ಪ್ಯಾಸೆಂಜರ್ ರೈಲು ಸಂಚಾರ ಪುನಾರಂಭಗೊಳ್ಳುವುದೇ?

ಸಂಡೂರು: ತಾಲ್ಲೂಕು ಕೇಂದ್ರವಾಗಿರುವ ಪಟ್ಟಣದಿಂದ ಕೇವಲ 3 ಕಿ.ಮೀ. ದೂರದಲ್ಲಿ ರೈಲು ಮಾರ್ಗವಿದೆ. ಈ ಮಾರ್ಗದ ಮೂಲಕ ನಿತ್ಯವೂ ಸರಕು ಹೊತ್ತ ಗೂಡ್ಸ್ ರೈಲುಗಳು ಸಂಚರಿಸುತ್ತವೆ. ಆದರೆ, ಈ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪ್ಯಾಸೆಂಜರ್ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿಲ್ಲ. ಇನ್ನು, ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತನೆಗೂ ಮುನ್ನ ಇದ್ದ ರೈಲು ಸಹ ಪುನಾರಂಭಗೊಂಡಿಲ್ಲ!
ಗಣಿ ನಾಡಾದ ಸಂಡೂರು ತಾಲ್ಲೂಕಿನಲ್ಲಿ ವಿವಿಧೆಡೆ ರೈಲು ಮಾರ್ಗಗಳಿವೆ. ಇಲ್ಲಿನ ಅದಿರು ಹಾಗೂ ಅದಿರು ಸಂಸ್ಕರಣದಿಂದ ಉತ್ಪಾದನೆಯಾಗುವ ವಸ್ತುಗಳನ್ನು ಸಾಗಾಟಕ್ಕೆ ಈ ಮಾರ್ಗ ಬಳಕೆಯಾಗುತ್ತಿದೆ. ಹೀಗಾಗಿ ರೈಲ್ವೆ ಇಲಾಖೆಗೆ ಈ ಮಾರ್ಗದಿಂದ ಸಾಕಷ್ಟು ಆದಾಯ ಇದೆ. ಹೀಗಿದ್ದರೂ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಇಲಾಖೆ ಮನಸ್ಸು ಮಾಡುತ್ತಿಲ್ಲ ಎಂಬ ಕೊರಗು ತಾಲ್ಲೂಕಿನ ಜನರದು. ಅದಿರು ಲಾರಿಗಳ ಸಂಚಾರದಿಂದ ಹದಗೆಟ್ಟಿರುವ ರಸ್ತೆಗಳಲ್ಲಿಯೇ ಓಡಾಡಿ, ಹೈರಾಣಾಗಬೇಕಾಗಿದೆ ಎಂದೂ ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಾರ್ಗ ಪರಿವರ್ತನೆ: ಈ ಮೊದಲು ಇದೇ ಮಾರ್ಗದಲ್ಲಿ ಹೊಸಪೇಟೆ–ಸ್ವಾಮಿಹಳ್ಳಿ ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು. ಈ ಮಾರ್ಗವನ್ನು ಬ್ರಾಡ್ಗೇಜ್ ಆಗಿ ಪರಿವರ್ತನೆ ಮಾಡುವ ಹಿನ್ನೆಲೆಯಲ್ಲಿ ಈ ರೈಲಿನ ಸಂಚಾರವನ್ನು 1995ರಲ್ಲಿ ಸ್ಥಗಿತಗೊಳಿಸಲಾಯಿತು. ಆದರೆ, ಮಾರ್ಗ ಪರಿವರ್ತನೆ ಕಾಮಗಾರಿ ಮುಗಿದು ಹಲವು ವರ್ಷಗಳೇ ಕಳೆದಿದ್ದರೂ ಇನ್ನೂ ಈ ರೈಲಿನ ಸಂಚಾರ ಪುನಾರಂಭಗೊಂಡಿಲ್ಲ.
ಒತ್ತಾಯ: ಬಳ್ಳಾರಿಯಿಂದ ಸಂಡೂರಿನ ಹೊರವಲಯದ ವರೆಗೆ ಈಗಾಗಲೇ ರೈಲು ಮಾರ್ಗವಿದೆ. ಈ ಮಾರ್ಗವನ್ನು ಕೊಟ್ಟೂರು ವರೆಗೆ ವಿಸ್ತರಿಸಿದ್ದೇ ಆದರೆ, ಆಂಧ್ರ, ಬಳ್ಳಾರಿ ಭಾಗದವರು ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹರಿಹರ, ದಾವಣಗೆರೆ, ಶಿವಮೊಗ್ಗ ಹಾಗೂ ಮಂಗಳೂರು ವರೆಗೆ ಸಂಚರಿಸಲು ಅನುಕೂಲವಾಗಲಿದೆ.
ಇನ್ನು, ಹೊಪಸೇಟೆ–ಸ್ವಾಮಿಹಳ್ಳಿ ಪ್ಯಾಸೆಂಜರ್ ರೈಲನ್ನು ಪುನಃ ಆರಂಭಿಸಿದರೆ ಈ ಭಾಗದ ಜನರು ಕೊಪ್ಪಳ, ಹುಬ್ಬಳ್ಳಿ ವರೆಗೆ ಸಂಚರಿಸಬಹುದಾಗಿದೆ.
ಹೈದರಾಬಾದ್ ಕರ್ನಾಟಕದವರೇ ಆಗಿರುವ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ರೈಲ್ವೆ ಬೇಡಿಕೆಗಳ ಬಗ್ಗೆ ಸ್ಪಂದಿಸುವರೇ ಎಂಬುದು ತಾಲ್ಲೂಕಿನ ಜನರ ನಿರೀಕ್ಷೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.