂದು ನೋಟಿಸ್ ನೀಡಿದ್ದರು. ನಾವು ಟ್ರಸ್ಟ್ಗೆ ವಿರುದ್ಧವಾಗಿ ನಡೆದುಕೊಳ್ಳದ ಕಾರಣ ಆ ನೋಟಿಸ್ಗೆ ಯಾವುದೇ ಉತ್ತರ ನೀಡಿರಲಿಲ್ಲ’ ಎಂದು ಗುಡ್ಡೆಚನ್ನಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆ ನೋಟಿಸ್ನ ಬಗ್ಗೆ ಟ್ರಸ್ಟ್ನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ತಿಳಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನೋಟಿಸ್ಗೆ ಉತ್ತರ ನೀಡದಿದ್ದರಿಂದ ನಾಗರಾಜ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದರು. ಅವರು ಪೊಲೀಸರಿಂದ ಬಂಧಿತರಾಗಿ ಬಿಡುಗಡೆಯಾದ ನಂತರವೂ ಟ್ರಸ್ಟ್ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರದಲ್ಲಿ ಮುಂದುವರೆಯಲು ಅನುಮತಿ ನೀಡಿದೆ. ಟ್ರಸ್ಟ್ ಅಧ್ಯಕ್ಷರು, ಉಪಾಧ್ಯಕ್ಷರ ಕುಮ್ಮಕ್ಕಿನಿಂದಲೇ ಅವರು ಕಾಲೇಜಿನ ಇತರೆ ಸಿಬ್ಬಂದಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ದೂರಿದರು.
‘ಟ್ರಸ್ಟ್ನ ಅಧ್ಯಕ್ಷರು, ಉಪಾಧ್ಯಕ್ಷರು ಸಂಘ ಸಂಸ್ಥೆಗಳ ಮೂಲಕ ಪ್ರಕರಣ ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.