ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಿಮಟ್ಟಿ! ಚೆಲುವೆಲ್ಲ ನಂದೆಂದಿತು...

ನೋಟ ನವನವೀನ
Last Updated 10 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಲ್ಲಿ ನಿತ್ಯವೂ ಹಸಿರಿನ ಔತಣ. ಹಕ್ಕಿಗಳ ಚಿಲಿಪಿಲಿ, ನವಿಲುಗಳ ನರ್ತನ, ಗಿಡ-ಮರಗಳ ತರು-ಲತೆಗಳ ಪಿಸು ಮಾತಿನ ಮೊಗಸಾಲೆಯಲ್ಲಿ ಸುತ್ತಾಡುವವರಿಗೆ ಒಂದು ರಸಾನುಭವ. ಇಲ್ಲಿ ಮಾತು ಮೈಲಿಗೆ. ಮೌನವೇ ದಿವ್ಯಮಂತ್ರ!

ಕೋಟೆಗಳ ನಾಡು ಚಿತ್ರದುರ್ಗದ ಜೊತೆಯಲ್ಲೇ ಇರುವ ಜೋಗಿಮಟ್ಟಿ ಎಂಬ ಗಿರಿಧಾಮ ಹೊಕ್ಕರೆ ಇಂಥದ್ದೊಂದು ಅನನ್ಯ ಅನುಭವವಾಗುತ್ತದೆ. ಬರದ ನಾಡೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮದಕರಿಯ ಊರಿನ ಪಕ್ಕದಲ್ಲಿ `ಊಟಿಯ ವಾತಾವರಣವನ್ನೇ' ನೆನಪಿಸುವ ತಾಣವೊಂದಿದೆ.

ನಗರದಿಂದ 10 ಕಿ.ಮೀ ದೂರವಿರುವ ಈ ರಕ್ಷಿತಾರಣ್ಯ ತಲುಪಲು ಅಂಕುಡೊಂಕಾದ ರಸ್ತೆಯೊಂದಿಗೆ ಏರುತ್ತಾ ಸಾಗಬೇಕು. ಮುಂಜಾನೆಯ ಮಂಜಿನೊಂದಿಗೆ ಪಯಣಿಸುವವರಿಗೆ ರಸ್ತೆಯ ಅಕ್ಕಪಕ್ಕದ ಕಲ್ಲುಗಳ ಮೇಲೆ ಕುಳಿತ ನವಿಲುಗಳು ಸ್ವಾಗತ ಕೋರುತ್ತವೆ. ಕಾಡೆಮ್ಮೆ, ಕಾಡು ಹಂದಿ, ಜಿಂಕೆ ಮರಿಗಳು ಇಣುಕಿ ಮಾಯವಾಗುತ್ತವೆ!

ಮಳೆಗಾಲ ಮುಗಿಯುತ್ತ ಚಳಿಯತ್ತ ಹೆಜ್ಜೆ ಹಾಕುವ ವೇಳೆಯಲ್ಲಿ ಜೋಗಿಮಟ್ಟಿ ಏರುತ್ತಿದ್ದರೆ, ಮಳೆ ಮತ್ತು ಹಿಮ ಏಕ ಪ್ರಕಾರವಾಗಿ ಬೀಳುವ ಸೊಬಗನ್ನು ನೋಡಬಹುದು. ಗಿರಿ-ಶಿಖರಗಳ ತುದಿಗೆ ಮೋಡಗಳು ಮುತ್ತಿಕ್ಕಿ ಮಳೆ ಸುರಿಯುವ ದೃಶ್ಯ ರತಿ-ಮನ್ಮಥರ ರಾಸಲೀಲೆಯನ್ನು ನೆನಪಿಸುತ್ತದೆ.

ಹುಲ್ಲುಗಾವಲು ಕಾನನವಾಯ್ತು...
1972-73ರಲ್ಲಿ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು, ಚಿತ್ರದುರ್ಗದ ಬೆಟ್ಟಗಳ ಮೇಲಿನ ಹುಲ್ಲುಗಾವಲು ಪ್ರದೇಶವೊಂದರಲ್ಲಿ `ಬಾರೆ ಬಾರೆ ಚಂದದ ಚಲುವಿನ ತಾರೆ..' ಎನ್ನುವ ಹಾಡು ಚಿತ್ರೀಕರಿಸಿದ್ದರು. ಅದೇ ಹುಲ್ಲುಗಾವಲೇ ಇಂದು ದಟ್ಟ ಕಾನನದ ಸೊಬಗಿನ ಜೋಗಿಮಟ್ಟಿಯ ಅರಣ್ಯ ಪ್ರದೇಶ. ಎರಡೂವರೆ ದಶಕದಲ್ಲಿ ಇಡೀ ಪ್ರದೇಶ ಹಸಿರು ಚಾದರ ಹ್ದ್ದೊದು ಮಲಗಿದೆ.

ಜೀವ ವೈವಿಧ್ಯದ ತಾಣ

ಜೋಗಿಮಟ್ಟಿ ಮತ್ತಿ, ಹೊನ್ನೆ, ತೇಗ, ತಡಸಲು, ದಿಂಡುಗ, ಶ್ರಿಗಂಧ, ಬೀಟೆ, ಬಿದಿರು, ಜಾಲಿ, ನೆಲ್ಲಿ, ಜಾನಿ, ಉಪ್ಪಳೆ, ತುಗ್ಗಲಿ, ಬಾಗೆ, ಬೇಲ, ಕಕ್ಕೆ, ಪಾದ್ರಿ, ಹೊಂಗೆ, ಸೋಮಿ, ಉಡೇದು, ಹಾಲೆ ಹಾಗೂ ಇನ್ನೂ ಹಲವಾರು ರೀತಿಯ ಹಣ್ಣು ಹಂಪಲು ಮತ್ತು ಗಿಡ-ಮರಗಳು ಇರುವ ದಟ್ಟ ಕಾನನ. ಚಿರತೆ, ನವಿಲು, ಕರಡಿ, ಕಾಡು ಬೆಕ್ಕು, ಕಾಡು ಹಂದಿ, ಕೊಂಡುಕುರಿ, ಕೃಷ್ಣಮೃಗ, ಜಿಂಕೆ, ಮುಳ್ಳುಹಂದಿ, ಚಿಪ್ಪು ಹಂದಿ, ಮೊಲ, ನರಿಯಂತಹ ಕಾಡು ಪ್ರಾಣಿಗಳಿವೆ. ಗಿಳಿ, ಗೊರವಂಕದಂತಹ ಪಕ್ಷಿಕಾಶಿಯೇ ಇಲ್ಲಿ ಮೇಳೈಸಿದೆ.

250ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಜೋಗಿಮಟ್ಟಿಯಲ್ಲಿ ಗುರುತಿಸಲಾಗಿದೆ. ಹುಲ್ಲಿನ ರಾಶಿಯ ಜೊತೆ ಜೊತೆಗೆ ಬೆಲೆಬಾಳುವ ಹೊನ್ನೆ, ಮತ್ತಿ, ಕಮರ, ತೇಗ ಸೇರಿದಂತೆ ಸಸ್ಯ ಸಾಮ್ರಾಜ್ಯವೇ ಇಲ್ಲಿದೆ. ನವಿಲು, ಜಿಂಕೆಗಳು, ಚಿರತೆ, ಕರಡಿಗಳ ಆವಾಸ ಸ್ಥಾನ ಇದಾಗಿದೆ.

ಚಾರಣಿಗರ ಮೆಚ್ಚಿನ ತಾಣ
22 ಸಾವಿರ ಎಕರೆಯಷ್ಟು ವಿಸ್ತಾರವಾಗಿರುವ, ಸಮುದ್ರ ಮಟ್ಟದಿಂದ 1323 ಮೀಟರ್ ಎತ್ತರವಿರುವ ಜೋಗಿಮಟ್ಟಿ ಗಿರಿಧಾಮವಷ್ಟೇ ಅಲ್ಲ, ಚಾರಣ ಸಾಹಸಿಗರನ್ನು ಕೈಬೀಸಿ ಕರೆಯುವ ಪ್ರದೇಶವೂ ಹೌದು. ಭೌಗೋಳಿಕವಾಗಿ ಈ ಪ್ರದೇಶ ಏಷ್ಯಾ ಖಂಡದಲ್ಲೇ ಅತಿ ಹೆಚ್ಚಾಗಿ ಗಾಳಿ ಬೀಸುವ ಪ್ರದೇಶ ಎಂದು ಗುರುತಿಸಲಾಗಿದೆ.

ಮರಡಿಯಿಂದ ಮಟ್ಟಿ!
ಜೋಗಿಮರಡಿ ಮೇಲೆ ಜನೋಪಕಾರಿಯಾಗಿದ್ದ ಜೋಗಿಯೊಬ್ಬನ ಸಮಾಧಿಯಿದೆ.

ಆ ಜೋಗಿ ಜನ-ಜಾನುವಾರುಗಳಿಗೆ ಔಷಧಿ ನೀಡುತ್ತಿದ್ದನಂತೆ. ಆತನ ಹೆಸರಿನಲ್ಲಿ ಜೋಗಿಮರಡಿ ಎಂದು ಹೆಸರಾದುದು, ನಂತರ ಜೋಗಿಮಟ್ಟಿ ಎಂದಾಗಿದೆ.

ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರು ಚಿತ್ರದುರ್ಗಕ್ಕೆ ಬಂದಾಗಲೆಲ್ಲ ಜೋಗಿಮಟ್ಟಿಯಲ್ಲಿ ಇರುವ ಬ್ರಿಟಿಷರ ಕಾಲದ ಬಂಗಲೆಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯುತ್ತಿದ್ದರಂತೆ. ಈ ಬಂಗಲೆಯನ್ನು 1905ರಲ್ಲಿ ನಿರ್ಮಿಸಲಾಗಿದೆ.

ಅಕ್ಕಪಕ್ಕದಲ್ಲೂ ತಂಪು ತಾಣಗಳು!
ಜೋಗಿಮಟ್ಟಿ ಗುಡ್ಡದ ಮೇಲೊಂದು ಮರಡಿ ಇದೆ, ಅದನ್ನು ಜೋಗಿಮರಡಿ ಎಂದು ಕರೆಯುತ್ತಾರೆ. ಅದರ ಕೆಳಭಾಗದಲ್ಲಿ ಅರಣ್ಯ ಇಲಾಖೆಯವರು ಪ್ರವಾಸಿಗರಿಗಾಗಿ ನಿರ್ಮಿಸಿರುವ ಬಂಗಲೆಗಳು ಇವೆ. ಸಮೀಪದಲ್ಲೇ ಕುಮಾರನಕಟ್ಟೆ ಎಂಬ ಕೆರೆ ಇದೆ. ಇದೇ ಪರಿಸರದಲ್ಲಿ ಒಕ್ಕಲಿಗನಕಟ್ಟೆ ಎಂಬ ಪುಟ್ಟ ಜಲಾಶಯವಿದೆ.

ಜೋಗಿಮಟ್ಟಿಗೆ ಹೋಗುವ ಮಾರ್ಗದ ಸುತ್ತಲೂ ಪರ್ವತ ಶ್ರೇಣಿ ಕಲ್ಲುಗುಡ್ಡಗಳ ನಡುವೆ ಬೆಳೆದ ಹಚ್ಚ ಹಸಿರಿನ ಮರ ಗಿಡ ಬಳ್ಳಿಗಳು, ಬಲಕ್ಕೆ ದೊಡ್ಡಣ್ಣ ನಾಯಕನ ಕೆರೆ, ಹಿಂಬದಿಯಲ್ಲಿ ಈರಣ್ಣನ ಕಲ್ಲು ಬೆಟ್ಟ, ಕಡ್ಲೆ ಕಟ್ಟೆ ಕಣಿವೆ, ಗೋಡೆ ಗವಿ, ಗಾಳಿಗುಡ್ಡ, ಅಕ್ಕಪಕ್ಕದಲ್ಲಿ ಚಿರತೆಕಲ್ಲು, ಅಂಕೋಲೆಗುತ್ತಿ, ಸೀಳು ಗಲ್ಲು, ಗವಿ, ಬಾಗಿಲು, ದೇವರಹಳ್ಳ, ಹನುಮನ ಕಲ್ಲು, ಸಣ್ಣ ಬಿದರೆ ಕಲ್ಲು ಮತ್ತು ಸೊಗಸಾದ ಅರಣ್ಯವಿದೆ.

ಬಲಭಾಗಕ್ಕೆ ತಿರುಗಿದರೆ ಆಳದಲ್ಲಿ ಬಂಡೆಗಳಿಂದ ಆವೃತವಾದ ಸ್ಥಳದಲ್ಲಿ ಹಿಮವತ್ ಕೇದಾರ ಎಂಬ ಪುಟ್ಟ ಜಲಪಾತವಿದೆ. ಇಲ್ಲಿ ಸಣ್ಣ ಗುಹೆ, ಅದರಲ್ಲಿ ಶಿವಲಿಂಗ ಇದೆ. ಇಲ್ಲಿ ಧುಮ್ಮಿಕ್ಕುವ ನೀರು ಬಸವನ ಬಾಯಿಯಿಂದ ಬೀಳುವುದು ವಿಶೇಷ. ಮಳೆಗಾಲದಲ್ಲಿ ಈ ಜಲಪಾತ ರಭಸವಾಗಿ ಸುರಿಯುತ್ತದೆ. ಮನಮೋಹಕ ದೃಶ್ಯಗಳನ್ನು ಸವಿಯಲು ಎತ್ತರ ಪ್ರದೇಶದಲ್ಲಿ ವೀಕ್ಷಣಾ ಗೋಪುರಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ. 

ಅಭಯಾರಣ್ಯದ ಪ್ರಸ್ತಾವ
`ಗ್ರೀನ್ ಎನರ್ಜಿ' ಹೆಸರಲ್ಲಿ ಕಾನನದ ಬೆಟ್ಟಗಳ ಮೇಲೆ ಪವನ ವಿದ್ಯುತ್ ಸ್ಥಾಪನೆಗೆ ಅನುಮೋದನೆ ದೊರೆಯುತ್ತಿದೆ. ಪವನ ವಿದ್ಯುತ್ ಅಳವಡಿಕೆಯಿಂದ, ಕಾಡಿನ ಒಳಗೆ ರಸ್ತೆ ನಿರ್ಮಾಣವಾಗುತ್ತದೆ. ಫ್ಯಾನ್ ಶಬ್ದಕ್ಕೆ ಪ್ರಾಣಿಗಳು ಬೆದರುತ್ತವೆ. ಪಕ್ಷಿಗಳ ಹಾರಾಟಕ್ಕೆ ತೊಂದರೆಯಾಗುತ್ತದೆ. ಜೇನು ನೊಣಗಳು ನಾಪತ್ತೆಯಾಗುತ್ತವೆ.

ಪ್ರಾಣಿಗಳ ಸಂತಾನೋತ್ಪತ್ತಿ ಕ್ಷೀಣಿಸಿ, ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಇಂಥ ಅಪಾಯಗಳಿಂದ ರಕ್ಷಿಸುವ ಸಲುವಾಗಿ ಇಡೀ ಜೋಗಿಮಟ್ಟಿ ಅರಣ್ಯವನ್ನು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ' ಎನ್ನುತ್ತಾರೆ ಕುಮಾರಸ್ವಾಮಿ.

ಜೋಗಿಮಟ್ಟಿಯ ದಾರಿ
ಚಿತ್ರದುರ್ಗದಿಂದ 10 ಕಿ.ಮೀ. ದೂರದಲ್ಲಿದೆ. ನಗರದಿಂದ ಜೋಗಿಮಟ್ಟಿ ರಸ್ತೆ ಮೂಲಕ ತಲುಪಬೇಕು. ಸೂಕ್ತ ರಸ್ತೆ ಮಾರ್ಗವಿದೆ.
ಜೋಗಿಮಟ್ಟಿಗೆ ಹೋಗುವ ಹಾದಿಯಲ್ಲಿ 3 ಕಿ.ಮೀ. ಕ್ರಮಿಸಿದರೆ ಅರಣ್ಯ ಇಲಾಖೆಯವರ ಚೆಕ್ ಪೋಸ್ಟ್(ತಪಾಸಣಾ ಸ್ಥಳ) ನಿಂದ ಬಲಭಾಗಕ್ಕೆ ಆಡು ಮಲ್ಲೇಶ್ವರ ದೇವಾಲಯವಿದೆ.

ಇದರ ಎದುರಿನಲ್ಲೇ ದೊಡ್ಡದಾದ ಪುಷ್ಕರಣಿ ಇದೆ. ಅರಣ್ಯ ಇಲಾಖೆಯವರು ಪ್ರವಾಸಿಗರಿಗಾಗಿ ಬಾಲವನ, ಚಿಕ್ಕದೊಂದು ಪ್ರಾಣಿ ಸಂಗ್ರಹಾಲಯ ನಿರ್ಮಿಸಿದ್ದಾರೆ. ಎರಡೂ ಪ್ರದೇಶಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲ. ಸ್ವಂತ ವಾಹನದಲ್ಲೇ ಹೋಗಬೇಕು. ಆಡುಮಲ್ಲೇಶ್ವರದವರೆಗೆ ಹೋಗಲು ಅವಕಾಶವಿದೆ. ಆದರೆ ಜೋಗಿಮಟ್ಟಿಗೆ ಹೋಗಬೇಕೆಂದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ.
-ಗಾಣಧಾಳು ಶ್ರೀಕಂಠ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT