ನಿಸರ್ಗ ನಿರ್ಮಿತ ಗುಹೆ ಪತ್ತೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಪ ರೂಪವಾಗಿರುವ ನಿಸರ್ಗದತ್ತವಾಗಿ ನಿರ್ಮಾಣವಾಗಿರುವ ಗುಹೆಯನ್ನು ಅರಣ್ಯಾಧಿಕಾರಿಗಳು ವಿರಾಜಪೇಟೆಯ ದಟ್ಟಾರಣ್ಯದಲ್ಲಿ ಈಚೆಗೆ ಪತ್ತೆಹಚ್ಚಿದ್ದಾರೆ.
ವಿರಾಜಪೇಟೆಯಿಂದ ಮಾಕುಟ್ಟಕ್ಕೆ ತೆರಳುವ ಮಾರ್ಗದಲ್ಲಿ 15ನೇ ಕಿ.ಮೀ ಆಸುಪಾಸಿನ ವಾಟೆಕೊಳಿಯಿಂದ ಎರಡು-ಎರಡೂವರೆ ಕಿ.ಮೀ ದಟ್ಟಾರಣ್ಯದ ಒಳಗೆ ಹರಿಯುವ ಆ್ಯಂಡರ್ಸನ್ ಹೊಳೆಯ ಪಕ್ಕದಲ್ಲಿ ಈ ಗುಹೆಯು ಪತ್ತೆಯಾಗಿದೆ.
ಗುಹೆಯು 60 ಮೀಟರ್ಗಿಂತಲೂ ಹೆಚ್ಚು ಉದ್ದ ಇರಬಹುದು ಎನ್ನುವ ಅಂದಾಜು ಇದ್ದು, ಎರಡೂವರೆ ಮೀಟರ್ ಎತ್ತರವಿದೆ. ಪ್ರವೇಶ ದ್ವಾರ ದಿಂದ 10 ಮೀಟರ್ ಒಳಗೆ ಮುಖ್ಯ ಮಾರ್ಗವು ಟಿಸಿಲು ಒಡೆದಿದ್ದು, ಎರಡು ಗುಹೆಗಳಿರುವ ಸಂಶಯವನ್ನೂ ಹುಟ್ಟುಹಾಕಿದೆ.
ಈ ಸ್ಥಳಕ್ಕೆ ತಲುಪಿದ ಅರಣ್ಯಾಧಿ ಕಾರಿಗಳಿಗೆ ನೀರು ತೊಟ್ಟಿಕ್ಕುವ ಹಾಗೂ ಹರಿಯುವ ಶಬ್ದವು ಗುಹೆಯೊಳಗಿ ನಿಂದ ಕೇಳಿಬಂದಿದೆ. ಇದರರ್ಥ ಗುಹೆ ಯೊಳಗೆ ನೀರು ಇರುವ ಸಂಭವವಿದೆ. ನೀರು ಹರಿದಾಡುವ ಪ್ರದೇಶವು ಸಾಮಾನ್ಯವಾಗಿ ಮೀನು, ಏಡಿಯಂತಹ ಜಲಚರ ಪ್ರಾಣಿಗಳಿಗೆ ಆಶ್ರಯ ತಾಣವಾಗಿರುತ್ತದೆ.
ಗುಹೆಯೊಳಗೆ ಹೋದಂತೆ ಕತ್ತಲೆ ಆವರಿಸುತ್ತದೆ. ಅಲ್ಲದೇ ಆಮ್ಲಜನಕದ (ಆಕ್ಸಿಜನ್) ಕೊರತೆಯ ಬಗ್ಗೆ ಸಂಶಯ ಮೂಡಿದ್ದರಿಂದ ಅರಣ್ಯಾಧಿಕಾರಿಗಳು ಅದರಾಚೆ ಹೋಗುವ ಧೈರ್ಯ ಮಾಡಿಲ್ಲ. ಅಲ್ಲಿಂದ ವಾಪಸ್ಸಾಗಿದ್ದಾರೆ.
ಬಾವಲಿ-ಹಾವು ವಾಸ: ಗುಹೆಯ ಪ್ರವೇಶ ದ್ವಾರದಲ್ಲಿಯೇ ಬಾವಲಿಗಳು ಕಂಡುಬಂದಿವೆ. ಸಾಮಾನ್ಯವಾಗಿ ಬಾವಲಿ ಗಳು ವಾಸವಿರುವ ಪ್ರದೇಶದ ಸುತ್ತಮುತ್ತ ಹಾವುಗಳು ಸಹ ವಾಸಿ ಸುತ್ತವೆ. ಈ ಅಂದಾಜಿನ ಮೇಲೆ ಗುಹೆ ಯೊಳಗೆ ಹಾವುಗಳು ಸಹ ಇರಬ ಹುದು ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
ನೀರಿನಿಂದ ನಿರ್ಮಾಣ?: ಗುಹೆಯ ಲಕ್ಷಣಗಳನ್ನು ಗಮನಿಸಿದರೆ ಇದು ನೀರಿನ ಹರಿವಿನಿಂದ ನಿರ್ಮಾಣವಾಗಿ ರಬಹುದು ಎಂದು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಕ್ಷಿತ್ ಹೇಳಿದರು.
ಭೂಮಿಯ ಮೇಲ್ಪದರ ಕೆಳಗೆ ನೀರಿನ ಚಲನವಲನ ಇರುತ್ತದೆ. ಈ ನೀರಿನಲ್ಲಿ ಕೆಲವು ವಿಧದ ಕಲ್ಲು (ಲೈಮ್ಸ್ಟೋನ್, ಕ್ವಾರ್ಟ್ಜ್) ಕರಗುತ್ತಾ ಹೋಗಿ, ಗುಹೆಯ ರೂಪ ಪಡೆದುಕೊಂಡಿದೆ. ನೂರಾರು ವರ್ಷಗಳ ಪ್ರಕ್ರಿಯೆ ಇದು. ಹೀಗೆ ನಿರ್ಮಾಣವಾಗುವ ಗುಹೆಗಳಿಗೆ `ಸೊಲ್ಯುಷನ್ ಕೇವ್ಸ್~ ಎನ್ನುತ್ತಾರೆ. ಇಲ್ಲಿನ ಮಣ್ಣು ಬಿಳಿ-ಕಂದು ಮಿಶ್ರಿತ ಬಣ್ಣದ್ದಾಗಿದ್ದು, ನುಣ್ಣಗಿದೆ. ಗುಹೆಯ ಛಾವಣಿ ಗಟ್ಟಿಮುಟ್ಟಾಗಿದೆ.
ಭೂಗರ್ಭಶಾಸ್ತ್ರಜ್ಞರಿಗೆ ಅವಕಾಶ:
`ಈ ಗುಹೆಯನ್ನು ಪೂರ್ತಿಯಾಗಿ ನೋಡಲು ನಮಗೆ ಸಾಧ್ಯವಾಗಲಿಲ್ಲ. ಭೂಗರ್ಭ ಶಾಸ್ತ್ರಜ್ಞರು ಹಾಗೂ ಗುಹೆ ಗಳ ಬಗ್ಗೆ ಅರಿವು ಇರುವವರಿಗೆ ಅಧ್ಯ ಯನಕ್ಕೊಂದು ಉತ್ತಮ ಅವಕಾಶವಾ ಗಲಿದೆ. ಗುಹೆ ಪತ್ತೆಯಾಗಿರುವ ವಿಷ ಯವನ್ನು ಶೀಘ್ರದಲ್ಲಿಯೇ ಸರ್ಕಾರಕ್ಕೆ ತಿಳಿಸುತ್ತೇನೆ. ಸರ್ಕಾರ ತಜ್ಞರನ್ನು ಇಲ್ಲಿಗೆ ಕಳುಹಿಸಿಕೊಟ್ಟರೆ, ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳ ಬಹುದಾಗಿದೆ~ ಎಂದು ದೀಕ್ಷಿತ್ ಅವರು `ಪ್ರಜಾವಾಣಿ~ಗೆ ತಿಳಿಸಿದರು.
ವರ್ಷದ ಹಿಂದೆಯೇ ನೋಡಿದ್ರು: ಆಶ್ಚರ್ಯಕರ ಸಂಗತಿಯೆಂದರೆ ಇಂಥ ಕುತೂಹಲ ಹುಟ್ಟಿಸುವ ಗುಹೆಯನ್ನು ವರ್ಷದ ಹಿಂದೆಯೇ ಅರಣ್ಯ ಇಲಾ ಖೆಯ ಗಾರ್ಡ್ಗಳು ನೋಡಿದ್ದರು. ಆದರೆ, ಅವರು ಅದನ್ನು ಇತರರಿಗೆ ತಿಳಿಸಿರಲಿಲ್ಲ. ಇದಲ್ಲದೇ, ಬೇರಾರೂ ಇದರ ಬಗ್ಗೆ ಗಮನ ಹರಿಸಿರಲಿಲ್ಲ.
ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ದೀಕ್ಷಿತ್ ಅವರು ಅಧಿಕಾರ ಸ್ವೀಕರಿಸಿದ ನಂತರ ಆಸಕ್ತಿ ವಹಿಸಿ, ಇಲ್ಲಿಗೆ ಭೇಟಿ ನೀಡಿ ದರು. ಜಿಪಿಎಸ್ ಸಾಧನದ ಮೂಲಕ ಗುಹೆಗೆ ಹೋಗುವ ಮಾರ್ಗವನ್ನೂ ಸಹ ಗುರುತು ಹಾಕಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.