ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜ ವಿನ್ಯಾಸಕ ಪಿಂಗಳಿ ವೆಂಕಯ್ಯ

Last Updated 14 ಆಗಸ್ಟ್ 2016, 21:01 IST
ಅಕ್ಷರ ಗಾತ್ರ

ಭಾರತದ ಚರಿತ್ರೆಯಲ್ಲಿ ಬಹಳ ಮಹತ್ವದ ತಿಂಗಳು ಆಗಸ್‌್ಟ. ಅನೇಕ ರಾಜಕೀಯ ಪಲ್ಲಟಗಳನ್ನು ಕಂಡ ಮಾಸ ಇದು. ನಮ್ಮ ದೇಶದ ಹೆಮ್ಮೆಯ ಸಂಕೇತಗಳಲ್ಲಿ ಒಂದಾದ ತ್ರಿವರ್ಣ ರಾಷ್ಟ್ರಧ್ವಜ ರಾರಾಜಿಸುವ ತಿಂಗಳಿದು.

ಭಾರತೀಯರೆಲ್ಲರೂ ಗುರುತಿಸುವ, ಗೌರವಿಸುವ ತ್ರಿವರ್ಣಧ್ವಜದ ವಿನ್ಯಾಸಕಾರ ಮಾತ್ರ ಅಪರಿಚಿತ. ಅವರೇ ಪಿಂಗಳಿ ವೆಂಕಯ್ಯ. ಆಂಧ್ರದ ಕಡಲತೀರ ಮಚಲಿ ಪಟ್ಟಣಂ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ (1876ರ ಆಗಸ್ಟ್‌ 2ರಂದು) ವೆಂಕಯ್ಯ ಪ್ರಾಥಮಿಕ ಶಿಕ್ಷಣವನ್ನು ಮಚಲಿ ಪಟ್ಟಣಂನಲ್ಲಿ ಪೂರೈಸಿ ಪ್ರೌಢಶಿಕ್ಷಣಕ್ಕೆಂದು ಹೋಗಿದ್ದು ಕೊಲಂಬೊಗೆ.

ಬಹುಮುಖ ಪ್ರತಿಭೆಯ ವೆಂಕಯ್ಯ ಸ್ವಂತ ಪರಿಶ್ರಮದ ಮೇಲೆ ಹೆಚ್ಚಿನ ನಂಬಿಕೆ ಇಟ್ಟವರು. ಸದಾ ಉತ್ಸಾಹದ ಬುಗ್ಗೆಯಾಗಿದ್ದ ವೆಂಕಯ್ಯ ಹದಿಹರೆಯದಲ್ಲೇ ಬ್ರಿಟಿಷ್‌ ಸೈನ್ಯ ಸೇರಿದರು; ಆಂಗ್ಲೊ–ಬೋರ್‌ ಯುದ್ಧದಲ್ಲಿ ಪಾಲ್ಗೊಂಡರು. ಅದು ನಡೆದಿದ್ದು ಆಫ್ರಿಕಾದಲ್ಲಿ. ಆಗಲೇ ಅವರು ಮೋಹನದಾಸ ಕರಮಚಂದ್‌ ಗಾಂಧಿ ಸಹಚರ್ಯೆಗೆ ಸೇರಿದರು.

ಸ್ವಲ್ಪ ಕಾಲದ ಬಳಿಕ ಸೈನ್ಯ ತೊರೆದು ರೈಲ್ವೆ ಗಾರ್ಡ್‌ ಆಗಿ ಸೇವೆ ಸಲ್ಲಿಸಿದ ವೆಂಕಯ್ಯ ಲಾಹೋರ್‌ನಲ್ಲಿ ಓದು ಮುಂದುವರೆಸಿದರು. ಹಲವು ಭಾರತೀಯ ಭಾಷೆಗಳನ್ನು ಬಲ್ಲವರಾಗಿದ್ದ ಅವರು ಜಪಾನಿ ಭಾಷೆಯನ್ನು ಸಲೀಸಾಗಿ ಮಾತನಾಡಬಲ್ಲವರಾಗಿದ್ದರು.

ಹೊಸ ವಿಚಾರಗಳಿಗೆ ಸದಾ ತುಡಿಯುತ್ತಿದ್ದ ವೆಂಕಯ್ಯ ಹತ್ತಿ ಬೆಳೆ ಕುರಿತು ಸಂಶೋಧನೆಗೆ ತೊಡಗಿದ್ದರು.  ಹತ್ತಿ ಬೆಳೆ ಯ ಇಳುವರಿಗೆ ಹತ್ತಾರು ಪ್ರಯೋಗಗಳಿಂದ  ಶ್ರಮಿಸಿದ ಇವರಿಗೆ ಪತ್ತಿ (ಹತ್ತಿ) ವೆಂಕಯ್ಯ ಎಂಬ ಹೆಸರೇ ಅಂಟಿಕೊಂಡಿತು. ಭೂವಿಜ್ಞಾನದಲ್ಲಿ ಉನ್ನತ ವ್ಯಾಸಂಗ ನಡೆಸಿ, ಅದೇ ವಿಷಯದಲ್ಲಿ ಡಾಕ್ಟರೇಟ್‌ ಪದವಿಯನ್ನು ಪಡೆದು ವಜ್ರದ ಗಣಿಗಳಲ್ಲಿ ಸಂಶೋಧನೆಗೆ ತೊಡಗಿದರು. ಈಗ ಅವರು ‘ಡೈಮಂಡ್‌ ವೆಂಕಯ್ಯ’ ಎನಿಸಿದರು.

ಅಪ್ರತಿಮ ಬುದ್ಧಿಮತ್ತೆಯ ವೆಂಕಯ್ಯ ಶಿಕ್ಷಣ ಹಾಗೂ ಸಂಶೋಧನೆಗಳಲ್ಲಿ ಸಕ್ರಿಯರಾಗಿದ್ದರೂ ಅವರು ಹೆಚ್ಚಿನ ಸಮಯವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಮೀಸಲಿಟ್ಟರು. ಆ ಹೊತ್ತಿಗಾಗಲೇ ದೇಶದಲ್ಲಿ ಸ್ವಾತಂತ್ರ್ಯ ಆಂದೋಲನದ ಕಾವು ಜೋರಾಗಿತ್ತು. ಸ್ವತಂತ್ರಭಾರತಕ್ಕೆ ಮಹತ್ವದ ಕೊಡುಗೆ ನೀಡಬೇಕೆಂಬ ಗುರಿ ಇಟ್ಟುಕೊಂಡು 1916ರ ಸುಮಾರಿಗೆ ಬಾವುಟಗಳ ವಿನ್ಯಾಸಗಳಿಗೆ ಕೈಹಾಕಿದವರು ವೆಂಕಯ್ಯ.

ಹತ್ತಿಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ವೆಂಕಯ್ಯ ಹತ್ತಿಯಿಂದ ಭಾರತದ ಧ್ವಜ ತಯಾರಿಸಲು ಮುಂದಡಿ ಇಟ್ಟು 30ಕ್ಕೂ ಹೆಚ್ಚು ದೇಶಗಳ ಬಾವುಟಗಳನ್ನು ಅಭ್ಯಾಸ ಮಾಡಿದ್ದರು. 1921 ರಲ್ಲಿ ಕೇಸರಿ–ಹಸಿರು ಬಣ್ಣದ ಬಾವುಟವನ್ನು ಸಿದ್ಧಪಡಿಸಿದರು. ಇದಕ್ಕೆ ಬಿಳಿ ಬಣ್ಣವನ್ನು ಸೇರಿಸಲು ಗಾಂಧೀಜಿ ಸಲಹೆ ಕೊಟ್ಟರು. ಜಲಂದರ್‌ನ ಲಾಲ್‌ ಹನ್‌್ಸರಾಜ್‌ ಎಂಬುವವರು ಚರಕ ಚಿತ್ರ ಇರಲೆಂದರು. ಇವೆಲ್ಲ ಬದಲಾವಣೆಗಳನ್ನೂ ಸೇರಿಕೊಂಡ ತ್ರಿವರ್ಣಧ್ವಜದ ಮಾದರಿಯನ್ನು ವೆಂಕಯ್ಯ ಸಿದ್ಧಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT