ಭಾನುವಾರ, ಮಾರ್ಚ್ 26, 2023
31 °C
ಫಿಲಿಪ್ಪೀನ್ಸ್‌ನಲ್ಲಿ ‘ಹೈಯಾನ್‌’ ಚಂಡಮಾರುತ ಹಾವಳಿ

1200ಕ್ಕೂ ಹೆಚ್ಚು ಸಾವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1200ಕ್ಕೂ ಹೆಚ್ಚು ಸಾವು?

ಮನಿಲಾ (ಎಪಿ): ಭೀಕರ ‘ಹೈಯಾನ್‌’ ಚಂಡಮಾರುತದಿಂದಾಗಿ ಫಿಲಿಪ್ಪೀನ್ಸ­ನಲ್ಲಿ ಸುಮಾರು 1,200ಕ್ಕೂ ಹೆಚ್ಚು ಜನರು ಮೃತಪಟ್ಟಿರ­ಬಹುದು ಎಂದು ರೆಡ್‌ಕ್ರಾಸ್‌ ಸಂಸ್ಥೆಯ ಸ್ಥಳೀಯ ಪ್ರತಿನಿಧಿಗಳು ಹೇಳಿದ್ದಾರೆ. ಆದರೆ ಇವರು ಸತ್ತವರ ಸಂಖ್ಯೆಯ ಖಚಿತ ಮಾಹಿ­ತಿಯನ್ನು­ ಒದಗಿಸಿಲ್ಲ.



ಆದರೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಡ್ವರ್ಡೊ ಡೆಲ್‌ ರೊಸಾರಿಯೊ ಅವರ ಪ್ರಕಾರ; ಕನಿಷ್ಠ 138 ಮಂದಿ ಸತ್ತಿದ್ದಾರೆ ಮತ್ತು 40 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.



ಈ ಮಧ್ಯೆ, ಈವರೆಗಿನ ದಾಖಲೆ­ಯಲ್ಲಿ ಇರುವುದಕ್ಕಿಂತ ಅತಿ ಉಗ್ರ ಚಂಡ­ಮಾರುತ ‘ಹೈಯಾನ್‌’ ಅಪ್ಪಳಿಸಿದ್ದರಿಂದ ಫಿಲಿಪ್ಪೀನ್ಸ್‌ನ ಲೆಯಟೆ ದ್ವೀಪದ ಟಕ್ಲೊ­ಬಾನ್‌ ನಗರದಲ್ಲಿ ನೂರಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ನಗರದ ವಿವಿಧ ರಸ್ತೆ ಗಳಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ನಾಗ­ರಿಕ ವಿಮಾನ ಯಾನ ಸಂಸ್ಥೆಯ ಉಪ ಮಹಾ ನಿರ್ದೇಶಕ ಕ್ಯಾಪ್ಟನ್‌ ಜಾನ್‌ ಅಂಡ್ರ್ಯೂ ತಿಳಿಸಿದ್ದಾರೆ.  ವಿದ್ಯುತ್‌ ಮತ್ತು ದೂರ­ವಾಣಿ ಸಂಪರ್ಕ ಸಂಪೂರ್ಣವಾಗಿ ಕುಸಿ­ದಿದೆ ಎಂದಿದ್ದಾರೆ.



ಗಂಟೆಗೆ 235 ಕಿ.ಮೀ. ವೇಗದ ಗಾಳಿ­ಯೊಂದಿಗೆ ಕಡಲತೀರಕ್ಕೆ ಅಪ್ಪಳಿಸಿದ   ‘ಹೈಯಾನ್‌’ ಭಾರಿ ಪ್ರಮಾಣದ ಹಾನಿ­ ಉಂಟು ಮಾಡಿದೆ. ಗಾಳಿ ವೇಗ­ವನ್ನು ಪರಿಗಣನೆಗೆ ತೆಗೆದು­ಕೊಂಡಾಗ ಇದುವರೆಗಿನ ಎಲ್ಲಾ ಚಂಡ­ಮಾರುತಕ್ಕಿಂತ ‘ಹೈಯಾನ್‌’ ಭೀಕರ­ವಾಗಿದೆ ಎಂದು ಹವಾಮಾನ ಇಲಾ­ಖೆ ಮೂಲಗಳು ತಿಳಿಸಿವೆ.



ಶುಕ್ರವಾರ ಬೆಳಗಿನ ಜಾವ ಚಂಡ­ಮಾರುತ ಅಪ್ಪಳಿಸಿ ಸಾವು– ನೋವು­ಗಳು ಉಂಟಾಗಿದ್ದರೂ ಸಂಪರ್ಕ ಕಡಿತ­ದಿಂದಾಗ ಸ್ಪಷ್ಟ ಮಾಹಿತಿ ದೊರಕಿರಲಿಲ್ಲ. ನಾಲ್ವರು ಸತ್ತ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿತ್ತು ಎಂದು ಆಡ್ರ್ಯೂ ತಿಳಿಸಿದ್ದಾರೆ.



ಚಂಡಮಾರುತ ಅಪ್ಪಳಿಸಿದ ರಭಸಕ್ಕೆ ಮನೆ ಮೇಲ್ಛಾವಣಿಗಳು ಹಾರಿ ಹೋಗಿವೆ, ಅನೇಕ ಮನೆಗಳು ನೆಲಸಮ­ವಾಗಿವೆ, ಅಲ್ಲಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿದುಹೋಗಿದೆ ಎಂದು ಲೆಯಟೆ ದ್ವೀಪದ ಗವರ್ನರ್‌ ರೊಜರ್‌ ಮೆರ್ಕ್ಯಾಡೊ ತಿಳಿಸಿದ್ದಾರೆ.  ಇಡೀ ದಿನ ದಟ್ಟವಾದ ಕಪ್ಪು ಮೋಡ ಆವರಿಸಿ ಭಾರಿ ಪ್ರಮಾಣದಲ್ಲಿ ಮಳೆ ಸುರಿ­ದಿದ್ದರಿಂದ ಹಗಲಿನಲ್ಲೂ ಕತ್ತಲೆ ಆವ­­ರಿಸಿತ್ತು ಎಂದು ಹೇಳಿದ್ದಾರೆ.



ವಿಯೆಟ್ನಾಂನಲ್ಲೂ ಜನರ ಸ್ಥಳಾಂತರ

ಹನಾಯ್‌ (ಎಎಫ್‌ಪಿ):
ಫಿಲಿ ಪ್ಪೀನ್ಸ್‌ ಕಡಲ­ತೀರಕ್ಕೆ ಅಪ್ಪಳಿಸಿದ ಹೈಯಾನ್‌ ಚಂಡಮಾರುತವು ನಂತರ ವಿಯೆ­ಟ್ನಾಂ ಕಡಲತೀರದ ಕಡೆಗೆ ಸಾಗುತ್ತಿದೆ.

ಇದ­ರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಯೆ­ಟ್ನಾಂ ಸರ್ಕಾರವು ಕಡಲ ತೀರದ ಪಟ್ಟಣ ಮತ್ತು ಗ್ರಾಮಗಳ ಸುಮಾರು ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳ­ಗಳಿಗೆ ಸ್ಥಳಾಂತರಿಸಿದೆ.



ಭಾನುವಾರ ಬೆಳಗಿನ ಜಾವ ಕೇಂದ್ರ ವಿಯೆಟ್ನಾಂನ ಕಡಲತೀರಕ್ಕೆ ಚಂಡ­ಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದನಾಂಗ್‌ ಮತ್ತು ಕ್ವಾಂಗ್‌ ಗಾಯಿ ಪ್ರಾಂತ್ಯದ ಜನ­ರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸು­ತ್ತಿದ್ದಾರೆ. ಚಂಡ ಮಾರುತ ಹಾನಿ­ಯನ್ನು ಎದುರಿಸಲು ಸರ್ಕಾರ ಸಕಲ ಸಿದ್ಧತೆ­ಗಳನ್ನು ಮಾಡಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.