ರಾಜ್ಯ ಬಜೆಟ್ ಇವರೇನಂತಾರೆ?
ಎಲ್ಲಾ ರಂಗಕ್ಕೂ ಅವಕಾಶ: ಸೊರಕೆ
ಉಡುಪಿ: `ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಮುಂಗಡಪತ್ರದಲ್ಲಿ ಎಲ್ಲಾ ರಂಗಕ್ಕೂ ಅವಕಾಶ ನೀಡುವ ಮೂಲಕ ಇದೊಂದು ಉತ್ತಮ ಬಜೆಟ್' ಮುಂಗಡಪತ್ರದಲ್ಲಿ ಕೃಷಿ ರಂಗ, ಗ್ರಾಮೀಣ ಪ್ರದೇಶಕ್ಕೆ ಹಾಗೂ ಶಿಕ್ಷಣ , ನಗರಾಭಿವೃದ್ಧಿಗೆ ಸಮಾನವಾಗಿ ಒತ್ತು ನೀಡಲಾಗಿದೆ.
ಮೂಲ ಸೌಕರ್ಯಕ್ಕೆ 11ಸಾವಿರ ಕೋಟಿ ರೂಪಾಯಿ ನೀಡುವ ಮೂಲಕ ನಗರ ಪ್ರದೇಶದಲ್ಲಿ ಕುಡಿಯುವ ನೀರು, ಒಳ ಚರಂಡಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ತುಮಕೂರು, ಶಿವಮೊಗ್ಗ, ವಿಜಾಪುರ ನಗರಸಭೆಗಳನ್ನು ಮಹಾನಗರ ಪಾಲಿಕೆಗಳನ್ನಾಗಿ ಉನ್ನತೀಕರಿಸಲು ನಿರ್ಧರಿಸಲಾಗಿದ್ದು, ಜನಸಂಖ್ಯಾ ಆಧಾರದ ಮೇಲೆ ಮಹಾನಗರ ಪಾಲಿಕೆ ಮಾಡಲು ನಿರ್ಧರಿಸಲಾಗಿದೆ.
ಈಗಾಗಲೇ ಪೌರಾಡಳಿತದಿಂದ ನಗರಾಭಿವೃದ್ಧಿ ಆಯುಕ್ತರ ಆಲಯವೆಂದು ಮಾಡುವುದು, ಮೀನುಗಾರರ ಬೇಡಿಕೆ ಹಾಗೂ ಉಡುಪಿ ಜಿಲ್ಲೆಗೆ ಸಾಕಷ್ಟು ಒತ್ತು ನೀಡಿದೆ.
ವಿನಯ ಕುಮಾರ್ ಸೊರಕೆ,ನಗರಾಭಿವೃದ್ಧಿ ಸಚಿವ
ಹೊಸತನ ನಿರೀಕ್ಷೆ ಸುಳ್ಳಾಗಿಸಿದ ಬಜೆಟ್
ಉಡುಪಿ: ಏಳು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಹೊಸತನವನ್ನು ನಿರೀಕ್ಷಿಸಲಾಗಿತ್ತು. ಆದರೆ, ಅದೆಲ್ಲಾ ಸುಳ್ಳಾಗಿದೆ. ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡಿಸಿದ ಸುವರ್ಣ ಭೂಮಿ ಯೋಜನೆಯನ್ನು ಕೈಬಿಡಲಾಗಿದೆ. ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಸಾವಯವ ಕೃಷಿಗೆ ಒತ್ತು ನೀಡಿಲ್ಲ. ಒಟ್ಟಿನಲ್ಲಿ ಸರ್ಕಾರದ ಬಜೆಟ್ ನಿರಾಶದಾಯಕವಾಗಿದೆ ಎಂದು
ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಬಜೆಟ್ ಚುನಾವಣೆ ಮೇಲೆ ಕಣ್ಣು
ಹೆಬ್ರಿ: ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಂದಿನ ಲೋಕಸಭೆಯ ಚುನಾವಣೆಯ ಮೇಲೆ ಕಣ್ಣಿಟ್ಟು ಮಾಡಿದ ತಂತ್ರ. ಒಟ್ಟಾರೆ ಘೋಷಣೆಗಳ ಮಹಾಪೂರವೇ ಹರಿಸಲಾಗಿದೆ.
ಎಚ್.ಮೋಹನದಾಸ ನಾಯಕ್, ಬಿಜೆಪಿ ಮುಖಂಡ
ಜನಪರ ಬಜೆಟ್
ಹೆಬ್ರಿ: ಹಳ್ಳಿಯ ಯುವಕರಿಗೆ ಉದ್ಯೋಗ ಸೃಷ್ಟಿ, ಕೃಷಿ, ಹೈನುಗಾರಿಕೆ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಮಹಿಳೆಯರ ರಕ್ಷಣೆ, ನೀರಾವರಿ, ಆಹಾರ ಸುರಕ್ಷತೆ ಸೇರಿದಂತೆ ವಿವಿಧ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿ ಜನ ಸಾಮಾನ್ಯರ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಮತ್ತು ಜನರ ಕಲ್ಯಾಣಕ್ಕೆ ವಿಶೇಷ ಒತ್ತು ನೀಡಿ ಜನತೆ ಸ್ವಾವಲಂಬಿ ಜೀವನ ನಡೆಸಲು ವಿಶೇಷ ಪ್ರೇರಣೆ ನೀಡಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಭಿವೃದ್ಧಿಯ ಪರಾಮರ್ಶೆ ನಡೆಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವುದು ಸ್ವಾಗತಾರ್ಹ. ಒಟ್ಟಾರೆ ಹಿಂದುಳಿದ ವರ್ಗದ ಮತ್ತು ಜನಸಾಮಾನ್ಯರ ಬಜೆಟ್ ಮೂಡಿ ಬಂದಿದೆ.
ಎಚ್.ಗೋಪಾಲ ಭಂಡಾರಿ, ಮಾಜಿ ಶಾಸಕ
ಬಜೆಟ್ ನೀರಾವರಿಯಲ್ಲಿ ವಿಶ್ವದಾಖಲೆ
ಹೆಬ್ರಿ: 2ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ, ಮಾತೃಭಾಷೆಯ ಜೊತೆ ಒಂದನೇ ತರಗತಿಯಿಂದಲೇ ಆಂಗ್ಲ ಬೋಧನೆ, ಹಾಲಿಗೆ 4 ರೂಪಾಯಿ ಪ್ರೋತ್ಸಾಹಧನ, 40 ವರ್ಷ ದಾಟಿದ ಮಹಿಳೆಯರಿಗೆ ಮಾಶಾಸನ ಜೊತೆಗೆ ಮುಖ್ಯವಾಗಿ ದೇಶದಲ್ಲೇ ಮೊದಲ ಭಾರಿಗೆ 50 ಸಾವಿರ ಕೋಟಿ ರೂಪಾಯಿಯನ್ನು ನೀರಾವರಿಗೆ ಮೀಸಲಿಟ್ಟಿದ್ದು, ಪ್ರಥಮ ಮತ್ತು ವಿಶ್ವದಾಖಲೆಯಾಗಿದ್ದಲ್ಲದೆ ಒಟ್ಟಾರೆ ರಾಜ್ಯದ ಬಜೆಟ್ ಆಶಾದಾಯಕ ಜನಪರ, ಜನಸಾಮಾನ್ಯರ ಬಜೆಟ್ ಆಗಿದೆ.
ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಮಹಿಳೆಯರಿಗೆ ರಕ್ಷಣೆಗೆ ಒತ್ತು
ಹೆಬ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ, ಹೈನುಗಾರಿಕೆ, ಶಿಕ್ಷಣ, ಆರೋಗ್ಯ ಸೇರಿ ಮಹಿಳೆಯರಿಗೆ ವಿಶೇಷ ಒತ್ತು ನೀಡಿ ಮಹಿಳಾಪರ ಬಜೆಟ್ ಮಂಡಿಸಿದ್ದಾರೆ.
ಪೊಲೀಸ್ ಇಲಾಖೆಯ ಮೂಲಕ ಮಹಿಳೆಯರಿಗೆ ರಕ್ಷಣೆ ಮತ್ತು ಹಾಲಿಗೆ 4 ರೂಪಾಯಿ ಪ್ರೋತ್ಸಾಹಧನ, 40 ವರ್ಷ ದಾಟಿದ ಮಹಿಳೆಯರಿಗೆ ಮಾಸಾಶನ ಉತ್ತಮ ಕಾರ್ಯಕ್ರಮ.
ಸುಜಾತ ಲಕ್ಷ್ಮಣ ಆಚಾರ್, ಹೆಬ್ರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
ಜನತೆಗೆ ವರದಾನ
ಹೆಬ್ರಿ: ಸಿದ್ದರಾಮಯ್ಯನವರು ಮಂಡಿಸಿದ ಚೊಚ್ಚಲ ಬಜೆಟ್ ಜನಸಾಮಾನ್ಯರಿಗೆ ವರದಾನವಾಗಿದ್ದು, ಜನಕಲ್ಯಾಣದ ಮೂಲಕ ರಾಜ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗಿದೆ. ನಗರ ಪ್ರದೇಶ ಮತ್ತು ಗ್ರಾಮೀಣ ಅಭಿವೃದ್ದಿಗೆ ವಿಶೇಷ ಒತ್ತನ್ನು ರಾಜ್ಯ ಸರ್ಕಾರ ನೀಡಿದೆ.
ಎಚ್.ಪ್ರಸನ್ನ ಬಲ್ಲಾಳ್, ಜಿ.ಪಂ.ಮಾಜಿ ಉಪಾಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.