ಶೇಂಗಾ ಬೆಲೆ ಕುಸಿತ: ಕಂಗಾಲಾದ ಅನ್ನದಾತ

ಯಾದಗಿರಿ: ಕಳೆದ ವರ್ಷದ ಬಂಪರ್ ಬೆಳೆ ಹಾಗೂ ಉತ್ತಮ ಬೆಲೆಯಿಂದ ಉತ್ತೇಜಿತರಾದ ರೈತರು, ಈ ಬಾರಿಯೂ ಶೇಂಗಾ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಆದರೆ ಕಳೆದ ವರ್ಷದಂತೆ ಈ ಬಾರಿಯೂ ರೈತರಿಗೆ ಉತ್ತಮ ಬೆಲೆ ಸಿಗದೇ ಕಂಗಾಲಾಗುವಂತಾಗಿದೆ.
ಎಲೆ ಚುಕ್ಕೆ ರೋಗ ಹಾಗೂ ಕೀಟಬಾಧೆಯಿಂದ ತತ್ತರಿಸಿದ ಶೇಂಗಾ ಇಳುವರಿಯೂ ಈ ಬಾರಿ ಕಡಿಮೆ ಆಗಿದ್ದು, ಬೆಲೆಯಲ್ಲೂ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ. ಹೀಗಾಗಿ ಶೇಂಗಾ ಬೆಳೆಯಲು ಮಾಡಿದ ಖರ್ಚೂ ಬಾರದಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ವರ್ಷದ ಹಿಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ಸುಮಾರು 9 ಸಾವಿರ ಕ್ವಿಂಟಲ್ ಶೇಂಗಾ ಬೀಜ ವಿತರಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 72,119 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಯಾದಗಿರಿ ತಾಲ್ಲೂಕಿನಲ್ಲಿ 24,619 ಹೆಕ್ಟೇರ್, ಶಹಾಪುರ ತಾಲ್ಲೂಕಿನ 22ಸಾವಿರ ಹೆಕ್ಟೇರ್, ಹಾಗೂ ಸುರಪುರ ತಾಲ್ಲೂಕಿನ 25,500 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು.
ಶೇಂಗಾ ಬಿತ್ತನೆ ಮಾಡಿದ ಸಂದರ್ಭದಲ್ಲಿ ಮಳೆ ಇಲ್ಲದೇ ಇದ್ದರೂ, ಕೆರೆ ಹಾಗೂ ನೀರಾವರಿ ಸೌಲಭ್ಯದಿಂದ ರೈತರು ಚೆನ್ನಾಗಿಯೇ ಬೆಳೆ ಬೆಳೆದಿದ್ದರು. ಕಳೆದ ವರ್ಷದಂತೆ ಉತ್ತಮ ಇಳುವರಿ ಹಾಗೂ ಬೆಲೆಯನ್ನೂ ನಿರೀಕ್ಷೆ ಮಾಡಿದ್ದರು. ಆದರೆ ಈ ವರ್ಷ ಎಲ್ಲ ನಿರೀಕ್ಷೆಗಳು ಹುಸಿಯಾಗಿದ್ದು, ಇಳುವರಿಯ ಜೊತೆಗೆ ಬೆಲೆಯೂ ಕುಸಿದಿದೆ.
ವಿದ್ಯುತ್ ತೊಂದರೆಯ ಮಧ್ಯೆಯೂ ದುಬಾರಿ ಬೆಲೆಯಲ್ಲಿ ಬೀಜ ಖರೀದಿಸಿ ಬಿತ್ತನೆ ಮಾಡಿದ ರೈತರು, ಗುಣಮಟ್ಟದ ಶೇಂಗಾ ಬೀಜಗಳು ದೊರೆಯದೇ ಕಂಗಾಲಾಗುವಂತಾಗಿದೆ. ಇಳುವರಿಯೂ ಕಡಿಮೆ ಆಗಿದ್ದರೆ, ಗುಣಮಟ್ಟ ಸರಿಯಾಗಿ ಇಲ್ಲದೇ ಇರುವುದರಿಂದ ಉತ್ತಮ ತೂಕ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಕನಿಷ್ಠ ₨ 2,500 ರಿಂದ ಗರಿಷ್ಠ ₨ 3,500 ಮಾತ್ರ ಬೆಲೆ ಸಿಗುತ್ತಿದೆ. ಇದರಿಂದ ಶೇಂಗಾ ಬಿತ್ತನೆಗೆ ಖರ್ಚು ಮಾಡಿದ ಹಣವೂ ಬಾರದಂತಾಗಿದೆ.
‘ಹ್ವಾದ ಬಾರಿ ಭಾಳ ಛೋಲೋ ಬೆಳಿ ಬಂದಿತ್ತು. ಈ ಸರ್ತಿ ಬೆಳಿನೂ ಇಲ್ಲ. ರೇಟು ಇಲ್ಲದ್ಹಂಗ ಆಗೇತಿ. ನಮಗ ಕೆನಾಲ್ ನೀರ ಗತಿರಿ. ಆದ್ರ ಈ ವರ್ಷನೂ ಕೆನಾಲಿಗೆ ನೀರ ಬಂದಿಲ್ಲ. ಶೇಂಗಾ ಕಾಳ ಕಟ್ಟೋವಾದ ನೀರ ಇಲ್ಲದ್ಹಂಗ ಆತು. ಅದಕ್ಕ ರೇಟು ಛೋಲೋ ಸಿಗವಾಲ್ತು. ಇನ್ನೇನ ಮಾಡುದು ಅಂತ ತಿಳಿದ್ಹಂಗ ಆಗೇತಿ ನೋಡ್ರಿ’ ಎನ್ನುತ್ತಾರೆ ಉಳ್ಳೆಸುಗೂರು ಗ್ರಾಮದ ರೈತ ಬಲದೇವ.
ಲಕ್ಷ ಕ್ವಿಂಟಲ್ ಆವಕ: ಯಾದಗಿರಿ ಎಪಿಎಂಸಿಗೆ ಈ ವರೆಗೆ ಒಂದು ಲಕ್ಷ ಕ್ವಿಂಟಲ್ ಶೇಂಗಾ ಆವಕವಾಗಿದೆ. ಶಹಾಪುರ ಮತ್ತು ಸುರಪುರ ಮಾರುಕಟ್ಟೆಯಲ್ಲಿ ಉತ್ತಮ ಆವಕ ಕಂಡು ಬಂದಿದೆ. ಆದರೆ ಶೇಂಗಾದ ಗುಣಮಟ್ಟ ಇಲ್ಲದೇ ಇರುವುದು ಬೆಲೆ ಕುಸಿತಕ್ಕೂ ಕಾರಣವಾಗಿದೆ.
ಶೇಂಗಾಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ಮಾಡಿದ ಮನವಿಗೆ ಸ್ಪಂದಿಸಿದ ಸರ್ಕಾರ, ಕರ್ನಾಟಕ ಎಣ್ಣೆ ಬೀಜ ನಿಗಮದ ಮೂಲಕ ಶೇಂಗಾ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ₨ 4 ಸಾವಿರ ಬೆಲೆಯಲ್ಲಿ ಶೇಂಗಾ ಖರೀದಿಸಲಾಗುತ್ತಿದೆ. ಆದರೆ ಎಣ್ಣೆ ಬೀಜ ನಿಗಮವು ನಿಗದಿಪಡಿಸಿದ ಗುಣಮಟ್ಟದ ಶೇಂಗಾ ಬೀಜ ಮಾತ್ರ ಸಿಗುತ್ತಿಲ್ಲ. ನಿಗಮದ ಷರತ್ತುಗಳನ್ನು ಪೂರೈಸಲಾಗದೇ ರೈತರು ಅನಿವಾರ್ಯವಾಗಿ ಎಪಿಎಂಸಿಯಲ್ಲಿಯೇ ಸಿಕ್ಕಷ್ಟು ಬೆಲೆಗೆ ಶೇಂಗಾ ಮಾರುವುದು ಅನಿವಾರ್ಯವಾಗಿದೆ.
ಎಣ್ಣೆ ಬೀಜ ನಿಗಮದ ಮೂಲಕ ಶೇಂಗಾ ಖರೀದಿಸಲು ಸರ್ಕಾರ ಮುಂದಾಗಿದೆ. ಆದರೆ ಖರೀದಿಗೆ ಇಟ್ಟಿರುವ ಷರತ್ತುಗಳನ್ನು ಪೂರೈಸುವುದು ರೈತರಿಂದ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೈತರೂ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದ್ದಾರೆ.
‘ಖರೀದಿ ಕೇಂದ್ರದಲ್ಲಿ ನಿಯಮಗಳನ್ನು ಸಡಿಲಿಸಿ ಶೇಂಗಾ ಖರೀದಿಸಬೇಕು. ಇಲ್ಲದಿದ್ದರೆ, ರೈತರು ಬೆಳೆದ ಶೇಂಗಾಕ್ಕೆ ಉತ್ತಮ ಬೆಲೆ ಸಿಗದೇ ಸಾಲದ ಶೂಲದಲ್ಲಿ ಮುಂದುವರಿಬೇಕಾಗುತ್ತದೆ. ಕೂಡಲೇ ಶೇಂಗಾಕ್ಕೆ ಉತ್ತಮ ಬೆಲೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.