ನಗರದಲ್ಲಿ ತಲೆ ಎತ್ತಲಿದೆ ಹೈಟೆಕ್ ಬಸ್ ನಿಲ್ದಾಣ
ಯಾದಗಿರಿ: ಜಿಲ್ಲೆಯಾಗಿ ನಾಲ್ಕು ವರ್ಷ ಕಳೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಆಗುತ್ತಿದೆ. ನಗರದ ಮಧ್ಯ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಈ ಬಸ್ನಿಲ್ದಾಣ, ಪ್ರಯಾಣಿಕರ ದೃಷ್ಟಿಯಿಂದಲೂ ಅನುಕೂಲಕರವಾಗಿದೆ.
ನಗರದಲ್ಲಿರುವ ಹಳೆಯ ಕೇಂದ್ರ ಬಸ್ನಿಲ್ದಾಣ, ಕಳೆದ ಕೆಲ ವರ್ಷಗಳಿಂದ ಕೆಸರಿನ ಗದ್ದೆಯಂತಾಗಿತ್ತು. ಬಸ್ ನಿಲ್ದಾಣದ ನಿರ್ಮಾಣಕ್ಕೆ ಒತ್ತಡಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಜನರ ಬೇಡಿಕೆ ಈಡೇರುವ ದಿನಗಳು ಸಮೀಪಿಸುತ್ತಿದ್ದು, ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನೂತನ ಬಸ್ ನಿಲ್ದಾಣ ನಿರ್ಮಾಣ ಆರಂಭಿಸಿದೆ.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಯಾದಗಿರಿಗೆ, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸಾಕಷ್ಟು ಬಸ್ಗಳು ಓಡಾಡುತ್ತವೆ. ಅದೇ ರೀತಿ ಆಂಧ್ರಪ್ರದೇಶದ ಬಸ್ಗಳು ಇಲ್ಲಿಗೆ ಬರುತ್ತವೆ. ಜೊತೆಗೆ ವಿಜಾಪುರ, ಬಳ್ಳಾರಿ, ಬೆಂಗಳೂರು, ಪುಣೆ, ದಾವಣಗೆರೆ, ಹೈದಾರಾಬಾದ್, ನಾರಾಯಣಪೇಟ್ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಬಸ್ ಸೌಕರ್ಯವಿದೆ. ಆದರೆ ಸದ್ಯಕ್ಕಿರುವ ಬಸ್ ನಿಲ್ದಾಣ ಚಿಕ್ಕದಾಗಿದ್ದು, ಬಸ್ಗಳ ದಟ್ಟಣೆ ಹೆಚ್ಚಾಗುತ್ತಿದೆ. ಅಲ್ಲದೇ ಮಳೆ ಬಂದರಂತೂ ಬಸ್ ನಿಲ್ದಾಣದಲ್ಲಿ ಕಾಲಿಡುವುದೂ ಸಾಧ್ಯವಿಲ್ಲದಂತಾಗಿದೆ.
ನಗರದಲ್ಲಿ ಹೊಸ ಬಸ್ ನಿಲ್ದಾಣಕ್ಕೆ ಸೂಕ್ತ ನಿವೇಶನದ ಕೊರತೆಯಿಂದ ಸುಮಾರು ಒಂದು ದಶಕದಿಂದ ಹೊಸ ಬಸ್ ನಿಲ್ದಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. 2009 ರಲ್ಲಿ ನೂತನ ಜಿಲ್ಲಾ ಕೇಂದ್ರವಾದ ನಂತರ ಬಸ್ಗಳ ಸಂಚಾರವೂ ಹೆಚ್ಚಾಗಿದ್ದು, ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇದರಿಂದಾಗಿ ಬಸ್ ನಿಲ್ದಾಣದ ಅವಶ್ಯಕತೆಯೂ ಹೆಚ್ಚಾಯಿತು.
ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ ಈಶಾನ್ಯ ಸಾರಿಗೆ ಸಂಸ್ಥೆ, ನಗರದಲ್ಲಿನ ಬಸ್ ಡಿಪೋ ಅನ್ನು ಹಿಂಭಾಗದಲ್ಲಿ ಲೋಕೋಪಯೋಗಿ ಇಲಾಖೆಯ 4 ಎಕರೆ ಭೂಮಿಯನ್ನು ಪಡೆಯಿತು. ಈ ಜಾಗೆಯಲ್ಲಿ ಡಿಪೋ ಸ್ಥಳಾಂತರಿಸಲಾಗಿದ್ದು, ಹಳೆ ಡಿಪೋ ಮತ್ತು ಅದರ ಪಕ್ಷದಲ್ಲಿದ್ದ ವಸತಿ ಗೃಹಗಳನ್ನು ಕೆಡವಿ, ಸುಮಾರು 6 ಎಕರೆ ಪ್ರದೇಶದಲ್ಲಿ ರೂ. 5 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ.
ಶಹಾಪುರ ಪಟ್ಟಣದಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿದ ಹೈಟೆಕ್ ಬಸ್ ನಿಲ್ದಾಣದ ನಿರ್ಮಾಣವಾಗಿದೆ. ಇದೇ ಮಾದರಿಯಲ್ಲಿ ನಗರದಲ್ಲೂ ಈ ಬಸ್ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ರಾಜ್ಯದ ವಿವಿಧೆಡೆ ಹಾಗೂ ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಪ್ರಾರಂಭಿಸಲು ಸಂಸ್ಥೆಯು ಮಾರ್ಗ ಸೂಚಿಯನ್ನು ಸಿದ್ಧಪಡಿಸಿದೆ. ಹೊಸ ಬಸ್ ನಿಲ್ದಾಣದ ಉದ್ಘಾಟನೆಯಾದ ನಂತರ ನೂತನ ಮಾರ್ಗಗಳಿಗೆ ಬಸ್ ಸೇವೆ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
30 ಪ್ಲಾಟ್ ಫಾರ್ಮ್: ನಗರದ ಈ ಹೈಟೆಕ್ ಬಸ್ ನಿಲ್ದಾಣದಲ್ಲಿ 30 ಪ್ಲಾಟ್ ಫಾರ್ಮ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಏಕಕಾಲಕ್ಕೆ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಬಸ್ ಸಂಚರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಆಸನ, ಕುಡಿಯಲು ನೀರು, ವಾಣಿಜ್ಯ ಮಳಿಗೆ, ವಿಶ್ರಾಂತಿಗೃಹ ಹಾಗೂ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಕಳೆದ 6 ತಿಂಗಳ ಹಿಂದೆ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿದ್ದು, ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಾಮಗಾರಿ ಭರದಿಂದ ಸಾಗಿದ್ದು, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿದೆ.
ಈಗಾಗಲೆ ಜಿಲ್ಲೆಯ ಹುಣಸಗಿ ಮತ್ತು ಗುರುಮಠಕಲ್ ಪಟ್ಟಣಗಳಲ್ಲೂ ಹೊಸ ಬಸ್ ನಿಲ್ದಾಣ ಕಾಮಗಾರಿಗಳು ನಡೆದಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಂಡು ಪ್ರಯಾಣಿಕರ ಸೇವೆಗೆ ಸಜ್ಜಾಗಲಿವೆ.
`ಜಿಲ್ಲಾ ಕೇಂದ್ರದಲ್ಲಿ ನೂತನ ಹೈಟೆಕ್ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭಗೊಂಡು 6 ತಿಂಗಳು ಕಳೆದಿವೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಲಿರುವ ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಲ್ಲ ಸವಲತ್ತುಗಳು ಲಭಿಸಲಿವೆ' ಎಂದು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಚ್. ಸಂತೋಷಕುಮಾರ ತಿಳಿಸಿದ್ದಾರೆ.
`ನಿರ್ಮಾಣ ಕಾಮಗಾರಿಗೆ ಒಟ್ಟು ರೂ. 5 ಕೋಟಿ ವ್ಯಯಿಸಲಾಗುತ್ತಿದೆ. ಪ್ರಯಾಣಿಕರಿಗೆ ಉತ್ತಮ ಅನುಕೂಲಕರ ನಿಲ್ದಾಣ: ರಾಜ್ಯದ ಕೆಲವೆಡೆ ನಿರ್ಮಾಣ ಮಾಡಿರುವ ಹೊಸ ಬಸ್ನಿಲ್ದಾಣಗಳು ನಗರ ಪ್ರದೇಶದಿಂದ ಹೊರಗಿದ್ದು, ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಜಿಲ್ಲೆಯ ಶಹಾಪುರದಲ್ಲಿ ನಿರ್ಮಿಸಿರುವ ಬಸ್ನಿಲ್ದಾಣವೂ ಪಟ್ಟಣದ ಹೊರಭಾಗದಲ್ಲಿದ್ದು, ಬಿಕೋ ಎನ್ನುತ್ತಿದೆ. ಹೀಗಾಗಿ ಎಲ್ಲ ಬಸ್ಗಳು ಹಳೆಯ ಬಸ್ನಿಲ್ದಾಣಕ್ಕೂ ಬರುವುದು ಅನಿವಾರ್ಯವಾಗಿದೆ.
`ನಗರದಲ್ಲಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣ ನಗರದ ಮಧ್ಯ ಭಾಗದಲ್ಲಿದ್ದು, ಪ್ರಯಾಣಿಕರಿಗೆ ಇನ್ನೂ ಹೆಚ್ಚು ಅನುಕೂಲಕರವಾಗಿದೆ.
ನಗರದ ಹೊಸ ಬಡಾವಣೆಗಳು ಹಾಗೂ ಹಳೆಯ ನಗರಗಳಿಗೆ ಹೊಸ ಬಸ್ನಿಲ್ದಾಣದಿಂದ ಉತ್ತಮ ಸಂಪರ್ಕವಿದ್ದು, ಪ್ರಯಾಣಿಕರ ದೃಷ್ಟಿಯಿಂದಲೂ ಇದು ಇನ್ನಷ್ಟು ಉತ್ತಮವಾಗಲಿದೆ. ಇದರಿಂದ ಬಸ್ಗಳು ನೇರವಾಗಿ ಹೊಸ ಬಸ್ನಿಲ್ದಾಣಕ್ಕೆ ಬರುವಂತಾಗಲಿದೆ' ಎನ್ನುತ್ತಾರೆ ನಗರದ ನಿವಾಸಿ ಅವಧೂತರಾವ ಕುಲಕರ್ಣಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.