ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಅಂಗವಾಗಿ ನಾಡಿನ ಹಿರಿಯ ಸಾಹಿತಿಗಳು, ನಾಡು ನುಡಿಗಾಗಿ ಜೀವನವನ್ನು ಮುಡಿಪಾಗಿಟ್ಟ ಸಾಧಕರು ಸೇರಿದಂತೆ 10 ಮಂದಿ ಗಣ್ಯರನ್ನು ಸನ್ಮಾನಿಸಲಾಗುವುದು.
90 ವರ್ಷ ದಾಟಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮವು ಡಿಸೆಂಬರ್ 20ರಂದು ರತ್ನಾಕರವರ್ಣಿ ವೇದಿಕೆಯಲ್ಲಿ ನೆರವೇರಲಿದೆ.
ಖ್ಯಾತ ನಿಘಂಟು ತಜ್ಞ ಜಿ. ವೆಂಕಟಸುಬ್ಬಯ್ಯ, ಹಿರಿಯ ಸಾಹಿತಿಗಳಾದ ದೇ. ಜವರೇಗೌಡ, ಕಯ್ಯಾರ ಕಿಂಞಣ್ಣ ರೈ, ಚನ್ನವೀರ ಕಣವಿ, ಹಿರಿಯ ಪತ್ರಕರ್ತ, ಪಾಟೀಲ ಪುಟ್ಟಪ್ಪ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಹಾಗೂ 117 ವರುಷ ವಯಸ್ಸಿನ ಪಂಡಿತ ಸುಧಾಕರ ಚತುರ್ವೇದಿ, ಸಾಲುಮರದ ತಿಮ್ಮಕ್ಕ, ಹಿರಿಯ ಯಕ್ಷಗಾನ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ ಅವರು ಈ ವಿಶೇಷ ಗೌರವ ಸನ್ಮಾನ ಪಡೆಯುವರು. ಸನ್ಮಾನವು ಪ್ರಶಸ್ತಿ ಹಾಗೂ ₨ 50,000ದ ಗೌರವ ಸಂಭಾವನೆಯನ್ನು ಹೊಂದಿದೆ.
ರಜಾ ಸೌಲಭ್ಯ
ಮಂಗಳೂರು: ಮೂಡುಬಿದಿರೆಯಲ್ಲಿ ಇದೇ 19ರಿಂದ 22ರರೆಗೆ ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯದ ಎಲ್ಲ ಪ್ರಾಥಮಿಕ–ಪ್ರೌಢ ಶಾಲಾ ಶಿಕ್ಷಕರು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಎಲ್ಲ ವಿಶ್ವವಿದ್ಯಾನಿಲಯಗಳ ಉಪನ್ಯಾಸಕರಿಗೆ ಆಯಾ ಇಲಾಖಾ ಮುಖ್ಯಸ್ಥರು ಅನ್ಯ ಕಾರ್ಯನಿಮಿತ್ತ (ಒಒಡಿ) ರಜಾ ಸೌಲಭ್ಯ ಮಂಜೂರು ಮಾಡಿರುವುದಾಗಿ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.