<p><strong>ಹರಪನಹಳ್ಳಿ: </strong>ಗುಹೆಯಂತೆ ಬೆಳೆದು ನಿಂತಿರುವ ಮುಳ್ಳಿನ ಪೊದೆಗಳು. ಕಾಲಿಟ್ಟರೆ ಸಾಕು ಚುಚ್ಚಿಕೊಳ್ಳುವ ಮುಳ್ಳು. ಕಲ್ಲು-ಮುಳ್ಳಿನ ಹಿಂಸೆ ಸಹಿಸಲಾರದೆ ಶಾಲೆ ತೊರೆಯುತ್ತಿರುವ ಮಕ್ಕಳು. ಸಕಾಲಕ್ಕೆ ಚಿಕಿತ್ಸೆಯ ನೆರವು ಸಿಗದೆ ಸಾವಿನ ಮನೆ ಸೇರುತ್ತಿರುವ ರೋಗಿಗಳು...!.<br /> <br /> ಇದು ತಾಲ್ಲೂಕಿನ ಅರಸೀಕೆರೆ ಹೋಬಳಿಯ ಜಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಒಳಪಡುವ ಗುಳೇದಹಟ್ಟಿ ತಾಂಡಾ ಎಂಬ ನತದೃಷ್ಟ ಹಳ್ಳಿಗೆ ಉರುಳಿನಂತೆ ಸುತ್ತಿಕೊಂಡಿರುವ ಭಯಾನಕ ಸಮಸ್ಯೆಯ ಬಳ್ಳಿ. <br /> ಸುಮಾರು 265ಜನಸಂಖ್ಯೆ ಹೊಂದಿರುವ 35ಮನೆಗಳ ಪುಟ್ಟಗ್ರಾಮ ಗುಳೇದಹಟ್ಟಿ ತಾಂಡಾ. ಈ ಗ್ರಾಮಕ್ಕೆ ತಲುಪಲು ಯಾವ ದಿಕ್ಕಿನಿಂದಲೂ ರಸ್ತೆಯೇ ಇಲ್ಲ!. ತಾಂಡಾ ಸುತ್ತಮುತ್ತಲಿನ ಯಾವ ಗ್ರಾಮಕ್ಕೆ ಹೋಗಬೇಕೆಂದರೂ, ಕನಿಷ್ಠ ನಾಲ್ಕಾರು ಕಿ.ಮೀ. ದೂರ ಸೀಳುದಾರಿ ಮೂಲಕ ಕಾಲ್ನಡಿಗೆಯಲ್ಲಿ ಸಂಚರಿಸಲೇಬೇಕಾದ ಅನಿವಾರ್ಯ ಕರ್ಮ ಈ ಗ್ರಾಮಸ್ಥರದು!. <br /> <br /> ಇಟ್ಟಗಿ- ಕಂಚಿಕೆರೆ ರಾಜ್ಯ ಹೆದ್ದಾರಿ-151ಕ್ಕೆ ಜೋಡಣೆಯಾಗುವ ರಸ್ತೆಯನ್ನು ಮಾತ್ರ ಮಣ್ಣಿನಿಂದ ಅಭಿವೃದ್ಧಿಪಡಿಸಲಾಗಿದೆ. ಉಳಿದಂತೆ, ನಿತ್ಯದ ವಹಿವಾಟು ಕೇಂದ್ರವಾದ ಕಾವಲಹಳ್ಳಿ ಹಾಗೂ ಗ್ರಾಮ ಪಂಚಾಯಿತ್ ಕೇಂದ್ರಸ್ಥಾನವಾದ ತೌಡೂರು ಗ್ರಾಮ ತಲುಪಬೇಕೆಂದರೆ ರಸ್ತೆಯೇ ಇಲ್ಲ. ರೈತರ ಹೊಲದ ನಡುವಿನ ಬಂಡಿದಾರಿಯಲ್ಲಿಯೇ ಗ್ರಾಮಸ್ಥರು ಸಂಚರಿಸಬೇಕು. ಎರೆಮಣ್ಣಿನಿಂದ ಕೂಡಿರುವ ಈ ಜಮೀನುಗಳ ಮುಖಾಂತರ ಮಳೆಗಾಲದಲ್ಲಿ ಸಂಚರಿಸುವುದು ಸಾಹಸಮಯವಾದ ಕೆಲಸ. ಹೀಗಾಗಿ ಕಾವಲಹಳ್ಳಿ ಕೇವಲ 2ಕಿ.ಮೀ. ಅಂತರದಲ್ಲಿದ್ದರೂ, ಇಲ್ಲಿನ ಕೆಲ ವಿದ್ಯಾರ್ಥಿಗಳು ನಾಲ್ಕಾರು ಕಿ.ಮೀ. ದೂರದಲ್ಲಿರುವ ಕಮ್ಮತ್ತಹಳ್ಳಿ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ.<br /> <br /> ಕಮ್ಮತ್ತಹಳ್ಳಿಗೆ ಸಂಪರ್ಕ ಕಲ್ಪಿಸುವ ದಾರಿಯ ಸ್ಥಿತಿಯಂತೂ ಊಹಿಸಿಕೊಳ್ಳಲು ಅಸಾಧ್ಯವಾದಷ್ಟು ಭಯಾನಕವಾಗಿದೆ. ರಸ್ತೆಯ ಎರಡು ಬದಿ ರಾಕ್ಷಸೋಪಾದಿಯಲ್ಲಿ ಬೆಳೆದುನಿಂತಿರುವ ಗಿಡ-ಗಂಟೆಗಳು ಪರಸ್ಪರ ಆವರಿಸಿಕೊಂಡು ಗುಹೆಗಳಂತೆ ಮಾರ್ಪಟ್ಟಿವೆ. ಮುಳ್ಳಿನ ಪೊದೆ ಭೇದಿಸಿ, ನೆಲದಮೇಲೆ ಸುರಿದ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಲೇ ಕಮ್ಮತ್ತಹಳ್ಳಿ ತಲುಪಬೇಕು!. ನಿತ್ಯವೂ ಈ ಚಿತ್ರಹಿಂಸೆ ತಾಳಲಾರದ ವಿದ್ಯಾರ್ಥಿಗಳು, ಹೊಲದ ಬದುವಿನ ಮೂಲಕ ಪುಣಭಗಟ್ಟೆ ಗ್ರಾಮ ಸುತ್ತಿಕೊಂಡು ಕಮ್ಮತ್ತಹಳ್ಳಿ ತಲುಪುತ್ತಾರೆ. ಮಳೆಗಾಲದ ಅವಧಿಯಲ್ಲಿ ಈ ಮಕ್ಕಳ ಗೋಳು ಹೇಳತೀರದು. ಈ ನರಕ ಅನುಭವಿಸಲಾರದೆ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ ಎಂದು ಸಂಕಟ ತೋಡಿಕೊಳ್ಳುತ್ತಾರೆ ಗ್ರಾಮದ ಯುವಕ ವೆಂಕಟೇಶ್, ಕುಬೇಂದ್ರನಾಯ್ಕ ಇತರರು.<br /> <br /> ಗರ್ಭಿಣಿಯರು,ಬಾಣಂತಿಯರು ಹಾಗೂ ವಿಷಜಂತು ಕಡಿತಕ್ಕೆ ಒಳಗಾದವರಿಗೆ ತುರ್ತುಚಿಕಿತ್ಸೆ ದೊರಕುವುದು ಕನಸಿನ ಮಾತು. ಇಂತಹ ಎಷ್ಟೋ ಸಂದರ್ಭಗಳಲ್ಲಿ `108ಆರೋಗ್ಯ ಕವಚ~ ಅಂಬುಲೆನ್ಸ್ಗೆ ಕರೆ ಮಾಡಿದರೂ ಬರಲು ದಾರಿಯೇ ಇಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರಕದೇ ಅನೇಕರು ಸಾವಿನ ಮನೆಯ ಕದ ತಟ್ಟಿದ್ದಾರೆ ಎಂದು ವಿವರಿಸುತ್ತಾರೆ ಗ್ರಾಮದ ಸೀತಾಬಾಯಿ ಹಾಗೂ ಸಾಕಮ್ಮ.<br /> <br /> ಸರ್ವಋತು ಸುಸಜ್ಜಿತವಾದ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಕಳೆದ ಫೆ. 27ರಿಂದ ಮಿನಿ ವಿಧಾನಸೌಧ ಮುಂದೆ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ನೇತೃತ್ವದಲ್ಲಿ ಗ್ರಾಮಸ್ಥರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಆದರೂ, ಸಂಬಂಧಿಸಿದ ಜನಪ್ರತಿನಿಧಿ ಇಲ್ಲವೇ; ಅಧಿಕಾರಿಗಳಿಗಾಗಲಿ ಗ್ರಾಮಸ್ಥರ ಗೋಳು ಕೇಳಿಸಿಲ್ಲ.ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ, `ಅಭಿವೃದ್ಧಿ~ ಪದ ವ್ಯಂಗ್ಯಕ್ಕೆ ಒಳಗಾಗುವ ಮುನ್ನ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಲಿ ಎಂಬುದು ಗ್ರಾಮಸ್ಥರ ಒತ್ತಾಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ: </strong>ಗುಹೆಯಂತೆ ಬೆಳೆದು ನಿಂತಿರುವ ಮುಳ್ಳಿನ ಪೊದೆಗಳು. ಕಾಲಿಟ್ಟರೆ ಸಾಕು ಚುಚ್ಚಿಕೊಳ್ಳುವ ಮುಳ್ಳು. ಕಲ್ಲು-ಮುಳ್ಳಿನ ಹಿಂಸೆ ಸಹಿಸಲಾರದೆ ಶಾಲೆ ತೊರೆಯುತ್ತಿರುವ ಮಕ್ಕಳು. ಸಕಾಲಕ್ಕೆ ಚಿಕಿತ್ಸೆಯ ನೆರವು ಸಿಗದೆ ಸಾವಿನ ಮನೆ ಸೇರುತ್ತಿರುವ ರೋಗಿಗಳು...!.<br /> <br /> ಇದು ತಾಲ್ಲೂಕಿನ ಅರಸೀಕೆರೆ ಹೋಬಳಿಯ ಜಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಒಳಪಡುವ ಗುಳೇದಹಟ್ಟಿ ತಾಂಡಾ ಎಂಬ ನತದೃಷ್ಟ ಹಳ್ಳಿಗೆ ಉರುಳಿನಂತೆ ಸುತ್ತಿಕೊಂಡಿರುವ ಭಯಾನಕ ಸಮಸ್ಯೆಯ ಬಳ್ಳಿ. <br /> ಸುಮಾರು 265ಜನಸಂಖ್ಯೆ ಹೊಂದಿರುವ 35ಮನೆಗಳ ಪುಟ್ಟಗ್ರಾಮ ಗುಳೇದಹಟ್ಟಿ ತಾಂಡಾ. ಈ ಗ್ರಾಮಕ್ಕೆ ತಲುಪಲು ಯಾವ ದಿಕ್ಕಿನಿಂದಲೂ ರಸ್ತೆಯೇ ಇಲ್ಲ!. ತಾಂಡಾ ಸುತ್ತಮುತ್ತಲಿನ ಯಾವ ಗ್ರಾಮಕ್ಕೆ ಹೋಗಬೇಕೆಂದರೂ, ಕನಿಷ್ಠ ನಾಲ್ಕಾರು ಕಿ.ಮೀ. ದೂರ ಸೀಳುದಾರಿ ಮೂಲಕ ಕಾಲ್ನಡಿಗೆಯಲ್ಲಿ ಸಂಚರಿಸಲೇಬೇಕಾದ ಅನಿವಾರ್ಯ ಕರ್ಮ ಈ ಗ್ರಾಮಸ್ಥರದು!. <br /> <br /> ಇಟ್ಟಗಿ- ಕಂಚಿಕೆರೆ ರಾಜ್ಯ ಹೆದ್ದಾರಿ-151ಕ್ಕೆ ಜೋಡಣೆಯಾಗುವ ರಸ್ತೆಯನ್ನು ಮಾತ್ರ ಮಣ್ಣಿನಿಂದ ಅಭಿವೃದ್ಧಿಪಡಿಸಲಾಗಿದೆ. ಉಳಿದಂತೆ, ನಿತ್ಯದ ವಹಿವಾಟು ಕೇಂದ್ರವಾದ ಕಾವಲಹಳ್ಳಿ ಹಾಗೂ ಗ್ರಾಮ ಪಂಚಾಯಿತ್ ಕೇಂದ್ರಸ್ಥಾನವಾದ ತೌಡೂರು ಗ್ರಾಮ ತಲುಪಬೇಕೆಂದರೆ ರಸ್ತೆಯೇ ಇಲ್ಲ. ರೈತರ ಹೊಲದ ನಡುವಿನ ಬಂಡಿದಾರಿಯಲ್ಲಿಯೇ ಗ್ರಾಮಸ್ಥರು ಸಂಚರಿಸಬೇಕು. ಎರೆಮಣ್ಣಿನಿಂದ ಕೂಡಿರುವ ಈ ಜಮೀನುಗಳ ಮುಖಾಂತರ ಮಳೆಗಾಲದಲ್ಲಿ ಸಂಚರಿಸುವುದು ಸಾಹಸಮಯವಾದ ಕೆಲಸ. ಹೀಗಾಗಿ ಕಾವಲಹಳ್ಳಿ ಕೇವಲ 2ಕಿ.ಮೀ. ಅಂತರದಲ್ಲಿದ್ದರೂ, ಇಲ್ಲಿನ ಕೆಲ ವಿದ್ಯಾರ್ಥಿಗಳು ನಾಲ್ಕಾರು ಕಿ.ಮೀ. ದೂರದಲ್ಲಿರುವ ಕಮ್ಮತ್ತಹಳ್ಳಿ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ.<br /> <br /> ಕಮ್ಮತ್ತಹಳ್ಳಿಗೆ ಸಂಪರ್ಕ ಕಲ್ಪಿಸುವ ದಾರಿಯ ಸ್ಥಿತಿಯಂತೂ ಊಹಿಸಿಕೊಳ್ಳಲು ಅಸಾಧ್ಯವಾದಷ್ಟು ಭಯಾನಕವಾಗಿದೆ. ರಸ್ತೆಯ ಎರಡು ಬದಿ ರಾಕ್ಷಸೋಪಾದಿಯಲ್ಲಿ ಬೆಳೆದುನಿಂತಿರುವ ಗಿಡ-ಗಂಟೆಗಳು ಪರಸ್ಪರ ಆವರಿಸಿಕೊಂಡು ಗುಹೆಗಳಂತೆ ಮಾರ್ಪಟ್ಟಿವೆ. ಮುಳ್ಳಿನ ಪೊದೆ ಭೇದಿಸಿ, ನೆಲದಮೇಲೆ ಸುರಿದ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಲೇ ಕಮ್ಮತ್ತಹಳ್ಳಿ ತಲುಪಬೇಕು!. ನಿತ್ಯವೂ ಈ ಚಿತ್ರಹಿಂಸೆ ತಾಳಲಾರದ ವಿದ್ಯಾರ್ಥಿಗಳು, ಹೊಲದ ಬದುವಿನ ಮೂಲಕ ಪುಣಭಗಟ್ಟೆ ಗ್ರಾಮ ಸುತ್ತಿಕೊಂಡು ಕಮ್ಮತ್ತಹಳ್ಳಿ ತಲುಪುತ್ತಾರೆ. ಮಳೆಗಾಲದ ಅವಧಿಯಲ್ಲಿ ಈ ಮಕ್ಕಳ ಗೋಳು ಹೇಳತೀರದು. ಈ ನರಕ ಅನುಭವಿಸಲಾರದೆ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ ಎಂದು ಸಂಕಟ ತೋಡಿಕೊಳ್ಳುತ್ತಾರೆ ಗ್ರಾಮದ ಯುವಕ ವೆಂಕಟೇಶ್, ಕುಬೇಂದ್ರನಾಯ್ಕ ಇತರರು.<br /> <br /> ಗರ್ಭಿಣಿಯರು,ಬಾಣಂತಿಯರು ಹಾಗೂ ವಿಷಜಂತು ಕಡಿತಕ್ಕೆ ಒಳಗಾದವರಿಗೆ ತುರ್ತುಚಿಕಿತ್ಸೆ ದೊರಕುವುದು ಕನಸಿನ ಮಾತು. ಇಂತಹ ಎಷ್ಟೋ ಸಂದರ್ಭಗಳಲ್ಲಿ `108ಆರೋಗ್ಯ ಕವಚ~ ಅಂಬುಲೆನ್ಸ್ಗೆ ಕರೆ ಮಾಡಿದರೂ ಬರಲು ದಾರಿಯೇ ಇಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರಕದೇ ಅನೇಕರು ಸಾವಿನ ಮನೆಯ ಕದ ತಟ್ಟಿದ್ದಾರೆ ಎಂದು ವಿವರಿಸುತ್ತಾರೆ ಗ್ರಾಮದ ಸೀತಾಬಾಯಿ ಹಾಗೂ ಸಾಕಮ್ಮ.<br /> <br /> ಸರ್ವಋತು ಸುಸಜ್ಜಿತವಾದ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಕಳೆದ ಫೆ. 27ರಿಂದ ಮಿನಿ ವಿಧಾನಸೌಧ ಮುಂದೆ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ನೇತೃತ್ವದಲ್ಲಿ ಗ್ರಾಮಸ್ಥರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಆದರೂ, ಸಂಬಂಧಿಸಿದ ಜನಪ್ರತಿನಿಧಿ ಇಲ್ಲವೇ; ಅಧಿಕಾರಿಗಳಿಗಾಗಲಿ ಗ್ರಾಮಸ್ಥರ ಗೋಳು ಕೇಳಿಸಿಲ್ಲ.ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ, `ಅಭಿವೃದ್ಧಿ~ ಪದ ವ್ಯಂಗ್ಯಕ್ಕೆ ಒಳಗಾಗುವ ಮುನ್ನ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಲಿ ಎಂಬುದು ಗ್ರಾಮಸ್ಥರ ಒತ್ತಾಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>