ಹುಬ್ಬಳ್ಳಿ: ಅಂದಾಜು 100 ಗ್ರಾಂ ಚಿನ್ನಾಭರಣವಿದ್ದ ಸೂಟ್ಕೇಸ್ ಕಳುವಾದ ಘಟನೆ ಹಳೆ ಬಸ್ನಿಲ್ದಾಣ ಎದುರಿನ ಅಯೋಧ್ಯಾ ಹೋಟೆಲ್ ಹತ್ತಿರ ಕಳೆದ ತಿಂಗಳು ನಡೆದಿದೆ.
ಬೆಳಗಾವಿಯ ನಾಗರಾಜ ಗಣಪತಿ ಶೇಟ್ ಸೂಟ್ಕೇಸ್ ಕಳೆದುಕೊಂಡ ವರು. ತಮ್ಮ ಸೂಟ್ಕೇಸ್ನೊಂದಿಗೆ ಮೇ 14ರಂದು ಅಯೋಧ್ಯಾ ಹೋಟೆಲ್ ಬಳಿ ನಿಂತಿದ್ದ ಅವರ ಹತ್ತಿರ ಬಂದವನೊಬ್ಬ ಬಟ್ಟೆಗಳಿಗೆ ಗಲೀಜು ಹತ್ತಿದೆ ಎಂದು ನಂಬಿಸಿದ. ಹೋಟೆಲ್ ಒಳಗೆ ಹೋಗಿ ತೊಳೆದುಕೊಳ್ಳಿ ಎಂದೂ ಸಲಹೆ ನೀಡಿದ. ನಂತರ ಅವರ ಹಿಂದೆಯೇ ಹೋದ. ಹೋಟೆಲಿನಲ್ಲಿ ಸೂಟ್ಕೇಸ್ ಇಟ್ಟು ಬಟ್ಟೆ ಮೇಲಿನ ಗಲೀಜು ತೊಳೆದುಕೊಂಡ ಶೇಟ್ ಅವರಿಗೆ ನಂತರ ತಮ್ಮ ಸೂಟ್ಕೇಸ್ ಕಾಣೆಯಾಗಿರುವುದು ಗಮನಕ್ಕೆ ಬಂತು. ಈ ಸಂಬಂಧ ಅವರು ಉಪನಗರ ಠಾಣೆಗೆ ಸೋಮವಾರ ದೂರು ದಾಖಲಿಸಿದ್ದಾರೆ.
ಎಚ್ಚರವಿರಲು ಸೂಚನೆ: `ಅಪರಿಚಿತರು ಬಂದು ನಿಮ್ಮ ಬಟ್ಟೆಗಳ ಮೇಲೆ ಗಲೀಜು ಬಿದ್ದಿದೆ ಅಥವಾ ನಿಮ್ಮ ವಸ್ತುಗಳ ಮೇಲೆ ಏನೋ ಗಲೀಜಾಗಿದೆ ಎಂದು ಹೇಳಿದರೆ ಸಾರ್ವಜನಿಕರು ನಂಬಬೇಡಿ~ ಎಂದು ಡಿಸಿಪಿ ಎನ್.ಆರ್. ಚಂದಿರಾಂ ಸಿಂಗ್ ಕೋರಿದ್ದಾರೆ.
`ನಗರದ ಹಳೆ ಬಸ್ನಿಲ್ದಾಣ, ಹೊಸ ಬಸ್ನಿಲ್ದಾಣ ಹಾಗೂ ರೈಲು ನಿಲ್ದಾಣದ ಬಳಿ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಅಪರಿಚಿತರು ಬಂದು ಮಾತಾಡಿಸಿದರೆ ಅಥವಾ ಏನಾದರೂ ನೆಪದಲ್ಲಿ ಗಮನವನ್ನು ಬೇರೆಡೆ ಸೆಳೆಯುವರನ್ನು ದೂರವಿಡಿ~ ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಆರೋಪಿ ಬಂಧನ: ಮನೆ ಬಿಡಿಸುವ ಸಂಬಂಧ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಗೋಪನಕೊಪ್ಪದ ದೇವೇಂದ್ರಪ್ಪ ಬಳ್ಳಾರಿ ಎಂಬಾತನನ್ನು ಘಂಟಿಕೇರಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ವ್ಯಾಪ್ತಿಯ ಕೆಇಬಿ ಗ್ರಿಡ್ ಹತ್ತಿರ ಶಾಂತರಾಜ ರಡ್ಡಿ ಅವರಿಗೆ ಕಣ್ಣಿಗೆ ಖಾರದ ಪುಡಿ ಎರಚಿ 16 ವರ್ಷಗಳಿಂದ ದೇವೇಂದ್ರಪ್ಪ ಪರಾರಿಯಾಗಿದ್ದ. ಈ ಸಂಬಂಧ ಘಂಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.