ಹುಮನಾಬಾದ್ ಕ್ಷೇತ್ರದ ಮಟ್ಟಿಗೆ ನಾನೇ ಸಿ.ಎಂ: ಶಾಸಕ ರಾಜಶೇಖರ ಪಾಟೀಲ
ಹುಮನಾಬಾದ್: ಈ ಕ್ಷೇತ್ರದಲ್ಲಿ ಕೈಗೊಳ್ಳಲ್ಪಡುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳ ಕುರಿತು ತೀರ್ಮಾನ ಕೈಗೊಳ್ಳುವಂತಹ ಶಾಸನ ಬದ್ಧ ಹಕ್ಕು ಸಂವಿಧಾನ ನನಗೆ ಕೊಟ್ಟಿದೆ. ಈ ಕ್ಷೇತ್ರದ ಮಟ್ಟಿಗೆ ನಾನೇ ಸಿ.ಎಂ ಇಲ್ಲಿ ಬೇರೆ ಯಾವುದೇ ವ್ಯಕ್ತಿ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಕನಕಟ್ಟಾ ಗ್ರಾಮದಲ್ಲಿ ನಿರ್ಮಿಸಲಾದ ಪ್ರೌಢಶಾಲೆ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ ಪೂರ್ಣಗೊಂಡ ಮೊದಲಾದವುಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
1.55ಕೋಟಿ ಮೊತ್ತದಲ್ಲಿ ವಿವಿಧ ಸಮೂದಾಯ ಭವನ, ಹದಗೆಟ್ಟ ಮಾಣಿಕನಗರ- ಕನಕಟ್ಟಾ ವರೆಗಿನ 5.5ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನ ಸಾಧ್ಯವಾದಷ್ಟು ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, 66ವರ್ಷ ಗತಿಸುತ್ತಿರುವ ಈ ಸಂದರ್ಭದಲ್ಲಿ ಈ ಹಿಂದೆಂದೂ ಕನಕಟ್ಟಾ ಒಂದೇ ಗ್ರಾಮಕ್ಕೆ 195ಮನೆ ಈವರೆಗಿನ ಯಾವುದೇ ಚುನಾಯಿತ ಪ್ರತಿನಿಧಿಗಳು ನೀಡಿರಲಿಲ್ಲ. ತನ್ಮೂಲಕವಾಗಿ ಐತಿಹಾಸಿಕ ಸಾಧನೆ ಗೈದಿದ್ದಾಗಿ ತಿಳಿಸಿದರು.
ಕನಕಟ್ಟಾ ಗ್ರಾಮ ಈ ಹಿಂದೆ ಹುಲಸೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತಿದ್ದರೂ ಕೂಡಾ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಅವರ ನಿಧಿಯಿಂದ ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುದಾನ ನೀಡಲಾಗಿದೆ. ಸರ್ಕಾರದ ಅನುದಾನ ಬಳಕೆ ವಿಷಯದಲ್ಲಿ ಪಕ್ಷಾತೀತ ನಿರ್ಧಾರ ತೆಗೆದುಕೊಳ್ಳುವುದು ನನ್ನ ಜಾಯಮಾನ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮಸ್ಥರು ಶಾಸಕ ರಾಜಶೇಖರ ಪಾಟೀಲ ಅವರನ್ನು ಮುಖ್ಯ ಬೀದಿಗಳ ಮೂಲಕ ಭವ್ಯ ಮೆರವಣಿಗೆಯಲ್ಲಿ ಕೊಂಡಿಯ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮರತನ್ ಶಕುನಾ, ಗ್ರಾಮದ ಗಣ್ಯರಾದ ಝೆರೆಪ್ಪ ಮಣಗಿರೆ, ಶಿವರಾಜ ಕುಂದನ್, ಪ್ರಕಾಶ ಸೋನಕೇರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೀರ್ ಅನೀಸ್ ಅಹ್ಮದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಆರ್.ಬಸಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಾಬುಮಿಯ್ಯ, ಜಿಲ್ಲಾ ಪಂಚಾಯಿತಿ ಎಇಇ ಸಿ.ಎಸ್.ಪಾಟೀಲ, ಭೂಸೇನಾ ನಿಗಮ ಎಇಇ ಬಿ.ಎಸ್.ಪಾಟೀಲ ಮೊದಲಾದವರು ಇದ್ದರು. ವೀರಂತರೆಡ್ಡಿ ಜಂಪಾ ನಿರೂಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.