ಮೋಡಿ ಮಾಡುವ ಹುಮ್ಮಸ್ಸಿನಲ್ಲಿ ‘ಮೆಲೋಡಿ’

ಸಂಗೀತ ಪಯಣವೋ? ಸಿನಿ ಪಯಣವೋ?
ಚಿತ್ರೀಕರಣ ಮುಗಿಸಿಕೊಂಡು ಬಂದ ‘ಮೆಲೋಡಿ’ ಚಿತ್ರತಂಡಕ್ಕೆ ಇನ್ನೂ ಈ ಗೊಂದಲ ಪರಿಹಾರವಾದಂತಿರಲಿಲ್ಲ. ಎಲ್ಲರೂ ಅದೇ ಗುಂಗಿನಲ್ಲಿ ಇದ್ದರು. ಕೊನೆಗೆ, ‘ಸಂಗೀತ ಮಾಧುರ್ಯ ತುಂಬಿದ ಪಯಣ ಈ ಚಿತ್ರದ್ದು’ ಎಂಬ ನಿರ್ದೇಶಕ ನಂಜುಂಡ ಕೃಷ್ಣ ಅವರ ವಿಶ್ಲೇಷಣೆಯನ್ನು ಎಲ್ಲರೂ ಒಪ್ಪಿಕೊಂಡರು!
ಪಕ್ಕಾ ಲೆಕ್ಕಾಚಾರ ಹಾಗೂ ಕರಾರುವಾಕ್ಕಾಗಿ ಚಿತ್ರೀಕರಣ ನಡೆಸಿದ ಖುಷಿಯಲ್ಲಿ ನಿರ್ದೇಶಕರಿದ್ದರು. ‘ರೆಕಾರ್ಡಿಂಗ್, ಎಡಿಟಿಂಗ್ ಇತ್ಯಾದಿ ಕೆಲಸ ಇದ್ದೇ ಇವೆ. ಸಿನಿಮಾ ಆರಂಭವಾಗಿದ್ದೊಂದೇ ಗೊತ್ತು. ಅದು ಹೇಗೆ ಮುಗಿಯಿತೋ ಗೊತ್ತಾಗಲಿಲ್ಲ. ಎಲ್ಲರೂ ಪರಸ್ಪರ ತಮಾಷೆ ಮಾಡುತ್ತ, ಖುಷಿಯಿಂದಲೇ ತಮ್ಮ ಪಾಲಿನ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ’ ಎಂಬ ಸರ್ಟಿಫಿಕೇಟ್ ಅವರಿಂದ ಸಂದಾಯವಾಯಿತು.
ಬರೀ ಸಂಗೀತದಲ್ಲಷ್ಟೇ ಮಾಧುರ್ಯ ಇದೆ ಎಂದರೆ ಸರಿಯಲ್ಲ. ಬದುಕಿನಲ್ಲೂ ಮಾಧುರ್ಯ ಇದೆ. ಆದರೆ ಅದನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಹಳಹಳಿಕೆ ನಂಜುಂಡ ಕೃಷ್ಣ ಅವರದು. ಫೇಸ್ಬುಕ್ನಂಥ ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಅವಲಂಬಿಸಿರುವ ಯುವಪೀಳಿಗೆ, ಜೀವನದ ಮಾಧುರ್ಯವನ್ನೇ ಸವಿಯುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಚಿತ್ರಕಥೆ ಹೆಣೆದಿದ್ದಾಗಿ ಅವರು ಹೇಳಿದರು.
ನಾಯಕ ನಟ ರಾಜೇಶ್ ಕೃಷ್ಣನ್ ಅವರಿಗೆ ನಿರ್ದೇಶಕರು ಹೀಗೆಯೇ ಮಾಡು ಎಂದು ಹೇಳದೇ ಇದ್ದುದು ಸೋಜಿಗ ಮೂಡಿಸಿದೆ.
ಯಾವುದೇ ಕಟ್ಟುಪಾಡು ವಿಧಿಸದ ನಂಜುಂಡ ಕೃಷ್ಣ ಅವರ ಕಾರ್ಯವೈಖರಿಯನ್ನು ಮನಸಾರೆ ಕೊಂಡಾಡಿದರು. ಗಾಯಕರೂ ಆಗಿರುವುದರಿಂದ ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ಅವರೇ ದನಿ ನೀಡಿದ್ದಾರೆ. ‘ಹೀರೋಯಿಸಂ ಇಲ್ಲದ ಈ ಸಿನಿಮಾ ಯುವಕರನ್ನು ಸೆಳೆಯಲಿದೆ’ ಎಂಬ ವಿಶ್ವಾಸದ ನುಡಿ ಅವರದು. ಚಿತ್ರದ ಇನ್ನೊಬ್ಬ ನಾಯಕ ಚೇತನ್ ಗಂಧರ್ವ, ಸಿನಿಮಾ ಸೆಟ್ನಲ್ಲೂ ತನ್ನ ‘ಕೋತಿಚೇಷ್ಟೆ’ ಸಹಿಸಿಕೊಂಡ ಎಲ್ಲರಿಗೂ ಥ್ಯಾಂಕ್ಸ್ ಹೇಳಿದರು. ಯಾಕೆಂದರೆ ‘ಮೆಲೋಡಿ’ಯಲ್ಲಿ ಅವರ ಪಾತ್ರ ಹುಚ್ಚಾಟ ಮಾಡುತ್ತ ತಿರುಗಾಡುವ ಹುಡುಗನದ್ದು!
ನೃತ್ಯಗಾತಿಯಾಗಿರುವ ಕಾರ್ತಿಕಾ ಮೆನನ್ಗೆ ಇದು ಮೊದಲ ಸಿನಿಮಾ. ನಿರ್ದೇಶಕರು ‘ಅಭಿನಯಿಸಬೇಡಿ. ಸುಮ್ಮನೇ ನಿಮ್ಮ ಪಾಡಿಗೆ ನೀವು ಪಾತ್ರವನ್ನು ನಿರ್ವಹಿಸಿದರೆ ಸಾಕು’ ಎಂದು ಹೇಳಿದ್ದರಂತೆ. ಅದನ್ನು ಮತ್ತೆ ಮತ್ತೆ ಹೇಳಿ, ಅಚ್ಚರಿಪಟ್ಟರು. ದಿಟ್ಟ ಯುವತಿಯ ಪಾತ್ರ ನಿರ್ವಹಿಸಿರುವ ಅಕ್ಷತಾ, ‘ಸಿನಿಮಾ ನೋಡಿ ನನ್ನ ಅಭಿನಯ ಹೇಗಿದೆ ಎಂದು ಹೇಳಿ’ ಎಂಬ ಮನವಿ ಮುಂದಿಟ್ಟರು.
ತಲಾ ಇಬ್ಬರು ನಾಯಕ–ನಾಯಕಿಯರಿಗೆ ಹಾಡುಗಳಿಗೆ ಹೆಜ್ಜೆ ಹಾಕಿಸಿರುವ ತ್ರಿಭುವನ್, ಇದರಲ್ಲಿ ತೀರಾ ವಿಭಿನ್ನ ನೃತ್ಯಗಳನ್ನು ಸಂಯೋಜಿಸಿದ್ದಾರಂತೆ. ಇಡೀ ಚಿತ್ರತಂಡಕ್ಕೆ ಸಂಪರ್ಕ ಸೇತುವೆಯಾದ ಎಲ್.ಎನ್.ಶಾಸ್ತ್ರಿ, ಆರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಿರ್ಮಾಪಕ ಕೃಷ್ಣಮೂರ್ತಿ, ಛಾಯಾಗ್ರಾಹಕ ನಾಗೇಶ್ವರರಾವ್, ಹಾಸ್ಯ ನಟ ಶಮಂತ್ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.